ಸಾರಾಂಶ
ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವ ಪಕ್ಷದ ವಕ್ತಾರೆ ರಾಧಿಕಾ ಖೇರಾ ಬಿಜೆಪಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಛತ್ತೀಸಗಢ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ಹರಿಹಾಯ್ದಿದ್ದಾರೆ.
ರಾಯ್ಪುರ: ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವ ಪಕ್ಷದ ವಕ್ತಾರೆ ರಾಧಿಕಾ ಖೇರಾ ಬಿಜೆಪಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಛತ್ತೀಸಗಢ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ಹರಿಹಾಯ್ದಿದ್ದಾರೆ.
ಛತ್ತೀಸಗಢ ಕಾಂಗ್ರೆಸ್ನ ರಾಜ್ಯ ಘಟಕ ಕಚೇರಿಯಲ್ಲಿ ಪಕ್ಷದ ನಾಯಕ ಸುಶೀಲ್ ಆನಂದ್ ಶುಕ್ಲಾ ಜೊತೆಗಿನ ಜಗಳದ ಬೆನ್ನಲ್ಲೇ, ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ಖೇರ ರಾ ರಾಜೀನಾಮೆ ನೀಡಿದ್ದರು ಹಾಗೂ ಅಯೋಧ್ಯೆಗೆ ತೆರಳಲು ಪಕ್ಷ ಅನುಮತಿಸಿರಲಿಲ್ಲ ಎಂದು ಕಿಡಿಕಾರಿದ್ದರು,
ಈ ಬಗ್ಗೆ ಮಾತನಾಡಿದ ಬೈಜ್, ‘ರಾಧಿಕಾ ಖೇರಾ ರಾಜೀನಾಮೆ ಪೂರ್ವ ನಿಯೋಜಿತ ರಾಜಕೀಯ ಸಂಚು. ಪಕ್ಷದಿಂದ ಹೊರ ಹೋಗುವ ಮುನ್ನ ಉದ್ದೇಶಪೂರ್ವಕವಾಗಿ ಈ ರೀತಿಯ ಆರೋಪಗಳನ್ನು ಮಾಡಿ ಹೋಗಿದ್ದಾರೆ. ಅವರು ಬಿಜೆಪಿಯ ಭಾಷೆ ಮಾತನಾಡುತ್ತಿದ್ದಾರೆ. ಇದು ಪಕ್ಷದೊಳಗಿನ ವಿಚಾರ. ನಮ್ಮೊಳಗೆ ಸರಿಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಧರ್ಮ ಮತ್ತು ದೇವಸ್ಥಾನದ ವಿಚಾರ ತರುವುದು ಸರಿಯಲ್ಲ’ ಎಂದರು.