ಸಾರಾಂಶ
ಮೈಸೂರು : ಸರ್ಕಾರದ ಬೇಜವಾಬ್ದಾರಿ ತನದಿಂದ ಸಂಭ್ರಮಾಚರಣೆ ಶೋಕಾಚರಣೆ ಆಯಿತು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬರೀ ಒರಟು ವ್ಯಕ್ತಿ ಅಂದುಕೊಂಡಿದ್ದೆ. ನೀವು ಸಂವೇದನೆ ಇಲ್ಲದ ನಿರ್ಭಾವಕ ಮನುಷ್ಯ ಎಂಬುದು ನಿನ್ನೆ ಗೊತ್ತಾಯಿತು. ಸಿದ್ದರಾಮಯ್ಯ ನಿರ್ಭಾವುಕ ನಿರ್ಲಜ್ಜ ವ್ಯಕ್ತಿ. ಸಿಎಂ ಮೊಮ್ಮಗ, ಸಚಿವರು, ಅಧಿಕಾರಿಗಳ ಮಕ್ಕಳ ಫೋಟೋಗ್ರಾಫ್, ಆಟೋಗ್ರಾಫ್ ಗಾಗಿ ವಿಧಾನಸೌಧದ ಮುಂದೆ ಕಾರ್ಯಕ್ರಮ ನಡೆಯಿತು ಎಂದು ವಾಗ್ದಾಳಿ ನಡೆಸಿದರು.
ಯುಪಿ ಸಿಎಂ ಯೋಗಿ ಅದಿತ್ಯನಾಥ್ ಅವರಿಗೆ ಭದ್ರತೆಯ ಪಾಠ ಮಾಡಿದ್ದ ಸಂತೋಷ್ ಲಾಡ್, ಪ್ರಿಯಾಂಕ ಖರ್ಗೆ ಈಗ ಎಲ್ಲಿ ಹೋದ್ರು?, ಯುಪಿ ಸಿಎಂ 60 ಕೋಟಿ ಜನರನ್ನು ಸಂಭಾಳಿಸಿದ್ದಾರೆ. ನೀವು 60 ಸಾವಿರ ಜನರನ್ನು ಸಂಭಾಳಿಸಲು ಆಗಲಿಲ್ಲ. ಕಾಂಗ್ರೆಸ್ ಗೆ ದರಿದ್ರ ಬಂದಿದೆ. ಆರ್ ಸಿಬಿ ಗೆಲುವಲ್ಲಿ ಪ್ರಚಾರ ಪಡೆಯಲು ಜನರನ್ನು ಬಲಿ ಕೊಟ್ಟಿತು ಎಂದು ಆರೋಪಿಸಿದರು.
ಡಿಸಿಎಂ ಶಾಲು, ಗ್ಲಾಸ್ ಹಾಕಿ ಕೊಂಡು ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು. ಅದನ್ನು ಬಿಟ್ಟು ಯಾವ ತಯಾರಿಯೂ ನಡೆದಿರಲಿಲ್ಲ. ವಿರಾಟ್ ಕೋಹ್ಲಿ ಫೋನ್ ಮಾಡಿ ಇವತ್ತೆ ಬಂದು ಬಿಡ್ತಿನಿ ಪ್ರೋಗ್ರಾಂ ಮಾಡಿ ಅಂದಿದ್ರಾ? ನಿಮಗೆ ಮರು ದಿನವೇ ಕಾರ್ಯಕ್ರಮ ಮಾಡುವ ಒತ್ತಡ ಏನಿತು ಹೇಳಿ ಎಂದು ಪ್ರಶ್ನಿಸಿದರು.
ರೋಡ್ ಶೋ ಮಾಡಿದ್ದರೆ ಲಕ್ಷಾಂತರ ಜನ ನೋಡುತ್ತಿದ್ದರು. ಸರ್ಕಾರಕ್ಕೆ ಮಿನಿಮಮ್ ಕಾಮನ್ ಸೆನ್ಸ್ ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಜಮೀರ್ ಮಗ, ರಿಜ್ವಾನ್ ಮಗ, ಮುಖ್ಯ ಕಾರ್ಯದರ್ಶಿ ಮಗಳು, ಸಿಎಂ ಮೊಮ್ಮಗನಿಗಾಗಿ ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡಿದ್ರಾ? ಆಂಧ್ರದಲ್ಲಿ ನಟ ಅಲ್ಲು ಅರ್ಜುನ್ ನನ್ನು ಕಾಲ್ತುಳಿತ ಪ್ರಕರಣದಲೇ ಅರೆಸ್ಟ್ ಮಾಡಿದ್ರು. ಈಗ ಇಲ್ಲಿ ಸಿಎಂ ಅರೆಸ್ಟ್ ಆಗುತ್ತರಾ? ಡಿಸಿಎಂ ಅರೆಸ್ಟ್ ಆಗುತ್ತರಾ? ಗೃಹ ಮಂತ್ರಿ ತಲೆ ದಂಡ ಆಗುತ್ತಾ? ಯಾರು ಇದಕ್ಕೆ ಹೊಣೆ ಹೇಳಿ ಎಂದು ಅವರು ಕಿಡಿಕಾರಿದರು.
ತಿಪ್ಪೆ ಸಾರಿಸಲು ತನಿಖೆಗೆ ಆದೇಶ ಮಾಡಲಾಗಿದೆ. ಇದರಿಂದ ಯಾವ ಪ್ರಯೋಜನ ಇಲ್ಲ. ಕರ್ನಾಟಕ ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಅವರು ದೂರಿದರು.