ಕೋಲಾರ - ಜಿಲ್ಲಾಡಳಿತ ವ್ಯವಸ್ಥೆ ಕುಸಿತ: ಜೆಡಿಎಸ್‌ ಆರೋಪ

| Published : May 27 2024, 01:02 AM IST / Updated: May 27 2024, 04:19 AM IST

ಸಾರಾಂಶ

ಪಶು ಆಹಾರಗಳಾದ ಬೂಸ, ಚಕ್ಕೆ, ಒಕ್ಕೂಟದಿಂದ ನೀಡುವ ಪೌಷ್ಟಿಕ ಆಹಾರ ಬೆಲೆ ಏರಿಕೆಯಾಗುತ್ತಲೆ ಇದೆ, ಇದರ ನಿಯಂತ್ರಣ ಇಲಾಖಾಧಿಕಾರಿಗಳಿಗೆ ಬರುವುದಿಲ್ಲ ಎಂದು ಹೇಳುತ್ತಾರೆ, ಸರ್ಕಾರ ವ್ಯಾಪಾರಸ್ಥರ ಪರವಾಗಿ ನಿಂತಿದೆ.

  ಕೋಲಾರ : ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದು, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಅಸಡ್ಡೆ ತೋರುತ್ತಿದ್ದಾರೆ. ಇದರ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಸಹ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮತ್ತು ತಾಲೂಕು ಅಧ್ಯಕ್ಷ ಬಾಬು ಮೌನಿ ಆರೋಪಿಸಿದರು.

ನಗರದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅ‍ವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಜಿಲ್ಲೆಯನ್ನು ಕಡೆಗಣಿಸಿಕೊಂಡು ಬಂದಿದೆ ಎಂದು ದೂರಿದರು.ಅಧಿಕಾರಿಗಳಿಂದ ಕಡೆಗಣನೆ

ಹಿಂದೆಂದೂ ಕಾಣದ ರೀತಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿತ್ತು, ಇತ್ತೀಚೆಗೆ ಜಿಲ್ಲೆಯ ಕೆಲವು ಕಡೆ ಮಳೆ ಬಂದು ಬೆಳೆ ಹಾನಿಯಾಗಿದೆ. ಇದರ ಬಗ್ಗೆ ಜಿಲ್ಲಾಡಳಿತ, ಕಾಂಗ್ರೆಸ್ ಶಾಸಕರು, ಸಚಿವರು ರೈತರ ಕಷ್ಟ ಸುಖ ವಿಚಾರಿಸಿಲ್ಲ. ಅದೇ ಸಂದರ್ಭದಲ್ಲಿ ಪ್ರಕಟವಾದ ಚುನಾವಣೆಯ ನೀತಿ ಸಂಹಿತೆ ನೆಪದಲ್ಲಿ ಸಮಸ್ಯೆಗಳತ್ತ ಗಮನಹರಿಸಲಿಲ್ಲ ಎಂದರು.

ಬರಗಾಲದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಎದುರಾಗಿತ್ತು. ಜನಪ್ರತಿನಿಧಿಗಳು ಸಮಸ್ಯೆಯತ್ತ ಗಮನ ಹರಿಸಲಿಲ್ಲ, ಜಿಲ್ಲೆಯನ್ನು ಸರ್ಕಾರ ಯಾಕೆ ಕಡೆಗಣಿಸುತ್ತಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲೆಯ ಕಾಂಗ್ರೆಸ್ ಶಾಸಕರು ಉತ್ತರ ನೀಡಬೇಕು, ಜಿಲ್ಲೆಯ ಪರವಾಗಿ ಧ್ವನಿ ಎತ್ತುವ ಶಕ್ತಿ ಶಾಸಕರಿಗೆ ಇಲ್ಲವೆ ಎಂದು ಪ್ರಶ್ನಿಸಿದರು.ಸರ್ಕಾರ ವ್ಯಾಪಾರಿಗಳ ಪರ

ಪಶು ಆಹಾರಗಳಾದ ಬೂಸ, ಚಕ್ಕೆ, ಒಕ್ಕೂಟದಿಂದ ನೀಡುವ ಪೌಷ್ಟಿಕ ಆಹಾರ ಬೆಲೆ ಏರಿಕೆಯಾಗುತ್ತಲೆ ಇದೆ, ಇದರ ನಿಯಂತ್ರಣ ಇಲಾಖಾಧಿಕಾರಿಗಳಿಗೆ ಬರುವುದಿಲ್ಲ ಎಂದು ಹೇಳುತ್ತಾರೆ, ಸರ್ಕಾರ ವ್ಯಾಪಾರಸ್ಥರ ಪರವಾಗಿ ನಿಂತಿದೆ. ಪ್ರತಿ ಲೀಟರ್‌ಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು 7 ತಿಂಗಳಿಂದ ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಬೇಕಾಯಿತು. ಪ್ರೋತ್ಸಾಹಧನ ಬಿಡುಗಡೆಯಲ್ಲೂ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.ಸರ್ಕಾರವನ್ನು ನಿರ್ವಹಿಸಲು ಸಾಧ್ಯವಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪೆನ್‌ಡ್ರೈವ್ ವಿಚಾರವನ್ನು ಮುಂದಿಟ್ಟುಕೊಂಡು ಜೆಡಿಎಸ್‌ನ್ನು ಮುಗಿಸುವ ಹಗಲು ಕನಸ್ಸು ಕಾಣುತ್ತಿದ್ದಾರೆ. ಇದು ಅವರ ಭ್ರಮೆಯಷ್ಟೆ, ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ವಿಳಾಸ ಹುಡುಕಬೇಕಾಗುತ್ತದೆ ಎಂದು ಬಾಬು ಮೌನಿ ವ್ಯಂಗ್ಯವಾಡಿದರು.ಜನತೆ ತಿರಸ್ಕರಿಸಿದ ಪಕ್ಷ ಕಾಂಗ್ರೆಸ್‌

ರಾಜ್ಯದಲ್ಲಿ ಜೆಡಿಎಸ್-ಬೈಜೆಪಿ ಮೈತ್ರಿಯನ್ನು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ, ಇದರಿಂದಲೇ ಜನರನ್ನು ದಿಕ್ಕು ತಪ್ಪಿಸಲು ಸಚಿವ ಸಂಪುಟದ ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ, ರಾಜ್ಯದ ಜನತೆ ಬುದ್ಧವಂತರಿದ್ದು ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದಾರೆ ಎಂಬುದು ಫಲಿತಾಂಶದಲ್ಲಿ ಸ್ಪಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂಬುದಕ್ಕೆ ಹಲವಾರು ನಿದರ್ಶನಗಳು ಇವೆ. ಇದರಿಂದಾಗಿ ಜನಸ ಬೇಸತ್ತಿದ್ದಾರೆ, ಬೆಂಗಳೂರಿನಲ್ಲಿ ರಾಮೇಶ್ವರಂನಲ್ಲಿ ಬಾಂಬ್ ಸ್ಫೋಟ, ಹುಬ್ಬಳಿಯಲ್ಲಿ ಕೊಲೆ ಪ್ರಕರಣ, ಉಡುಪಿಯಲ್ಲಿ ಶನಿವಾರ ನಡೆದ ಗ್ಯಾಂಗ್‌ವಾರ್ ಪ್ರಕರಣಗಳಿಗೆ ಸಾಕ್ಷಿಗಳು ಕಣ್ಣಮುಂದಿದೆ ಇದೆ. ಸರ್ಕಾರ ಏನೇ ಮಾಡಿದರು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವುದರಿಂದ ಕಿಡಿಗೇಡಿಗಳು ಕೃತ್ಯಗಳನ್ನು ಎಸಗಿದ್ದಾರೆ. ಇದಕ್ಕೆ ಸರ್ಕಾರವೆ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.ಶಿಕ್ಷಕ ಮತದಾರರ ಸಮಾವೇಶ

ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರ ಸಮಾವೇಶವನ್ನು, ನಗರದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಬೆಳಗ್ಗೆ 11.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಬಾಬು ಮೌನಿ ಹೇಳಿದರು.ಸಮಾವೇಶಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣಸ್ವಾಮಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಂಸದರಾದ ಪಿ.ಸಿ. ಮೋಹನ್, ಎಸ್.ಮುನಿಸ್ವಾಮಿ, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಮತ್ತಿತರರು ಪಾಲ್ಗೊಳ್ಳಿದ್ದಾರೆ ಎಂದರು.