ಗುವಾಹಟಿ: ಚುನಾವಣೆಗೆ ಸಜ್ಜಾಗುತ್ತಿರುವ ಅಸ್ಸಾಂನಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತವಾಗಿದೆ. 2021-25ರ ಅವಧಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಭೂಪೇನ್‌ ಬೊಹ್ರಾ, 36 ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದ ತಮ್ಮನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಪಕ್ಷದ ಭವಿಷ್ಯ ಕಳವಳಕಾರಿಯಾಗಿದೆ ಎಂದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪಕ್ಷದ ಹಾಲಿ ರಾಜ್ಯಾದ್ಯಕ್ಷ ಗೌರವ್‌ ಗೊಗೋಯ್‌ ಜೊತೆಗಿನ ಭಿನ್ನಾಭಿಪ್ರಾಯ

ಪಕ್ಷದ ಹಾಲಿ ರಾಜ್ಯಾದ್ಯಕ್ಷ ಗೌರವ್‌ ಗೊಗೋಯ್‌ ಜೊತೆಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಅವರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಕ್ಷದ ರಾಜೀನಾಮೆ ತಿರಸ್ಕರಿಸಿರುವುದಾಗಿ ಹೇಳಿದೆ. ಅಲ್ಲದೆ ಬೊಹ್ರಾ ರಾಜೀನಾಮೆ ಹಿಂದಕ್ಕೆ ಪಡೆದುಕೊಂಡಿರುವುದಾಗಿ ಹೇಳಿದೆ. ಮತ್ತೊಂದೆಡೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ, ಬೊಹ್ರಾ ಜೊತೆಗೆ ಮಾತುಕತೆ ನಡೆಸಿ ಓಲೈಕೆ ಯತ್ನ ಮಾಡಿದ್ದಾರೆ. ಆದರೆ ರಾಜೀನಾಮೆ ಇನ್ನೂ ಹಿಂದಕ್ಕೆ ಪಡೆದಿಲ್ಲ ಮಂಗಳವಾರ ಬೆಳಗ್ಗೆ ಈ ಕುರಿತು ನಿರ್ಧಾರ ಪ್ರಕಟಿಸುವುದಾಗಿ ಭೂಪೇನ್‌ ಹೇಳಿದ್ದಾರೆ.

ಭೂಪೇನ್‌ ಬಿಜೆಪಿಗೆ ಸೇರಲು ಬಂದರೆ ಅವರಿಗೆ ಮುಕ್ತ ಆಹ್ವಾನ

ಈ ನಡುವೆ ಭೂಪೇನ್‌ ಬಿಜೆಪಿಗೆ ಸೇರಲು ಬಂದರೆ ಅವರಿಗೆ ಮುಕ್ತ ಆಹ್ವಾನವಿದೆ. ಅವರನ್ನು ಸುರಕ್ಷಿತ ಸ್ಥಾನದಿಂದ ವಿಧಾನಸಭೆಗೆ ಆಯ್ಕೆ ಮಾಡುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆಹ್ವಾನ ನೀಡಿದ್ದಾರೆ.