ಕಾಂಗ್ರೆಸ್‌ ಜಗಳ ಬಿಜೆಪಿಗೆ ಲಾಭ: ಸದಾನಂದ ಗೌಡ

| Published : Apr 18 2024, 02:20 AM IST / Updated: Apr 18 2024, 04:49 AM IST

ಸಾರಾಂಶ

ದೇಶದ ಉದ್ದಗಲಕ್ಕೂ ಮೋದಿ ಅವರ ನಾಯಕತ್ವದ ಮೇಲೆ ನಂಬಿಕೆ ಇನ್ನಷ್ಟು ಹೆಚ್ಚಿದೆ. ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ. ನಮ್ಮದೇನಿದ್ದರೂ ಗೆಲುವಿನ ಅಂತರವನ್ನು ಹೆಚ್ಚಿಸಲು ಶ್ರಮಿಸಬೇಕಿದೆ. ಹಾಗಂತ ರಾಜಕರಾಣದಲ್ಲಿ ಗೆದ್ದಿದ್ದೇವೆಂದು ಮೈ ಮರೆಯಬಾರದು

 ಶಿಡ್ಲಘಟ್ಟ :  ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಣಗಳ ಗುಂಪುಗಾರಿಕೆ ಹೆಚ್ಚಿದ್ದು ಅದು ನಮ್ಮ ಮೈತ್ರಿ ಅಭ್ಯರ್ಥಿಯ ಗೆಲುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಲಿದೆ, ಆದರೂ ನಾವು ಗೆದ್ದಿದ್ದೇವೆ ಎನ್ನುವ ಭ್ರಮೆ ಬಿಟ್ಟು ಎಲ್ಲರೂ ಮನೆ ಮನೆಗೂ ಕೇಂದ್ರ ಬಿಜೆಪಿ ಪಕ್ಷದ ಸಾಧನೆ, ಮೋದಿ ಅವರ ನಾಯಕತ್ವದ ಬಗ್ಗೆ ಮನವರಿಕೆ ಮಾಡಿಕೊಡಬೇಕೆಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ತಿಳಿಸಿದರು. 

ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ಚಿಂತಾಮಣಿ ತಾಲೂಕಿನ ಸೀಕಲ್ ನಿವಾಸದಲ್ಲಿ ಕೋಲಾರ ಸಂಸತ್ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರೊಂದಿಗೆ ಮೈತ್ರಿ ಪಕ್ಷದ ಮುಖಂಡರ ಸಭೆ ನಡೆಸಿ ಗೆಲುವಿಗೆ ರೂಪಿಸಬೇಕಾದ ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.ಮೈತ್ರಿ ಅಭ್ಯರ್ಥಿ ಗೆಲ್ಲುವ ವಿಶ್ವಾಸ

ದೇಶದ ಉದ್ದಗಲಕ್ಕೂ ಮೋದಿ ಅವರ ನಾಯಕತ್ವದ ಮೇಲೆ ನಂಬಿಕೆ ಇನ್ನಷ್ಟು ಹೆಚ್ಚಿದೆ. ನಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತ. ನಮ್ಮದೇನಿದ್ದರೂ ಗೆಲುವಿನ ಅಂತರವನ್ನು ಹೆಚ್ಚಿಸಲು ಶ್ರಮಿಸಬೇಕಿದೆ. ಹಾಗಂತ ರಾಜಕರಾಣದಲ್ಲಿ ಗೆದ್ದಿದ್ದೇವೆಂದು ಮೈ ಮರೆಯಬಾರದು ಎಂದರು. 

ಕೋಲಾರದಲ್ಲಿ ಘಟಬಂಧನ್ ಹಾಗೂ ಕೆ.ಎಚ್.ಮುನಿಯಪ್ಪ ಬಣಗಳ ನಡುವಿನ ಮುಸುಕಿನ ಗುದ್ದಾಟ ನಮಗೆ ನೆರವಾಗಲಿದೆ. ಅದಕ್ಕೂ ಮಿಗಿಲಾಗಿ ನಮ್ಮ ಪಕ್ಷದ ಸಾಧನೆ ಮತ್ತು ಮೋದಿ ಅವರ ವರ್ಚಸ್ಸು ನಮ್ಮ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.ಮತದಾನಕ್ಕೆ ಉಳಿದ 8 ದಿನಗಳಲ್ಲಿ ರೂಪಿಸಬೇಕಾದ ತಂತ್ರಗಾರಿಕೆಗಳ ಬಗ್ಗೆ ಚರ್ಚಿಸಲಾಯಿತು. ಸಂಸದ ಎಸ್.ಮುನಿಸ್ವಾಮಿ, ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು , ಎಮ್ಮೆಲ್ಸಿ ತಮ್ಮೇಗೌಡ, ಚಿಂತಾಮಣಿಯ ಬಿಜೆಪಿ ಮುಖಂಡ ವೇಣು, ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ದೇವಿ ಇನ್ನಿತರರು ಹಾಜರಿದ್ದರು.