ದಿಲ್ಲೀಲೇ ಎಂಎಲ್ಸಿ ಅಭ್ಯರ್ಥಿಗಳ ಆಯ್ಕೆ ಮುಗಿಸಲು ಕಾಂಗ್ರೆಸ್‌ ತಂತ್ರ

| Published : May 25 2024, 01:36 AM IST / Updated: May 25 2024, 04:11 AM IST

ದಿಲ್ಲೀಲೇ ಎಂಎಲ್ಸಿ ಅಭ್ಯರ್ಥಿಗಳ ಆಯ್ಕೆ ಮುಗಿಸಲು ಕಾಂಗ್ರೆಸ್‌ ತಂತ್ರ
Share this Article
  • FB
  • TW
  • Linkdin
  • Email

ಸಾರಾಂಶ

  ವಿಧಾನಪರಿಷತ್ತಿನ ಚುನಾವಣೆಗೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಸಮ್ಮುಖದಲ್ಲೇ ಅರ್ಹರ ಆಯ್ಕೆ ಮಾಡಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೇ 28 ಅಥವಾ 29ರಂದು ದೆಹಲಿಗೆ ತೆರಳಲಿದ್ದಾರೆ.

 ಬೆಂಗಳೂರು :  ವಿಧಾನ ಸಭೆಯಿಂದ ವಿಧಾನಪರಿಷತ್ತಿನ ಚುನಾವಣೆಗೆ ಕಣಕ್ಕಿಳಿಯಲು ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಸಮ್ಮುಖದಲ್ಲೇ ಅರ್ಹರ ಆಯ್ಕೆ ಮಾಡಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೇ 28 ಅಥವಾ 29ರಂದು ದೆಹಲಿಗೆ ತೆರಳಲಿದ್ದಾರೆ.

ಜೂ.13ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಥಾನ ಬಲದ ಆಧಾರದ ಮೇಲೆ ಕಾಂಗ್ರೆಸ್‌ ಪಕ್ಷ ಏಳು ಮಂದಿಯನ್ನು ಆಯ್ಕೆ ಮಾಡಲು ಅವಕಾಶವಿದೆ. ಆದರೆ, ಆಕಾಂಕ್ಷಿಗಳ ಸಂಖ್ಯೆ ಮಾತ್ರ ಹಲವು ಡಜನ್‌ ದಾಟಿದೆ.

ನಿತ್ಯ ಹತ್ತಾರು ಮಂದಿ ಆಕಾಂಕ್ಷಿಗಳು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತೀವ್ರ ಒತ್ತಡ ನಿರ್ಮಾಣ ಮಾಡತೊಡಗಿದ್ದಾರೆ. ಹೀಗಾಗಿ, ಅರ್ಹರ ಆಯ್ಕೆ ತಲೆನೋವಾಗಿ ಪರಿಣಮಿಸಿರುವುದರಿಂದ ದೆಹಲಿಗೆ ತೆರಳಿ ಅಲ್ಲಿಯೇ ಹೈಕಮಾಂಡ್‌ ಸಮ್ಮುಖದಲ್ಲಿ ಅರ್ಹರ ಆಯ್ಕೆ ಮಾಡಲು ಉಭಯ ನಾಯಕರು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ನಡುವೆ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಅವರು ಮೇ 27ರ ತಡರಾತ್ರಿ ಅಥವಾ 28ಕ್ಕೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. ಆದರೆ, ಸುರ್ಜೇವಾಲಾ ಆಗಮಿಸುವುದು ಉತ್ತರ ಭಾರತದಲ್ಲಿ ನಡೆದಿರುವ ಕೊನೆಯ ಹಂತದ ಚುನಾವಣೆ (ಮೇ 25)ರ ನಂತರ ತೀರ್ಮಾನವಾಗಲಿದೆ.

ಒಂದು ವೇಳೆ ಅವರು ಪೂರ್ವ ನಿರ್ಧರಿಸಿದಂತೆ ಮೇ 27 ಅಥವಾ 28ಕ್ಕೆ ಆಗಮಿಸಿದರೂ ಅವರ ನೇತೃತ್ವದಲ್ಲಿ ಪೂರ್ವ ಭಾವಿಯಾಗಿ ಒಂದು ಸಭೆ ನಡೆಯುತ್ತದೆಯೇ ಹೊರತು ಯಾವುದೇ ನಿರ್ಧಾರವಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮೇ 28 ಅಥವಾ 29 ರಂದು ದೆಹಲಿಗೆ ತೆರಳಿ ಹೈಕಮಾಂಡ್‌ನೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕೆಲ ಷರತ್ತುಗಳನ್ನು ವಿಧಿಸುವ ಸಾಧ್ಯತೆ!

ವಿಧಾನಸಭೆಯಿಂದ ವಿಧಾನಪರಿಷತ್ತಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿರುವುದರಿಂದ ಜೊಳ್ಳು ಕಾಳುಗಳನ್ನು ಜರಡಿ ಹಿಡಿಯಲು ಕೆಲ ಷರತ್ತುಗಳನ್ನು ವಿಧಿಸುವ ದಿಸೆಯಲ್ಲಿ ಕಾಂಗ್ರೆಸ್‌ ನಾಯಕತ್ವ ಚಿಂತಿಸುತ್ತಿದೆ.

ಒಂದು ಮೂಲದ ಪ್ರಕಾರ ಕಾಂಗ್ರೆಸ್‌ ಆಯ್ಕೆ ಮಾಡಲು ಅವಕಾಶವಿರುವ ಏಳು ಸ್ಥಾನಗಳಿಗೆ ಸುಮಾರು 75 ಆಕಾಂಕ್ಷಿಗಳಿದ್ದಾರೆ. ಈ ಸಂಖ್ಯೆಯನ್ನು ಕೆಲ ಷರತ್ತುಗಳನ್ನು ರೂಪಿಸಿಕೊಂಡು ಕಡಿಮೆ ಮಾಡುವ ಉದ್ದೇಶ ನಾಯಕತ್ವದ್ದು.

ಈ ಪೈಕಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾದವರಿಗೆ ವಿಧಾನಪರಿಷತ್ತಿಗೆ ಅವಕಾಶ ನೀಡಬಾರದು ಎಂಬುದು ಸೇರಿದಂತೆ. ಪಕ್ಷ ಅಧಿಕಾರದಲ್ಲಿ ಇರುವುದರಿಂದ ಹಲವಾರು ಮಂದಿ ಪರಾಜಿತ ಅಭ್ಯರ್ಥಿಗಳು ವಿಧಾನಪರಿಷತ್ತಿಗೆ ತಮ್ಮನ್ನು ಆಯ್ಕೆ ಮಾಡುವಂತೆ ತೀವ್ರ ಒತ್ತಡ ನಿರ್ಮಾಣ ಮಾಡುತ್ತಿದೆ. ಇಂತಹವರ ಸಂಖ್ಯೆ 15ಕ್ಕಿಂತ ಹೆಚ್ಚಿದೆ. ಹೀಗಾಗಿ ಈ ಷರತ್ತು ವಿಧಿಸುವ ಚಿಂತನೆ ನಡೆದಿದೆ ಎನ್ನುತ್ತವೆ ಮೂಲಗಳು. ಇದಲ್ಲದೆ, ಪಕ್ಷದ ಸ್ಥಾನ ಹೊಂದಿರುವವರು, ಇತ್ತೀಚೆಗಷ್ಟೇ ಪಕ್ಷ ಸೇರ್ಪಡೆಯಾದವರು ಸೇರಿದಂತೆ ಹಲವು ಷರತ್ತು ವಿಧಿಸುವ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಯತೀಂದ್ರ ಎಂಎಲ್ಸಿ ಮಾಡುತ್ತೇವೆ ಅಂತ ವರಿಷ್ಠರು ಹೇಳಿದ್ದರು

  ಮೈಸೂರು: ಹೈಕಮಾಂಡ್‌ನವರು ಯತೀಂದ್ರನಿಗೆ ಎಂಎಲ್ಸಿ ಮಾಡ್ತೀವಿ ಎಂದು ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆ ಭರವಸೆ ಕೊಟ್ಟಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಡಾ.ಯತೀಂದ್ರ ಸಿದ್ದರಾಮಯ್ಯಗೆ ವಿಧಾನಪರಿಷತ್ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಕಳೆದ ವಿಧಾನಸಭಾ ಚುನಾವಣೆ ವೇಳೆ ನಾನು ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೆ. ಆದರೆ, ಹೈಕಮಾಂಡ್‌, ಕೋಲಾರ ಬೇಡ, ವರುಣದಿಂದ ಸ್ಪರ್ಧೆ ಮಾಡಿ ಎಂದು ಸೂಚನೆ ನೀಡಿತು. ಆಗ ಯತೀಂದ್ರ ಹಾಲಿ ಎಂಎಲ್ಎ ಆಗಿದ್ದರು. ಹೈಕಮಾಂಡ್ ಆಗ ಯತೀಂದ್ರಗೆ ಸೀಟು ಬಿಟ್ಟು ಕೊಡಿ, ಮುಂದೆ ನಿಮ್ಮನ್ನು ಎಂಎಲ್ಸಿ ಮಾಡ್ತೇವೆ ಎಂದು ಹೇಳಿತ್ತು. ಈಗ ಅವರು ಏನು ಮಾಡ್ತಾರೆ ಅಂತ ಗೊತ್ತಿಲ್ಲ’ ಎಂದು ಹೇಳಿದರು.