ಸಾರಾಂಶ
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ರಾಜಕೀಯ ಅಂಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ), ತನಗೆ ನೀಡಿದ ಚುನಾವಣಾ ಬೆಂಬಲವನ್ನು ಕಾಂಗ್ರೆಸ್ ಗುರುವಾರ ತಿರಸ್ಕರಿಸಿದೆ.
ತಿರುವನಂತಪುರ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ರಾಜಕೀಯ ಅಂಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ), ತನಗೆ ನೀಡಿದ ಚುನಾವಣಾ ಬೆಂಬಲವನ್ನು ಕಾಂಗ್ರೆಸ್ ಗುರುವಾರ ತಿರಸ್ಕರಿಸಿದೆ. ಆದರೆ ಅದರ ಬೆಂಬಲಿಗರು ತನಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಮತ ಹಾಕಿದರೆ ಅದನ್ನು ತಡೆಯಲಾಗದು ಎಂದು ಸ್ಪಷ್ಟಪಡಿಸಿದೆ.
ಲೋಕಸಭೆ ಚುನಾವಣೆಗೆ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಗೆ ಎಸ್ಡಿಪಿಐ ಬುಧವಾರ ಬೆಂಬಲ ಘೋಷಿಸಿತ್ತು. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿತ್ತು.ಈ ಕುರಿತು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಮಾತನಾಡಿ, ಕಾಂಗ್ರೆಸ್ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದವನ್ನು ವಿರೋಧಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಇಚ್ಛೆಗೆ ಅನುಗುಣವಾಗಿ ಮತ ಚಲಾಯಿಸಬಹುದು. ಎಲ್ಲರೂ ಯುಡಿಎಫ್ಗೆ ಮತ ಹಾಕಬೇಕೆಂದು ಬಯಸುತ್ತೇವೆ. ಆದರೆ ಸಂಘಟನೆಗಳ ವಿಷಯದಲ್ಲಿ ಎಸ್ಡಿಪಿಐ ಬೆಂಬಲ ತಿರಸ್ಕರಿಸಿ ನಮ್ಮ ನಿಲುವು ತಿಳಿಸಿದ್ದೇವೆ. ಎಸ್ಡಿಪಿಐ ಜೊತೆ ಯುಡಿಎಫ್ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಅನೇಕ ಪಕ್ಷಗಳು ಬೆಂಬಲ ನೀಡುತ್ತಿವೆ ಎಂದು ಹೇಳಿದರು.ಕೇರಳದಲ್ಲಿ ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ ನಡೆಯಲಿದೆ.