ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಗೋಡಾ ಹೈ, ಮೈದಾನ ಹೈ, ಎಲೆಕ್ಷನ್ ಬಾಕಿ ಹೈ, ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದವರು ಎಷ್ಟು ಸ್ಥಾನ ಗೆಲ್ಲುತ್ತಾರೆ ಎನ್ನುವುದು ತಿಳಿಯುತ್ತದೆ ಎಂದು ಮಾಜಿ ಡಿಸಿಎಂ, ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಪಚುನಾವಣೆಗಳೇ ಬೇರೆ, ಸಾರ್ವತ್ರಿಕ ಚುಣಾವಣೆಯೇ ಬೇರೆ. ಉಪಚುನಾವಣೆ ಕೇವಲ ಬಿಂದಿಗೆಯಲ್ಲಿನ ನೀರು ತೆಗೆದ ಹಾಗೆ. ಸಾರ್ವತ್ರಿಕ ಚುನಾವಣೆ ಸಮುದ್ರದಲ್ಲಿನ ನೀರು ತೆಗೆದ ಹಾಗೆ ಎಂದರು.ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುವ ಅಪೇಕ್ಷೆ ಇದೆ. ಅದಕ್ಕೆ ಪೂರಕವಾಗಿ ಎಲ್ಲ ರೀತಿಯ ಸಿದ್ಧತೆಗಳು ನಡೆಸಿದೆ. ಎಲ್ಲ ಸಮುದಾಯವನ್ನು ನಾವು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಇನ್ನು ಪುತ್ರ ಚಿದಾನಂದ ಸವದಿ ಹೆಸರು ಲೋಕಸಭೆಗೆ ಕೇಳಿ ಬರುತ್ತಿರುವ ಬಗ್ಗೆ ನಮ್ಮಲ್ಲಿ ಅಭ್ಯರ್ಥಿ ಆಯ್ಕೆಗೆ ಸಭೆ ಮತ್ತು ಚರ್ಚೆ ಆಗಿಲ್ಲ. ಎಲ್ಲವೂ ಕೂಡ ಊಹಾಪೋಹಗಳಷ್ಟೇ ಎಂದು ಸ್ಪಷ್ಟಪಡಿಸಿದರು. ಡಿ.4 ರಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತೆ ಚರ್ಚೆ ಆರಂಭಿಸಬೇಕು. 10 ದಿನಗಳ ಕಾಲ ಕಲಾಪದಲ್ಲಿ ಎಲ್ಲ ಶಾಸಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೃಷ್ಣಾ ಮೇಲ್ದಂಡೆ ಹಾಗೂ ಮಹದಾಯಿ ಯೋಜನೆಗಳನ್ನು ಕೈಗೆತ್ತಿಕೊಳ್ಳದ ವಿಚಾರ, ಕೃಷ್ಣಾಮೇಲ್ದಂಡೆ ಮಹದಾಯಿ ರೈತರಿಗೆ ಆಧಾರ ಸ್ಥಂಬವಾದ ಯೋಜನೆಗಳು, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆಯಾದ ಪ್ರದೇಶಗಳಿಗೆ ಪರಿಹಾರ ನೀಡಬೇಕಿದೆ. ಆಲಮಟ್ಟಿ ಜಲಾಶಯ 524ಕ್ಕೆ ಏರಿಕೆ ಮಾಡುವುದು ಹಾಗೂ ಪರಿಹಾರ ನೀಡುವುದು ದೊಡ್ಡ ಸವಾಲಾಗಿದೆ ಎಂದರು.ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಭಟಿಸಿದ್ದರು. ತಾಂತ್ರಿಕ ಸಮಸ್ಯೆಗಳಿಂದ ಈ ಯೋಜನೆ ನಿಂತಿದೆ. ಬೊಮ್ಮಾಯಿ ಜನತಾ ಪರಿವಾರದಲ್ಲಿದ್ದ ವೇಳೆ ಈ ಯೋಜನೆಗಾಗಿ ಹೋರಾಟ ಮಾಡಿದ್ದರು. ಆದರೆ, ಅವರೇ ಮುಖ್ಯಮಂತ್ರಿ ಆಗಿದ್ದರು. ಅವರದ್ದೇ ಕನಸಿನ ಕೂಸಾಗಿತ್ತು. ಗೋವಾ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇತ್ತು. ಆದರೆ, ಅವರು ಆಸಕ್ತಿ ತೋರಿಸಲಿಲ್ಲ. ಸಿ.ಸಿ.ಪಾಟೀಲ ಕೂಡ ಜನತಾ ಪರಿವಾರದಲ್ಲಿದ್ದ ವೇಳೆ ಹೋರಾಟ ಮಾಡಿದ್ದರು. ಆ ಹಳೆಯ ಫೋಟೋಗಳೂ ಸಹ ಇದೆ. ಅವರ ಕಾಲದಲ್ಲಿ ಮಹದಾಯಿ ನೀರಾವರಿ ಯೋಜನೆ ಅನುಷ್ಠಾನವಾಗಬೇಕಿತ್ತು. ಉದಾಸೀನ ಮಾಡಿದರೋ ಮತ್ತಿನೇನೂ ಕಾರಣ ಇದೆಯೋ ಗೊತ್ತಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಆ ಬಗ್ಗೆ ಧ್ವನಿ ಎತ್ತುತ್ತಾರೆ ಎಂಬುವುದನ್ನು ಕಾಯ್ದುನೋಡಬೇಕು ಎಂದು ತಿಳಿಸಿದರು.