ಸಾರಾಂಶ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಜೀವನ ಬರೀ ಹಿಟ್ ಆ್ಯಂಡ್ ರನ್ ಮಾಡುವುದೇ ಆಗಿದೆ. ಕಸ ವಿಲೇವಾರಿ ಟೆಂಡರ್ ವಿಚಾರವಾಗಿ ಅವರು ಬೀದಿಯಲ್ಲಿ ಮಾತನಾಡುವ ಬದಲು ಮಾಧ್ಯಮಗಳಲ್ಲಿ ಚರ್ಚೆಗೆ ಬರಲಿ ಅಥವಾ ಅವರ ಶಾಸಕರಿಂದ ಸದನದಲ್ಲಿ ಚರ್ಚೆ ಮಾಡಿಸಲಿ ಡಿ.ಕೆ.ಶಿವಕುಮಾರ್ ಸವಾಲು
ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಜೀವನ ಬರೀ ಹಿಟ್ ಆ್ಯಂಡ್ ರನ್ ಮಾಡುವುದೇ ಆಗಿದೆ. ಕಸ ವಿಲೇವಾರಿ ಟೆಂಡರ್ ವಿಚಾರವಾಗಿ ಅವರು ಬೀದಿಯಲ್ಲಿ ಮಾತನಾಡುವ ಬದಲು ಮಾಧ್ಯಮಗಳಲ್ಲಿ ಚರ್ಚೆಗೆ ಬರಲಿ ಅಥವಾ ಅವರ ಶಾಸಕರಿಂದ ಸದನದಲ್ಲಿ ಚರ್ಚೆ ಮಾಡಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಕಸ ವಿಲೇವಾರಿ ಟೆಂಡರ್ನಲ್ಲಿ 15 ಸಾವಿರ ಕೋಟಿ ರು. ಲಂಚ ಪಡೆಯಲಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಹತಾಶೆಯಲ್ಲಿದ್ದಾರೆ. 15 ಸಾವಿರ ಕೋಟಿ ರು. ಲಂಚದ ವಿಚಾರವಾಗಿ ಬಹಿರಂಗ ಚರ್ಚೆಗೆ ಬರಲಿ. ಅವರಂತೆ ನಾನು ಹಿಟ್ ಆ್ಯಂಡ್ ರನ್ ಮಾಡುವುದಿಲ್ಲ ಎಂದರು.
ಕಸದ ಲಾರಿ ಓಡಿಸುತ್ತಿದ್ದವರು ಅವರು. ಅವರ ಪಕ್ಷದ ಶಾಸಕರಿಗೆ ಅಕ್ರಮದ ಕುರಿತ ದಾಖಲೆಯನ್ನು ನೀಡಿ ಸದನದಲ್ಲಿ ಚರ್ಚೆ ಮಾಡಿಸಲಿ. ಕಿಂಗ್ ಆಫ್ ಕರಪ್ಷನ್ ಎಂದು ಜನರು ನನ್ನನ್ನು ಅಥವಾ ನನ್ನ ಕುಟುಂಬದವರನ್ನು ಕರೆದಿಲ್ಲ. ಆ ರೀತಿ ಯಾರನ್ನು ಕರೆದಿದ್ದಾರೆ ಎಂದೂ ಸಹ ಚರ್ಚೆಗೆ ಬರಲಿ ಹೇಳುತ್ತೇನೆ. ಚರ್ಚೆಗೆ ಬಂದರೆ ಅವರ ಚರಿತ್ರೆಯನ್ನು ತೆಗೆಯುತ್ತೇನೆ. ಎಲ್ಲವೂ ದಾಖಲೆಯಲ್ಲಿ ಉಳಿಯಲಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕರು ಸದನದ ಹೊರಗೆ ಹೋರಾಟ ಮಾಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಬಿಜೆಪಿ ಅವರು ಸದನದ ಹೊರಗೆ ಏತಕ್ಕೆ ಹೋರಾಟ ಮಾಡುತ್ತಿದ್ದಾರೆ? ಸದನದ ಒಳಗೇ ಹೋರಾಟ ಮಾಡಲಿ. ಅವರು ಏನು ಹೇಳಬೇಕೋ ಸದನದ ಒಳಗೆ ಹೇಳಲಿ. ನಾವು ಏನು ಉತ್ತರ ಕೊಡಬೇಕೋ ಅದನ್ನು ಕೊಡುತ್ತೇವೆ. ನಮಗೂ ಅವರ ಬಗ್ಗೆ ತಿಳಿದಿದೆ. ಎಲ್ಲವನ್ನೂ ಒಂದೊಂದಾಗಿ ಬಿಚ್ಚಿಡುತ್ತೇವೆ ಎಂದರು.
ಬಿಜೆಪಿ ಭ್ರಷ್ಟಾಚಾರದ ತಂದೆ:
ಮುಡಾ ನಿವೇಶನ ಹಂಚಿಕೆ ಹಗರಣ ಸೇರಿದಂತೆ ಹಲವು ಹಗರಣಗಳು ಬಿಜೆಪಿ ಕಾಲದಲ್ಲೇ ನಡೆದಿದೆ. ಬಿಜೆಪಿ ಭ್ರಷ್ಟಾಚಾರದ ತಂದೆಯಿದ್ದಂತೆ. ಅವರ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರದ ಸರಮಾಲೆಯೇ ನಡೆದಿದೆ. ಭ್ರಷ್ಟಾಚಾರರಹಿತ ಆಡಳಿತ ಮತ್ತು ಆಡಳಿತ ಶುದ್ಧೀಕರಣ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅದನ್ನು ನೋಡಿ ವಿಪಕ್ಷದವರು ಮೈ ಪರಚಿಕೊಳ್ಳುತ್ತಿದ್ದಾರೆ. ಅವರು ಹಣ್ಣನ್ನು ತಿಂದು ಸಿಪ್ಪೆಯನ್ನು ನಮ್ಮ ಮೇಲೆ ಎಸೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನು ಬೇಕಾದರೂ ಹೇಳಲಿ. ಸಂಸತ್ನಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ. ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮುಡಾ ಹಗರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಬಿಜೆಪಿ ಆಗ್ರಹಿಸಿರುವ ಬಗ್ಗೆ ಉತ್ತರಿಸಿ, ವಿರೋಧ ಪಕ್ಷಗಳು ಹೇಳಿದಂತೆಲ್ಲ ಕೇಳಲಾಗುತ್ತದೆಯೇ? ಜನರು ನಮಗೆ ಅಧಿಕಾರ ನೀಡಿದ್ದಾರೆ. ನಾವು ರಾಜ್ಯಕ್ಕೆ ಏನು ಒಳ್ಳೆಯದನ್ನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.