ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾದಾವರ- ತುಮಕೂರು ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ವಿಧಾನಸೌಧದಲ್ಲಿ ಮಾದವಾರ-ತುಮಕೂರು ಮೆಟ್ರೋ ರೈಲು ಯೋಜನೆಯ ಡಿಪಿಆರ್ ವರದಿಯನ್ನು ಸ್ವೀಕರಿಸಿದ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಘೋಷಣೆಯಂತೆ ಹೈದರಾಬಾದ್ ಮೂಲದ ಕಂಪನಿಗೆ 3.5 ಕೋಟಿ ರು. ವೆಚ್ಚದಲ್ಲಿ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಜವಾಬ್ದಾರಿ ನೀಡಲಾಗಿತ್ತು. ಆ ವರದಿಯಲ್ಲಿ ಯೋಜನೆ ಜಾರಿ ಸಾಧ್ಯ ಎಂದು ಶಿಫಾರಸು ಮಾಡಲಾಗಿತ್ತು. ಅದರ ಬೆನ್ನಲ್ಲೇ ಮೆಟ್ರೋ ಅಧಿಕಾರಿಗಳು ಟೆಂಡರ್ ಕರೆದು ಡಿಪಿಆರ್ ಸಿದ್ಧಪಡಿಸುವ ಕೆಲಸ ವಹಿಸಿದ್ದರು. ಈಗ ಆ ಕಂಪನಿಯು ಡಿಪಿಆರ್ ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದೆ ಎಂದರು.

ಸುಮಾರು 20 ಸಾವಿರ ಕೋಟಿ ರು. ವೆಚ್ಚದ ಈ ಬೃಹತ್ ಮೆಟ್ರೋ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ(ಪಿಪಿಪಿ) ಮಾದರಿಯಲ್ಲಿ ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಸಂಪುಟ ಸಭೆಯ ಅನುಮೋದನೆ ಸಿಕ್ಕ ತಕ್ಷಣ ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದರು.

ನಿಯಮದ ಪ್ರಕಾರ ಕ್ರಮ:


ಬಕ್ರೀದ್ ಕುರ್ಬಾನಿಗೆ‌ ರಕ್ಷಣೆ ಕೋರಿ ವಕ್ಫ್ ಪರಿಷತ್ ಪತ್ರ ಬರೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆಯನ್ನು ಪೊಲೀಸರು ತೆಗೆದುಕೊಳ್ಳುತ್ತಾರೆ. ನಿಯಮಾವಳಿಗಳ ಪ್ರಕಾರ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ ಎಂದರು.

ಹಾಗೆಯೇ ಲಾಡ್ಲೆ ಮಶಾಕ್‌ ದರ್ಗಾಕ್ಕೆ ಸಂಬಂಧಿಸಿದ ಪ್ರಕರಣ ಹಿಂಪಡೆದಿರುವುದಕ್ಕೆ ವಿರೋಧಿಸುವುದು ಬಿಜೆಪಿಯವರಿಗೆ ಬಿಟ್ಟ ವಿಚಾರ. ಕಾಂಗ್ರೆಸ್ ಸರ್ಕಾರ ಸಂವಿಧಾನದ ತತ್ವಗಳನ್ನು ಪಾಲಿಸುತ್ತಿದೆ. ಸಂವಿಧಾನವು ಎಲ್ಲರನ್ನೂ ಸಮಾನವಾಗಿ ಕಾಣಲು ಹೇಳುತ್ತದೆ. ಹಿಂದುಳಿದ, ಶೋಷಿತ ಮತ್ತು ನಿರ್ಲಕ್ಷಿತ ವರ್ಗಗಳ ಪರವಾಗಿ ಕೆಲಸ ಮಾಡುವುದು ಕಾಂಗ್ರೆಸ್‌ನ ಕರ್ತವ್ಯವಾಗಿದ್ದು, ಅದನ್ನು ನಾವು 1947 ರಿಂದಲೂ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಕಾಕ್ರೋಚ್ ಜನತಾ ಪಾರ್ಟಿ ಬಹಿರಂಗ ಸಭೆ:

ಟೌನ್‌ಹಾಲ್ ಬಳಿ ನಾಳೆ ನಡೆಯಬೇಕಿದ್ದ ಕಾಕ್ರೋಚ್ ಜನತಾ ಪಾರ್ಟಿ ಬಹಿರಂಗ ಸಭೆಗೆ ಪೊಲೀಸ್ ಅನುಮತಿ ನಿರಾಕರಿಸಿರುವ ಕುರಿತು ಮಾತನಾಡಿದ ಅವರು, ಯಾವ ಉದ್ದೇಶಕ್ಕೆ ಸಭೆ ಮಾಡುತ್ತಿದ್ದಾರೆ, ಯಾರೆಲ್ಲ ಬರುತ್ತಾರೆ ಎಂದು ಪೊಲೀಸರು ಪರಿಶೀಲಿಸುತ್ತಾರೆ, ಅನುಮತಿ ಕೊಡುವುದು, ಬಿಡುವುದು ಪೊಲೀಸರಿಗೆ ಬಿಟ್ಟ ವಿಚಾರ. ಎಂದು ಹೇಳಿದರು.

ದರ್ಶನ್ ಆತ್ಮಹತ್ಯೆ ಯತ್ನ ವದಂತಿ:

ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರದ ಬಗ್ಗೆ ಅಧಿಕಾರಿಗಳಿಂದ ಮೌಖಿಕವಾಗಿ ಕೇಳಿದಾಗ, ಅಂತಹ ಘಟನೆ ನಡೆದಿಲ್ಲ ಎಂದರು. ಇದರ ಹೊರತು ಬೇರೆ ವಿಚಾರ ಇಲ್ಲ ಎಂದು ಡಾ. ಪರಮೇಶ್ವರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.