ಸಾರಾಂಶ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎನ್ಡಿಎ ಅಭ್ಯರ್ಥಿ ಡಾ. ಕೆ.ಸುಧಾಕರ್ ಅವರಿಗೆ ದೊಡ್ಡ ಗೆಲುವು ತಂದುಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಗೆ ಮತ್ತು ಜನರಿಗೆ ಮನವಿ ಮಾಡಿದರು. ಈ ಕರೆಯಿಂದಾಗಿ ಕ್ಷೇತ್ರದ ಎಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಉಂಟಾಗಿದೆ.
ಚೊಕ್ಕಹಳ್ಳಿಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶವು ಅತಿ ಹೆಚ್ಚು ಸಂಖ್ಯೆಯ ಜನರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ಹಾಗೂ ಕಾರ್ಯಕರ್ತರು ಬಂದಿದ್ದು, ಡಾ। ಕೆ.ಸುಧಾಕರ್ ಅವರಿಗೆ ದೊರೆತ ಸ್ಪಷ್ಟ ಬೆಂಬಲವನ್ನು ಇದು ಪ್ರತಿಬಿಂಬಿಸಿತ್ತು.
ತಪ್ಪದೆ ಮತದಾನ ಮಾಡಿ
ಚೊಕ್ಕಹಳ್ಳಿಯಲ್ಲಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲರ ಸೋದರ ಸೋದರಿಯರು ಏಪ್ರಿಲ್ 26ರಂದು ಮತದಾನದಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದು ವಿಶೇಷವಾಗಿ ಮನವಿ ಮಾಡುತ್ತೇನೆ. ಚಿಕ್ಕಬಳ್ಳಾಪುರದಿಂದ ಡಾ। ಕೆ.ಸುಧಾಕರ್ ಮತ್ತು ಕೋಲಾರ ಕ್ಷೇತ್ರದಿಂದ ಮಲ್ಲೇಶ್ ಬಾಬು ಅವರಿಗೆ ದೊಡ್ಡ ಗೆಲುವು ತಂದುಕೊಡಬೇಕು. ಕಾರ್ಯಕರ್ತರು ಪ್ರತಿ ಮನೆಮನೆಗೆ ಹೋಗಿ, ಮೋದಿಜಿ ಬಂದಿದ್ದರು ಮತ್ತು ನಿಮ್ಮೆಲ್ಲರಿಗೂ ತಮ್ಮ ನಮಸ್ಕಾರ ತಿಳಿಸಿದ್ದಾರೆ ಎಂದು ಹೇಳಬೇಕು ಎಂದರು.
ಸಂತ ಕೈವಾರ ತಾತಯ್ಯ ಹಾಗೂ ಸರ್ ಎಂ.ವಿಶ್ವೇಶರಯ್ಯನವರ ಈ ಭೂಮಿಯಲ್ಲಿ ಜನರನ್ನು ದರ್ಶನ ಮಾಡಿರುವುದು ನನ್ನ ಸೌಭಾಗ್ಯ. ಚಿಕ್ಕಬಳ್ಳಾಪುರ ಹಾಗೂ ಕೋಲಾರ ‘ಮತ್ತೊಮ್ಮೆ ಮೋದಿ ಸರ್ಕಾರʼ ಎಂಬ ಸಂದೇಶವನ್ನು ಈಗಾಗಲೇ ನೀಡಿದೆ. ನಾನು ನನ್ನ ರಿಪೋರ್ಟ್ ಕಾರ್ಡ್ ಜೊತೆಗೆ ಜನರ ಆಶೀರ್ವಾದ ಕೇಳಲು ಬಂದಿದ್ದೇನೆ. ನಾನು ಜನರನ್ನೇ ನನ್ನ ಕುಟುಂಬ ಎಂದು ನಂಬಿದ್ದೇನೆ. ಜನರಿಗಾಗಿ ಸೇವೆ ಸಲ್ಲಿಸುವಲ್ಲಿ ಯಾವುದೇ ಕೊರತೆ ಮಾಡಿಲ್ಲ. ನಾನು ಯೋಜನೆ ಮಾತ್ರ ನೀಡಿಲ್ಲ, ಗ್ಯಾರಂಟಿ ಕೂಡ ನೀಡಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ 4 ಲಕ್ಷಕ್ಕೂ ಅಧಿಕ ಆಯುಷ್ಮಾನ್ ಕಾರ್ಡ್ ನೀಡಿದ್ದು, ಇನ್ನು 70 ವರ್ಷದ ಮೀರಿದ ಹಿರಿಯ ನಾಗರಿಕರಿಗೂ ₹5 ಲಕ್ಷ ವರೆಗಿನ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ತಿಳಿಸಿದರು.
ಹೆಣ್ಣುಮಕ್ಕಳಿಗೆ ಡ್ರೋಣ್ ಬಳಕೆ ತರಬೇತಿ
ಎನ್ಡಿಎ ಸರ್ಕಾರ ನಮೋ ಡ್ರೋಣ್ ದೀದಿ ಯೋಜನೆಯಡಿ ಹೆಣ್ಣುಮಕ್ಕಳಿಗೆ ಡ್ರೋಣ್ ಬಳಸುವ ತರಬೇತಿ ನೀಡಲಾಗುತ್ತಿದೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಹೆಣ್ಣುಮಕ್ಕಳು ಡ್ರೋಣ್ ತಂತ್ರಜ್ಞಾನ ಬಳಸುವ ದಿನ ದೂರವಿಲ್ಲ. ಶ್ರೀಅನ್ನಕ್ಕೆ ಪ್ರೋತ್ಸಾಹ ನೀಡಿದ್ದು, ಸಿರಿಧಾನ್ಯಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇದರಿಂದ ಚಿಕ್ಕಬಳ್ಳಾಪುರ-ಕೋಲಾರ ಭಾಗದ ರೈತರಿಗೂ ಆದಾಯ ಹೆಚ್ಚಲಿದೆ. ಈ ಭಾಗದಲ್ಲಿ ನೀರಿನ ಸಮಸ್ಯೆ ಪರಿಹರಿಸಲು 150 ಅಮೃತ ಸರೋವರ ರೂಪಿಸಲಾಗಿದೆ. ಈ ಭಾಗದಲ್ಲಿ 2.70 ಲಕ್ಷ ಜನರಿಗೆ ಕೊಳಾಯಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ನಂದಿ ಬೆಟ್ಟವಿದೆ, ತಾಯಿ ಭುವನೇಶ್ವರಿ, ತಾಯಿ ಕೋಲಾರಮ್ಮನ ಅನುಗ್ರಹವೂ ಇದೆ. ಈ ಸ್ಥಳಗಳನ್ನು ನಮ್ಮ ಸರ್ಕಾರ ತೀರ್ಥಕ್ಷೇತ್ರಗಳಾಗಿ, ವೀಕೆಂಡ್ ಗೇಟ್ವೇ ಆಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ದೇವೇಗೌಡರಿಂದ ಮತ ಯಾಚನೆ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಮನಮೋಹನ್ ಸಿಂಗ್ ಸರ್ಕಾರ ಹತ್ತು ವರ್ಷ ದೇಶ ಆಳಿ ಚೊಂಬು ನೀಡಿದೆ. 2ಜಿ ಸೇರಿದಂತೆ ಅನೇಕ ಭ್ರಷ್ಟಾಚಾರ ನಡೆದಿದ್ದು, ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಖಾಲಿ ಚೊಂಬನ್ನು ಜನರಿಗೆ ನೀಡಿದ್ದಾರೆ. ಪಿಳ್ಳಪ್ಪನವರ ಮಗ ಬಿಜೆಪಿಗೆ ಬೆಂಬಲಿಸಲ್ಲ ಎಂದಿದ್ದಾರೆ. ಆದರೆ ಅವರ ತಂದೆಯನ್ನು ಚುನಾವಣೆಯಲ್ಲಿ ಒಂದು ರೂಪಾಯಿ ಖರ್ಚು ಮಾಡದೆ ಗೆಲ್ಲಿಸಿದ್ದು ಇದೇ ದೇವೇಗೌಡ. ನೀವು ನಿಜವಾದ ಕಾರ್ಯಕರ್ತರಾಗಿದ್ದರೆ ನನ್ನ ಆದೇಶದಂತೆ ಡಾ। ಕೆ.ಸುಧಾಕರ್ ಅವರಿಗೆ ಮತ ನೀಡಿ ಎಂದರು.
ಡಾ। ಕೆ.ಸುಧಾಕರ್ ಮತ್ತು ಮಲ್ಲೇಶ್ ಅವರನ್ನು ದೆಹಲಿಗೆ ಕಳುಹಿಸೋಣ. ನಂತರ ಚಿಕ್ಕಬಳ್ಳಾಪುರ ಮತ್ತು ಕೋಲಾರದ ಕುಡಿಯುವ ನೀರಿನ ಬವಣೆ ಬಗೆಹರಿಸಿ ಎಂದು ಕೇಳೋಣ. ಆ ಶಕ್ತಿಯನ್ನು ಜನರು ನೀಡಬೇಕು ಎಂದು ಮನವಿ ಮಾಡಿದರು.ನಂದಿ ವಿಗ್ರಹ ಸಮರ್ಪಣೆ
ಚಿಕ್ಕಬಳ್ಳಾಪುರ ನಂದಿ ಬೆಟ್ಟ ಹಾಗೂ ಭೋಗನಂದೀಶ್ವರ ದೇವಸ್ಥಾನಕ್ಕೆ ಜನಪ್ರಿಯವಾಗಿದೆ. ಶಿವಭಕ್ತರಾದ ನರೇಂದ್ರ ಮೋದಿಯವರಿಗೆ ಅಭ್ಯರ್ಥಿ ಡಾ. ಕೆ.ಸುಧಾಕರ್ ನಂದಿ ವಿಗ್ರಹವನ್ನು ಕೊಡುಗೆಯಾಗಿ ನೀಡಿ ಗೌರವಿಸಿದರು.