ಸಾರಾಂಶ
ಇನ್ನೊಂದು ವಾರದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ (ಜಿಬಿಎ) ಐದು ಪಾಲಿಕೆಗಳು ಅಸ್ತಿತ್ವಕ್ಕೆ ಬರಲಿದೆ. ಈ ವೇಳೆ ಜಿಬಿಎ ಆಡಳಿತಕ್ಕೆ ವೃಂದ ಬಲ, ಮುಂಬಡ್ತಿ, ನೇಮಕಾತಿಗೆ ವಿಧಾನಗಳನ್ನು ರೂಪಿಸುವ ಸಂದರ್ಭದಲ್ಲಿ ಅಧಿಕಾರಿ ಮತ್ತು ನೌಕರರ ಹಿತ ಕಾಪಾಡಬೇಕು.
ಬೆಂಗಳೂರು : ಇನ್ನೊಂದು ವಾರದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ (ಜಿಬಿಎ) ಐದು ಪಾಲಿಕೆಗಳು ಅಸ್ತಿತ್ವಕ್ಕೆ ಬರಲಿದೆ. ಈ ವೇಳೆ ಜಿಬಿಎ ಆಡಳಿತಕ್ಕೆ ವೃಂದ ಬಲ, ಮುಂಬಡ್ತಿ, ನೇಮಕಾತಿಗೆ ವಿಧಾನಗಳನ್ನು ರೂಪಿಸುವ ಸಂದರ್ಭದಲ್ಲಿ ಅಧಿಕಾರಿ ಮತ್ತು ನೌಕರರ ಹಿತ ಕಾಪಾಡಬೇಕು. ಅಧಿಕಾರಿ-ಸಿಬ್ಬಂದಿಯೊಂದಿಗೆ ಸಭೆ ನಡೆಸಬೇಕೆಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಂಘದ ಅಧ್ಯಕ್ಷ ಎ. ಅಮೃತ್ರಾಜ್ ಅವರು ಪತ್ರ ಬರೆದಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿ ಪ್ರತ್ಯೇಕ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) ನಿಯಮಗಳನ್ನು ರಚಿಸುವವರೆಗೂ ಬಿಬಿಎಂಪಿಯ ಸಿ ಆ್ಯಂಡ್ ಆರ್ ನಿಯಮಗಳನ್ನೇ ಮುಂದುವರಿಸಬೇಕು. ಹೊಸ ನಿಯಮಾವಳಿ ರೂಪಿಸುವಾಗ ಪಾಲಿಕೆಯ ನಿಯಮಗಳನ್ನು ಗಣನೆಗೆ ತೆಗೆದುಕೊಂಡು, ನೌಕರರ ಯಾವುದೇ ಸೌಲಭ್ಯಗಳಿಗೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಬೇಕು. ಜಿಬಿಎ ಅಡಿ ಪಾಲಿಕೆಗಳನ್ನು ರಚಿಸಿ, ಎ ಮತ್ತು ಬಿ ದರ್ಜೆಯ ಕೆಲವು ಹುದ್ದೆಗಳಿಗೆ ನೇರ ನೇಮಕ ಮಾಡಿಕೊಂಡರೆ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಹ ಅಧಿಕಾರಿ–ನೌಕರರು ಮುಂಬಡ್ತಿಯಿಂದ ವಂಚಿತರಾಗುತ್ತಾರೆ. ಒಟ್ಟು ಮಂಜೂರಾಗಿರುವ ಹಾಗೂ ಹೆಚ್ಚುವರಿಯಾಗಿ ಮಂಜೂರಾಗುವ ಉಪ ಆಯುಕ್ತರ ಹುದ್ದೆಗಳಲ್ಲಿ ಶೇ. 60ರಷ್ಟನ್ನು ಪಾಲಿಕೆ ಅಧಿಕಾರಿಗಳಿಗೆ, ಶೇ.40ರಷ್ಟನ್ನು ಕೆಎಎಸ್ -ಎಂಎಸ್ ವೃಂದದಿಂದ ಎರವಲು ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಮಾಡಬೇಕು ಎಂದು ಕೋರಿದ್ದಾರೆ.
ಸಹಾಯಕ ಆಯುಕ್ತರ ಎಲ್ಲ ಹುದ್ದೆಗಳನ್ನು ಪಾಲಿಕೆಯ ಅಧಿಕಾರಿಗಳಿಗೆ ಸಂಪೂರ್ಣವಾಗಿ ಮೀಸಲಿಡಬೇಕು. ಕಂದಾಯದ ಹೆಚ್ಚುವರಿ ಆಯುಕ್ತರ ಹುದ್ದೆ ಸೃಷ್ಟಿಸಿ, ಪಾಲಿಕೆಯ ಜಂಟಿ ಆಯುಕ್ತರಿಗೆ ಮುಂಬಡ್ತಿ ನೀಡಲು ಅವಕಾಶ ಕಲ್ಪಿಸಬೇಕು. ಸಹಾಯಕ ಕಂದಾಯ ಅಧಿಕಾರಿ, ಪರಿವೀಕ್ಷಕರ ಹುದ್ದೆಗಳನ್ನು ಈಗಿರುವ ಸಿ ಆ್ಯಂಡ್ ಆರ್ ನಿಯಮಗಳಂತೆ ಮುಂಬಡ್ತಿ ಮೂಲಕ ಭರ್ತಿ ಮಾಡಬೇಕು. ಉಪ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿ ಹಾಗೂ ಸಹಾಯಕ ಆಯುಕ್ತರ ಹುದ್ದೆಗಳು ಒಂದೇ ರೀತಿಯ ಜವಾಬ್ದಾರಿ ಹೊಂದಿದ್ದು, ಡಿಆರ್ಒ, ಎಸಿಆರ್ ಹುದ್ದೆಗಳನ್ನು ಒಂದೇ ವೃಂದಕ್ಕೆ ಒಟ್ಟುಗೂಡಿಸಿ, ಆರ್ಓ ಹುದ್ದೆಗಳನ್ನಾಗಿ ಪರಿವರ್ತಿಸಬೇಕು. ಸಹಾಯಕ ಕಂದಾಯ ಅಧಿಕಾರಿ ವೃಂದಕ್ಕೆ ಮುಂಬಡ್ತಿ ನೀಡಬೇಕು ಎಂದು ಸಂಘದ ಅಧ್ಯಕ್ಷರು ಮನವಿ ಮಾಡಿದ್ದಾರೆ.