ಚುನಾವಣೆ ಬಳಿಕ ರಾಜ್ಯದ ಕಾಂಗ್ರೆಸ್‌ ಸರ್ಕಾರ ಪತನ: ದೇವೇಗೌಡ ಭವಿಷ್ಯ

| Published : Apr 19 2024, 01:32 AM IST / Updated: Apr 19 2024, 04:50 AM IST

ಸಾರಾಂಶ

ಸಂಸತ್ ಚುನಾವಣೆ ಮುಗಿದು ಫಲಿತಾಂಶ ಬಂದ ನಂತರ  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ಇದು ಶತಸಿದ್ಧ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಖಚಿತ ಭವಿಷ್ಯ ನುಡಿದಿದ್ದಾರೆ.

 ಆನೇಕಲ್ :  ಸಂಸತ್ ಚುನಾವಣೆ ಮುಗಿದು ಫಲಿತಾಂಶ ಬಂದ ನಂತರ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ 400 ಪ್ಲಸ್ ಸ್ಥಾನಗಳನ್ನು ಗೆಲ್ಲಲಿದೆ. ಮೋದಿ ಅವರು ಮತ್ತೆ ಪ್ರಧಾನಿ ಆಗಲಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ಇದು ಶತಸಿದ್ಧ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಖಚಿತ ಭವಿಷ್ಯ ನುಡಿದಿದ್ದಾರೆ.

ಅವರು ಆನೇಕಲ್ಲಿನ ಶ್ರೀ ರಾಮ ಕುಟೀರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸಭೆಯಲ್ಲಿ ಸಹಸ್ರಾರು ಜನರನ್ನುದ್ದೇಶಿಸಿ ಮಾತನಾಡಿದ ಅವರು, ಈ ದೇವೇಗೌಡ ಎಂದೂ ಸುಳ್ಳು ಹೇಳಿಲ್ಲ, ಮುಂದೂ ಹೇಳುವುದಿಲ್ಲ. ನಾನು ಬೇಜವಾಬ್ದಾರಿಯಿಂದ ಮಾತನಾಡುತ್ತಿಲ್ಲ. ಆ ಬಗ್ಗೆ ಜನತೆಗೆ ಗೊತ್ತು ಎಂದು ತಮ್ಮದೇ ಧಾಟಿಯಲ್ಲಿ ಮಾತನಾಡಿದ ಗೌಡರು, ಈಗಿರುವ ರಾಜ್ಯ ಸರ್ಕಾರ ಜನರ ಲೂಟಿ ಮಾಡುವ ಸರ್ಕಾರ. ಬಡವರು, ಹಿಂದುಳಿದವರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ದಲಿತರಿಗೆ ಮೀಸಲಾದ ಹಣವನ್ನು ಗ್ಯಾರಂಟಿಗಳಿಗೆ ಬಳಸುತ್ತೀರಾ. ನಾಚಿಕೆಗೇಡು ಎಂದು ಜರಿದರು.

ನನ್ನದು ಮತ್ತು ಮೋದಿ ಅವರದು ಉತ್ತಮ ಬಾಂಧವ್ಯ. ಅದೆಂತದೋ ಇಂಡಿಯಾ ಕೂಟವಂತೆ. ಮೋದಿಗೆ ಎದುರಾಗಿ ನಿಲ್ಲುವ ಒಬ್ಬ ಮುಖಂಡ ಇದ್ದಾನಾ ಹೇಳಲಿ ಎಂದು ವ್ಯಂಗ್ಯವಾಗಿ ಮಮತಾ ಬ್ಯಾನರ್ಜಿ, ಸ್ಟಾಲಿನ್ ಅಥವಾ ಡಿ.ಕೆ.ಶಿವಕುಮಾರ್ ಆಗ್ತಾರಾ ಎಂದಾಗ ಸಭಿಕರೂ ನಕ್ಕು ಮೋದಿ ಕಿ ಜೈ, ಗೌಡಾಜಿಕಿ ಜೈ ಎಂದು ಮುಗಿಲು ಮುಟ್ಟುವಂತೆ ಜಯಕಾರ ಹಾಕಿದರು.

ಗ್ರಾಮಾಂತರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಹೇಳ್ತಾರೇ, ದೇವೇಗೌಡರು ನಮ್ಮ ಮೇಲೆ ಚುನಾವಣೆಗೆ ಬರ್ತಾರಾ ಅಂತಾರೆ. ಏನರ್ಥ ಎಂದು ತಮ್ಮ ನಾಸಿಕವನ್ನು ಒಮ್ಮೆ ಉಜ್ಜಿಕೊಂಡರು.

ಸಹೋದರರು ರಾಜ್ಯವನ್ನು ಲೂಟಿ ಮಾಡಿ ಅಂದಾಜು ₹30,000 ಕೋಟಿ ಹೈಕಮ್ಯಾಂಡ್ ಸೋನಿಯಾಗೆ ಕೊಟ್ಟಿದ್ದಾರೆ. ರಾಜ್ಯದ ಜನರಿಗೆ ಮೋಸ ಮಾಡಿದ ಸರ್ಕಾರ ಬೇಕಾ? ಎಂದಾಗ ಬೇಡಾ ಬೇಡಾ ಎಂಬ ಪ್ರತಿಕ್ರಿಯೆ ಬಂದಿತು.

ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗಿಶ್ವರ್ ಮಾತನಾಡಿದರು.

ವೇದಿಕೆಯಲ್ಲಿ ಕೇಂದ್ರ ಮಂತ್ರಿ ಎ.ನಾರಾಯಣ ಸ್ವಾಮಿ, ಶಾಸಕರಾದ ಡಾ। ಅಶ್ವತ್ ನಾರಾಯಣ, ಗೋಪಿನಾಥ್ ರೆಡ್ಡಿ, ಗೊಟ್ಟಿಗೆರೆ ಮಂಜಣ್ಣ, ಕೆ.ವಿ.ಶಿವಪ್ಪ, ಯಂಗಾರೆಡ್ಡಿ, ಮುನಿರಾಜು ಗೌಡ, ವೆಂಕಟೇಶ್ ಗೌಡ, ಟೀವಿ ಬಾಬು, ಪಟಪಟ ರವಿ, ಬಸವರಾಜು, ಎಸ್.ಆರ್.ಟಿ.ಅಶೋಕ್, ಶಿವಪ್ಪ, ಶಂಕರ್ ಇದ್ದರು.ಚಿತ್ರ ಶೀರ್ಷಿಕೆ: ಆನೇಕಲ್‌ನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮಾತನಾಡಿದರು. ಕೇಂದ್ರ ಮಂತ್ರಿ ನಾರಾಯಣ ಸ್ವಾಮಿ ಇದ್ದರು.