ಭ್ರೂಣ ಹತ್ಯೆ ಪ್ರಕರಣ: ಜಾಗೃತ ಅಧಿಕಾರಿಗಳ ತಂಡ ದಾಳಿ

| Published : Dec 09 2023, 01:15 AM IST

ಸಾರಾಂಶ

ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ತಾಲೂಕು ಜಾಗೃತ ದಳ ಅಧಿಕಾರಿಗಳ ತಂಡ ದಾಳಿ ನಡೆಸಿದ ವೇಳೆ ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ದಾಖಲೆ ಸರಿಯಿಲ್ಲದ ಮತ್ತು ನಿಯಮಾನುಸಾರವಿಲ್ಲದೇ ನಡೆಸುತ್ತಿದ್ದ ಒಂದು ಖಾಸಗಿ ನರ್ಸಿಂಗ್‌ ಹೋಂ ಸೇರಿದಂತೆ ಕ್ಲಿನಿಕ್, ಮೆಡಿಕಲ್ ಸ್ಟೋರ್ ಮತ್ತು ರಕ್ತ ಪರೀಕ್ಷಾ ಕೇಂದ್ರಕ್ಕೆ ಬೀಗಮುದ್ರೆ ಹಾಕಿ ನೋಟಿಸ್ ಜಾರಿ ಮಾಡಿದ್ದಾರೆ.ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳು ಮತ್ತು ರಕ್ತ ಪರೀಕ್ಷಾ ಕೇಂದ್ರಗಳ ತಪಾಸಣೆಯನ್ನು ಚುರುಕುಗೊಳಿಸಿದ್ದಾರೆ.

ಖಾಸಗಿ ನರ್ಸಿಂಗ್ ಹೋಂ, ಮೆಡಿಕಲ್ ಸ್ಟೋರ್ , ರಕ್ತ ಪರೀಕ್ಷಾ ಕೇಂದ್ರಕ್ಕೆ ಬೀಗಮುದ್ರೆ ನೋಟಿಸ್ ಜಾರಿ

ಕನ್ನಡಪ್ರಭ ವಾರ್ತೆ ನಾಗಮಂಗಲ

ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ತಾಲೂಕು ಜಾಗೃತ ದಳ ಅಧಿಕಾರಿಗಳ ತಂಡ ದಾಳಿ ನಡೆಸಿದ ವೇಳೆ ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ದಾಖಲೆ ಸರಿಯಿಲ್ಲದ ಮತ್ತು ನಿಯಮಾನುಸಾರವಿಲ್ಲದೇ ನಡೆಸುತ್ತಿದ್ದ ಒಂದು ಖಾಸಗಿ ನರ್ಸಿಂಗ್‌ ಹೋಂ ಸೇರಿದಂತೆ ಕ್ಲಿನಿಕ್, ಮೆಡಿಕಲ್ ಸ್ಟೋರ್ ಮತ್ತು ರಕ್ತ ಪರೀಕ್ಷಾ ಕೇಂದ್ರಕ್ಕೆ ಬೀಗಮುದ್ರೆ ಹಾಕಿ ನೋಟಿಸ್ ಜಾರಿ ಮಾಡಿದ್ದಾರೆ.

ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳು ಮತ್ತು ರಕ್ತ ಪರೀಕ್ಷಾ ಕೇಂದ್ರಗಳ ತಪಾಸಣೆಯನ್ನು ಚುರುಕುಗೊಳಿಸಿದ್ದಾರೆ.

ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ಶುಕ್ರವಾರ ದಿಢೀರ್ ಕಾರ್ಯಾಚರಣೆ ನಡೆಸಿದ ತಹಸೀಲ್ದಾರ್ ನಯೀಂ ಉನ್ನೀಸಾ ನೇತೃತ್ವದ ಜಾಗೃತ ದಳ ಅಧಿಕಾರಿಗಳ ತಂಡ, ಖಾಸಗಿ ಆಸ್ಪತ್ರೆಗಳು ಕ್ಲಿನಿಕ್‌ಗಳು, ಮೆಡಿಕಲ್ ಶಾಪ್‌ಗಳು ಮತ್ತು ರಕ್ತ ಪರೀಕ್ಷಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಈ ವೇಳೆ ಶ್ರೀ ಲಕ್ಷ್ಮೀವೆಂಕಟೇಶ್ವರ ನರ್ಸಿಂಗ್‌ ಹೋಂ, ಬೆಳ್ಳೂರು ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ, ಶ್ರೀನಿವಾಸ ಕ್ಲೀನಿಕ್ ಮತ್ತು ಶ್ರೀ ರಂಗ ಮೆಡಿಕಲ್ಸ್‌ನಲ್ಲಿ ದಾಖಲೆ ಸರಿಯಿಲ್ಲದೆ ಮತ್ತು ನಿಯಮಾನುಸಾರವಿಲ್ಲದೆ ನಡೆಸುತ್ತಿರುವುದು ಕಂಡುಬಂದಿದೆ.

ಅಲ್ಲದೆ, ಅವಧಿ ಮುಗಿದಿರುವ ಮಾತ್ರೆ ಮತ್ತು ಔಷಧಿಗಳನ್ನು ಮೆಡಿಕಲ್ ಸ್ಟೋರ್ ನಲ್ಲಿ ಮಾರಾಟಕ್ಕಿಟ್ಟಿರುವುದನ್ನೂ ಸಹ ಪತ್ತೆಹಚ್ಚಿರುವ ಅಧಿಕಾರಿಗಳು, ಅಂತಹ ಮಾತ್ರೆ ಔಷಧಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ.

ತಪಾಸಣೆ ವೇಳೆ ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸುವಂತೆ ಅಧಿಕಾರಿಗಳು ಮಾಲೀಕರಿಗೆ ಸೂಚನೆ ನೀಡಿದರಾದರೂ ಅಗತ್ಯ ದಾಖಲಾತಿ ತೋರಿಸುವಲ್ಲಿ ವಿಫಲರಾದ ಮಾಲೀಕರು ದಾಖಲಾತಿ ಮನೆಯಲ್ಲಿದೆ, ಬೇರೆ ಕಡೆ ಇಟ್ಟಿದ್ದೇವೆ ಎಂಬ ಹಾರಿಕೆ ಉತ್ತರ ಹೇಳಲು ಮುಂದಾದರು.

ಮೂಲ ದಾಖಲಾತಿಗಳನ್ನು ಹಾಜರುಪಡಿಸಲು ಕಾಲಾವಕಾಶ ನೀಡಿದ ಅಧಿಕಾರಿಗಳು ಅಲ್ಲಿಯವರೆಗೆ ಬಾಗಿಲು ತೆರೆಯುವಂತಿಲ್ಲ ಎಂಬ ತಾಕೀತಿನೊಂದಿಗೆ ವೆಂಕಟೇಶ್ವರ ನರ್ಸಿಂಗ್‌ಹೋಂ, ಬೆಳ್ಳೂರು ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ, ಶ್ರೀನಿವಾಸ ಕ್ಲಿನಿಕ್ ಮತ್ತು ಶ್ರೀರಂಗ ಮೆಡಿಕಲ್ಸ್‌ನ ಬಾಗಿಲು ಮುಚ್ಚಿಸಿ ಬೀಗಮುದ್ರೆ ಹಾಕಿಸಿದ್ದಾರೆ.

ತಹಸೀಲ್ದಾರ್ ನಯೀಂ ಉನ್ನೀಸಾ ನೇತೃತ್ವದಲ್ಲಿ ನಡೆದ ಈ ದಿಢೀರ್ ಕಾರ್ಯಾಚರಣೆಯಲ್ಲಿ ಜಾಗೃತ ದಳದ ಅಧಿಕಾರಿಗಳಾದ ತಾಪಂ ಇಓ ಚಂದ್ರಮೌಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೂಪ, ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್‌ ಕುಮಾರ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಪಾರ್ವತಮ್ಮ, ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ಮತ್ತು ಹಿರಿಯ ಆರೋಗ್ಯ ನಿರೀಕ್ಷಕ ಸಿದ್ದಲಿಂಗಪ್ಪ ಇದ್ದರು.

----

ಕೋಟ್...

ದಾಖಲೆ ಸರಿಯಿಲ್ಲದ ಮತ್ತು ಆರೋಗ್ಯ ಇಲಾಖೆಯ ನಿಯಮಾನುಸಾರವಿಲ್ಲದೆ ನಡೆಸುತ್ತಿದ್ದ ಒಂದು ಖಾಸಗಿ ನರ್ಸಿಂಗ್‌ಹೋಂ ಸೇರಿದಂತೆ ಖಾಸಗಿ ಕ್ಲಿನಿಕ್, ಮೆಡಿಕಲ್ ಸ್ಟೋರ್ ಮತ್ತು ರಕ್ತ ಪರೀಕ್ಷಾ ಕೇಂದ್ರದ ಬಾಗಿಲು ಮುಚ್ಚಿಸಿ, ಸೂಕ್ತ ದಾಖಲಾತಿ ಹಾಜರುಪಡಿಸುವಂತೆ ಕಾಲಾವಕಾಶ ನೀಡಿ ನೋಟೀಸ್ ಜಾರಿಗೊಳಿಸಲಾಗಿದೆ. ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ನಿಯಮಾನುಸಾರವಿದ್ದರೆ ಮಾತ್ರ ಬೀಗಮುದ್ರೆ ತೆರವುಗೊಳಿಸಲಾಗುವುದು. ದಾಖಲಾತಿ ಸರಿಯಿಲ್ಲದಿದ್ದರೆ ಅಂತಹ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.

- ನಯೀಂಉನ್ನೀಸಾ, ತಹಸೀಲ್ದಾರ್

--------------

ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಶುಕ್ರವಾರ ದಿಢೀರ್ ಕಾರ್ಯಾಚರಣೆ ನಡೆಸಿದ ತಹಸೀಲ್ದಾರ್ ನಯೀಂಉನ್ನೀಸಾ ನೇತೃತ್ವದ ಜಾಗೃತ ದಳದ ತಂಡ, ಖಾಸಗಿ ನರ್ಸಿಂಗ್ ಹೋಂ ಪರಿಶೀಲಿಸಿದರು.

--

ಕಾರ್ಯಾಚರಣೆ ನಡೆಸಿದ ತಹಶೀಲ್ದಾರ್ ನಯೀಂಉನ್ನೀಸಾ ನೇತೃತ್ವದ ಜಾಗೃತ ದಳದ ಅಧಿಕಾರಿಗಳ ತಂಡ ಮೆಡಿಕಲ್ ಸ್ಟೋರ್ ಪರಿಶೀಲಿಸಿದರು.

--

ಬೆಳ್ಳೂರಿನ ಮೆಡಿಕಲ್ ಸ್ಟೋರೊಂದರಲ್ಲಿ ವಾಯಿದೆ ಮೀರಿರುವ ಮಾತ್ರೆಗಳನ್ನು ಔಷಧಿಗಳ ಮಾರಾಟಕ್ಕಿಟ್ಟಿರುವುದನ್ನು ತಾಲೂಕು ಮಟ್ಟದ ಜಾಗೃತ ದಳದ ಅಧಿಕಾರಿಗಳ ತಂಡ ಪತ್ತೆ ಹಚ್ಚಿರುವುದಡ್ಸ