ಸಾರಾಂಶ
ಮುಂದಿನ ಡಿಸೆಂಬರ್ ವೇಳೆಗೆ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು, ಬಿಜೆಪಿ-ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಸುರೇಶ್ಗೌಡ ಭವಿಷ್ಯ ನುಡಿದರು.
ಶ್ರೀರಂಗಪಟ್ಟಣ : ಮುಂದಿನ ಡಿಸೆಂಬರ್ ವೇಳೆಗೆ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು, ಬಿಜೆಪಿ-ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಶಾಸಕ ಕೆ. ಸುರೇಶ್ಗೌಡ ಭವಿಷ್ಯ ನುಡಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆ ಸಂಬಂಧ ಜೆಡಿಎಸ್-ಬಿಜೆಪಿ ಸಮ್ಮಿಲನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರ ಬೀಳುತ್ತದೆ ಎಂಬ ಭಯದಿಂದ ಎಲ್ಲರೂ ದುಡ್ಡು ಮಾಡಲು ಹೊರಟಿದ್ದಾರೆ. ಹತಾಶೆ ಬಂದಾಗ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಶಾಸಕ ನರೇಂದ್ರಸ್ವಾಮಿ ನಾಲಿಗೆಗೂ ತಲೆಗೂ ಕನೆಕ್ಷನ್ ಕಟ್ ಆಗಿದೆ. ಕರ್ಮ ಅನ್ನೋದು ರಿಟರ್ನ್ ಆಗುತ್ತದೆ ಎಂದರು.
ಕಳೆದ ವಿಧಾನಸಭೆ ಚುನಾವಣೆಗೆ ಮೊದಲೇ ನಾವು ಮೈತ್ರಿ ಆಗಿದ್ದರೆ ನಾವ್ಯಾರೂ ಸೋಲುತ್ತಿರಲಿಲ್ಲ. ನಮ್ಮ ಪೈಪೋಟಿಯಿಂದ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವಂತಾಯಿತು. ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಇವರ ದುರಂಹಕಾರ ಅಡಗಿಸಬೇಕಿದೆ ಎಂದರು.
ಕಾವೇರಿ ನೀರನ್ನು ಕಾಪಾಡುವ ಶಕ್ತಿ ಇರುವುದು ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಮಾತ್ರ. ಕಾಂಗ್ರೆಸ್ನವರು ಜಾತಿ ಒಡೆದು ಆಳುತ್ತಾರೆ. ಅಂತಹವರನ್ನು ಅಧಿಕಾರದಿಂದ ದೂರವಿಡಬೇಕು ಎಂದರು.
ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಕುಮಾರಸ್ವಾಮಿ ಶಿಷ್ಯ. ಕುಮಾರಸ್ವಾಮಿ ಎದುರಿಗೆ ಬಂದರೆ ಅವಿತುಕೊಳ್ಳುತ್ತಾರೆ. ಕುಮಾರಸ್ವಾಮಿ ಅಭ್ಯರ್ಥಿ ಆಗುತ್ತಾರೆ ಎಂದು ಮೊದಲೇ ಗೊತ್ತಿದ್ದರೆ ಸ್ಟಾರ್ ಚಂದ್ರು ಅಭ್ಯರ್ಥಿ ಆಗುತ್ತಿರಲಿಲ್ಲ. ಅವರಿಗೀಗ ಚಳಿಜ್ವರ ಬಂದಿದೆ ಎಂದು ನೇರವಾಗಿ ಹೇಳಿದರು.