ಸಾರಾಂಶ
ದೇವೇಗೌಡ ಅವರ ನೇತೃತ್ವದ ಸರ್ಕಾರವೇ 5 ವರ್ಷ ಇರಲಿಲ್ಲ. ಇನ್ನು ಬೇರೆಯವರ ಸರ್ಕಾರ ಪೂರ್ಣಾವಧಿ ಪೂರೈಸಲು ಬಿಡ್ತಾರಾ. ಅದಕ್ಕೆ ಕಾಂಗ್ರೆಸ್ ಸರ್ಕಾರ ಕಿತ್ತುಹಾಕುತ್ತೇವೆ ಅಂತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣ: ಎಚ್.ಡಿ.ದೇವೇಗೌಡ ಅವರ ನೇತೃತ್ವದ ಸರ್ಕಾರವೇ 5 ವರ್ಷ ಇರಲಿಲ್ಲ. ಇನ್ನು ಬೇರೆಯವರ ಸರ್ಕಾರ ಪೂರ್ಣಾವಧಿ ಪೂರೈಸಲು ಬಿಡ್ತಾರಾ. ಅದಕ್ಕೆ ಕಾಂಗ್ರೆಸ್ ಸರ್ಕಾರ ಕಿತ್ತುಹಾಕುತ್ತೇವೆ ಅಂತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು ಸಿಎಂ ಆಗಿ 5 ವರ್ಷ ಇದ್ರಾ? ಪ್ರಧಾನಿಯಾಗಿ 5 ವರ್ಷ ಅಧಿಕಾರ ಮಾಡಿದ್ರಾ? ಅವರ ನೇತೃತ್ವದ ಸರ್ಕಾರ ಇದ್ದಾಗಲೇ 5 ವರ್ಷ ಆಡಳಿತ ಮಾಡಿಲ್ಲ. ಇನ್ನೂ ಬೇರೆಯವರು ಸರ್ಕಾರ ಮಾಡಿದ್ರೆ ಸುಮ್ಮನೆ ಇರ್ತಾರಾ. ಅದಕ್ಕೆ ಕಾಂಗ್ರೆಸ್ ಸರ್ಕಾರ ಕಿತ್ತುಹಾಕುತ್ತೇವೆ ಅಂತಾರೆ. ಅವರು ದೊಡ್ಡವರು, ಅವರ ಬಗ್ಗೆ ಜಾಸ್ತಿ ಮಾತನಾಡೊದು ಬೇಡ ಎಂದರು. ದೇವೇಗೌಡರಿಗೆ ಅವರದ್ದೇ ಸರ್ಕಾರದ ಮೇಲೆ ನಂಬಿಕೆ ಇರಲಿಲ್ಲ. ಸರ್ಕಾರ ಎಷ್ಟು ದಿನ ಇರಲಿದೆಯೋ ಎಂದು ಅನುಮಾನ ಹೊಂದಿದ್ದರು. ಅವರ ಅವಧಿಯಲ್ಲಿ ಶಾಸಕರು ಮನೆಗೆ ಹೋದಾಗ ಈ ಸರ್ಕಾರ ಎರಡು ವರ್ಷದ ಮೇಲೆ ಇರಲ್ಲ ಅನ್ನುತ್ತಿದ್ದರು ಎಂದು ಆರೋಪಿಸಿದರು.ಕುಮಾರಸ್ವಾಮಿ ಅವರು ಆಕಾಶ, ಡಿ.ಕೆ.ಶಿವಕುಮಾರ್ ಭೂಮಿ ಎಂದು ದೇವೇಗೌಡರು ಬಣ್ಣಿಸಿದ್ದಾರೆ. ಆಕಾಶ ಆದವರನ್ನ ಮುಟ್ಟಲು ಆಗುತ್ತಾ? ಅವರು ಜನರ ಕೈಗೆ ಸಿಗ್ತಾರಾ? ಡಿ.ಕೆ.ಶಿವಕುಮಾರ್ ಭೂಮಿ ಮೇಲೆಯೇ ಇರುವುದರಿಂದ ಜನರ ಕೈಗೆ ಸಿಗುತ್ತಾರೆ ಎಂದು ಸಚಿವರು ತಿರುಗೇಟು ನೀಡಿದರು.