ಕನ್ನಡಪ್ರಭ ವಾರ್ತೆ ಪಾಂಡವಪುರ

ನಾನು ಎನ್‌ಡಿಎ ಮೈತ್ರಿ ಪರವಾಗಿದ್ದೇನೆ. ಮೈತ್ರಿಯ ರೀತಿ-ರಿವಾಜುಗಳನ್ನು ತೀರ್ಮಾನಿಸೋದು ದೆಹಲಿಯ ನಾಯಕರು. ಹಾಗಾಗಿ ಅವರ ಸೂಚನೆಯನ್ನು ಪ್ರೀತಂಗೌಡ ಸೇರಿದಂತೆ ಎಲ್ಲಾ ಮೈತ್ರಿಯ ನಾಯಕರು ಪಾಲನೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತ ಅಶೋಕ್ ಎಂಬುವರ ಮನೆಗೆ ಭೇಟಿಕೊಟ್ಟು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈತ್ರಿಯ ವಿಚಾರವಾಗಿ ಹಾದಿ-ಬೀದಿಯಲ್ಲಿ ಚರ್ಚಿಸೋದು ಬೇಡ. ನಾಲ್ಕು ಗೋಡೆ ಮಧ್ಯೆ ಚರ್ಚಿಸಬೇಕೆಂಬ ಸಲಹೆ ಕೊಟ್ಟಿದ್ದಾರೆ. ಆ ಸಲಹೆ ಸರಿಯಾಗಿದೆ ಹಾಗಾಗಿ ನಾನು ಸೈಲೆಂಟ್ ಆಗಿದ್ದೇನೆ. ಜೆಡಿಎಸ್‌ನವರು ಸಹ ಮುಂದಿನ ಮುಖ್ಯಮಂತ್ರಿ, ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚಿಸಬಾರದು, ಆ ವಿಚಾರವಾಗಿ ದೆಹಲಿಯ ನಾಯಕರು ಚರ್ಚಿಸಿ ತೀರ್ಮಾನಿಸಲಿದ್ದಾರೆ ಎಂದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಾರ್ಯಕರ್ತರನ್ನು ಉದ್ದೇಶದಿಂದ ಮಾತನಾಡಿದಾಗ ನಮ್ಮ ಕಾರ್ಯಕರ್ತರಿಗೆ ಸ್ವಲ್ಪಗೊಂಡಲ ಇತ್ತು ಹಾಗಾಗಿ ಗೊಂದಲ ಬಗೆಹರಿಸುವ ಕೆಲಸ ಮಾಡಿದ್ದೇವೆ ಅಷ್ಟೆ. ಚಿಕ್ಕವರೇ ಆಗಲಿ ದೊಡ್ಡವರೇ ಆಗಲಿ ರಚನಾತ್ಮಕ ಸಲಹೆಗಳು ಬಂದರೆ ಅದನ್ನು ಎರಡು ಕಡೆಯವರು ಪಾಲನೆ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಎರಡು ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ಮೈತ್ರಿಯ ನಾಯಕರು ತೀರ್ಮಾಸಲಿದ್ದಾರೆ ಎಂದರು.

ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ 2028ರವರೆಗೂ ಎಲ್ಲಾ ಚುನಾವಣೆಗಳನ್ನು ಎದುರಿಸುತ್ತೇವೆ. 2028ಕ್ಕೂ ವಿಜಯೇಂದ್ರ ಅವರ ನೇತೃತ್ವದಲ್ಲಿ ಹಾಗೂ ಎನ್‌ಡಿಎ ಮೈತ್ರಿಕೂಟದಿಂದ 160ಕ್ಕೂ ಅಧಿಕ ಸ್ಥಾನ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಪಕ್ಷ ನನಗೆ ಸಂಘಟನೆ ಮಾಡುವ ಜವಾಬ್ದಾರಿಕೊಟ್ಟಿದೆ. ಪಕ್ಷ ಬೆಳೆಸುವುದಷ್ಟೇ ನನ್ನ ಧ್ಯೇಯವಾಗಿದೆ. ಈಗಾಗಲೇ ಪಕ್ಷ ಸಂಘಟನೆ ಮಾಡುವ ವಿಚಾರವಾಗಿ ಮಂಡ್ಯದಲ್ಲಿ ಹಲವು ಸಂಘಟನಾತ್ಮಕ ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಇದೀಗ ಮೈಸೂರು ಜಿಲ್ಲೆಯಲ್ಲಿ ಸಂಘಟಕನಾತ್ಮಕ ಸಭೆಯನ್ನು ನಡೆಸಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಎಲ್ಲರ ಜತೆಗೂಡಿ ಪಕ್ಷ ಸಂಘಟನೆ ಮಾಡಲಿದ್ದೇವೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ತಾಲೂಕು ಅಧ್ಯಕ್ಷ ಧನಂಜಯ್, ಟೌನ್ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಅಶೋಕ್, ಆನಂದ್, ನವೀನ್ ಸೇರಿದಂತೆ ಹಲವರು ಇದ್ದರು.