ಸಾರಾಂಶ
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್ಡಿಎ (ಬಿಜೆಪಿ-ಜೆಡಿಎಸ್) ನಾಯಕರ ಮಾತಿನ ಸಮರ ಮುಂದುರೆದಿದ್ದು, ಮಂಗಳವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಪ್ರಚಾರ ಮಾಡಿದರು.
ಚನ್ನಪಟ್ಟಣ : ರಾಜ್ಯದ ಗಮನ ಸೆಳೆದಿರುವ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್ಡಿಎ (ಬಿಜೆಪಿ-ಜೆಡಿಎಸ್) ನಾಯಕರ ಮಾತಿನ ಸಮರ ಮುಂದುರೆದಿದ್ದು, ಮಂಗಳವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಪ್ರಚಾರ ಮಾಡಿದರು.
ಕ್ಷೇತ್ರದ ಸಿದ್ಧಯ್ಯಗೌಡ ದೊಡ್ಡಿ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದ ಎಚ್ಡಿಕೆ, ಕೆರಳದ ವಯನಾಡಿನಲ್ಲಿ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೂ ವಯನಾಡಿಗೂ ಏನು ಸಂಬಂಧವಿದೆ? ದೆಹಲಿಯಲ್ಲಿ ಜನಿಸಿರುವ ಇಟಲಿ ತಾಯಿಯ ಮಗಳು ವೈನಾಡಿನಲ್ಲಿ ನಿಲ್ಲಿಸಬಹುದಾದರೆ ಕನ್ನಡಿಗನಾದ ನಾನು ವಲಸಿಗ ಹೇಗಾಗುತ್ತೇನೆ? ನಾನು ಹುಟ್ಟಿದ್ದು ಹಾಸನದಲ್ಲಿ, ನನ್ನ ಕರ್ಮಭೂಮಿ ರಾಮನಗರ ಜಿಲ್ಲೆ ಎಂದು ಹೇಳುವ ಮೂಲಕ ವಲಸೆ ಅಭ್ಯರ್ಥಿ ಎನ್ನುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಇನ್ನು ಬೈರಾಪಟ್ಟಣದ ಮಾರಮ್ಮ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯ ಹಾಗೂ ರಾಮನಗರದಲ್ಲಿ ನಡೆದ ಕುತಂತ್ರ ರಾಜಕಾರಣ ಚನ್ನಪಟ್ಟಣ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಈ ಬಾರಿ ಯಾವ ಕುತಂತ್ರಕ್ಕೆ ಬಲಿಯಾಗಲು ಮತದಾರರು ಅವಕಾಶ ನೀಡುವುದಿಲ್ಲ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್ಚಿನ ಮತಗಳಿಂದ ಸಿಪಿವೈ ಗೆಲ್ಲಿಸಿ- ಸುರೇಶ್:
ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ಮಾಡಿದ ಡಿ.ಕೆ.ಸುರೇಶ್ ಅವರು, ನೀವು ಎರಡು ಬಾರಿ ಸೋಲಿಸಿರುವ ಯೋಗೇಶ್ವರ್ ಅವರು ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದು, ಹೆಚ್ಚಿನ ಮತಗಳಿಂದ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಕುಮಾರಸ್ವಾಮಿ ಚೆನ್ನಾಗಿಯೇ ಇದ್ದು, ಮಂಡ್ಯದಲ್ಲಿ ಇರಲಿ. ಮಗ ಹಾಸನಕ್ಕೆ ಹೋಗಲಿ. ಇಲ್ಲಿ ಯೋಗೇಶ್ವರ್ಗೆ ಮತ ಹಾಕಿ ಎಂದರು.