ಕದ್ದಾಲಿಕೆಯಂಥ ನೀಚ ಕೆಲಸ ನಾನೆಂದೂ ಮಾಡಿಲ್ಲ: ಸಿಎಂ

| Published : May 23 2024, 01:11 AM IST / Updated: May 23 2024, 04:30 AM IST

Siddaramaiah

ಸಾರಾಂಶ

ನನ್ನ ರಾಜಕೀಯ ಜೀವನದಲ್ಲಿ ಫೋನ್ ಟ್ಯಾಪಿಂಗ್‌ನಂತಹ ನೀಚ ಕೆಲಸವನ್ನು ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 ಬೆಂಗಳೂರು :  ನನ್ನ ರಾಜಕೀಯ ಜೀವನದಲ್ಲಿ ಫೋನ್ ಟ್ಯಾಪಿಂಗ್‌ನಂತಹ ನೀಚ ಕೆಲಸವನ್ನು ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಸರ್ಕಾರವು ಫೋನ್‌ ಟ್ಯಾಪಿಂಗ್‌ ಮಾಡುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಮತ್ತು ಈಗ ಫೋನ್‌ ಟ್ಯಾಪಿಂಗ್‌ ಮಾಡುವ ಕೆಲಸ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಮರೆಮಾಚಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರ ಆರೋಪ ನಿರಾಧಾರವಾಗಿದೆ ಎಂದರು.

ಸುಳ್ಳು ಹೇಳುವುದೇ ಕಾಯಕ:  ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅಧಿಕಾರದಲ್ಲಿ ಇರುವಾಗ ಬೆಂಗಳೂರಿಗೆ ಯಾವುದೇ ಕೊಡುಗೆ ನೀಡಿಲ್ಲ. ಈ ಎಲ್ಲದಕ್ಕೂ ಸುಳ್ಳುವುದೇ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಫೋಟೋ ಶೂಟ್‌ ಮಾಡಿಸಿಕೊಳ್ಳುವುದಕ್ಕೆ ಸಿಟಿ ರೌಂಡ್ಸ್‌ ಹೋಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಿನ ಶಾಸಕರಾಗಿದ್ದ ಆರ್‌. ಅಶೋಕ್‌, ಅವರ ಪಕ್ಷ ಅಧಿಕಾರದಲ್ಲಿ ಇರುವಾಗ ನಗರಕ್ಕೆ ಯಾವುದೇ ಕೆಲಸ ಮಾಡಿಲ್ಲ. ರಾಜಕಾಲುವೆ ತೆರವುಗೊಳಿಸಿ, ಅಭಿವೃದ್ಧಿಪಡಿಸಿದ್ದರೆ ಈಗ ಸಮಸ್ಯೆ ಉದ್ಬವಿಸುತ್ತಿರಲಿಲ್ಲ. ಈಗ ಪ್ರತಿಪಕ್ಷದಲ್ಲಿ ಕುಳಿತು ಸುಳ್ಳು ಹೇಳುವುದೇ ಕಾಯಕ ಮಾಡಿಕೊಂಡಿದ್ದಾರೆ ಎಂದರು.