ಕನ್ನಡಪ್ರಭ ವಾರ್ತೆ ದೇವದುರ್ಗ
ಪಟ್ಟಣ ಅಭಿವೃದ್ಧಿ ಪಥದಲ್ಲಿದ್ದು ಜನಸಂಖ್ಯೆ ಇಮ್ಮಡಿಗೊಳ್ಳುತ್ತಿದೆ.ಸಾರ್ವಜನಕರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ.ದೂರುಗಳು ಕೇಳಿಬಂದಲ್ಲಿ ಜನರೊಂದಿಗೆ ನಾನೂ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.ಸ್ಥಳೀಯ ಪುರಸಭೆ ಆವರಣದಲ್ಲಿ ಮಂಗಳವಾರ ಜರುಗಿದ ಪುರಸಭೆ ವ್ಯಾಪ್ತಿಯ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಅಲಿಸಿ ಮಾತನಾಡಿದರು.ದೇವದುರ್ಗ ಪಟ್ಟಣ ಸುಂದರಗೊಳಿಸಬೇಕು.ಮಾದರಿ ಪಟ್ಟಣ ಮಾಡ ಬೇಕೆಂಬ ಕನಸು ನನ್ನದು. ಹೀಗಾಗಿ ಒಳಚರಂಡಿ, ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಅನುದಾನ ನೀಡಿರುವೆ. ಮಹಿಳೆಯರಿಗಾಗಿ ನಿರ್ಮಿಸಲಾಗಿರುವ ಶೌಚಾಲಯಗಳು ನಿರುಪಯಕ್ತವಾಗಿವೆ. ಸಾರ್ವಜನಿಕ ಕ್ಲಬ್ ನವೀಕರಣ ಗೊಳಿಸಲು ಉದ್ದೇಶಿಸಲಾಗಿದೆ. ಹೊಸದಾಗಿ ಪ್ರಜಾಸೌಧ ನಿರ್ಮಿಸಲು ಈಗಾಗಲೇ ₹25 ಕೋಟಿ ಅನುದಾನ ಬಿಡುಗಡೆ ಗೊಂಡಿದೆ ನಗರೋತ್ಥಾನ ಯೋಜನೆಯಲ್ಲಿ ಪಟ್ಟಣದ ಅಭಿವೃಧ್ಧಿಗೆ ಅನುದಾನ ನೀಡಿದ್ದು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಅನಧಿಕೃತವಾಗಿ ನಿಯಮಬಾಹಿರ ಮದ್ಯ ಮಾರಾಟ ಮಾಡಲಾಗುತ್ತಿದೆ. ಸ್ಲಂ ಬೋರ್ಡ್ನಿಂದ ನಿರ್ಮಿಸಲಾಗಿರುವ ಮನೆಗಳು ಅಪೂರ್ಣಗೊಂಡಿವೆ.ರಸ್ತೆ ಬದಿಯಲ್ಲಿ ಬಿಡಾಡಿ ದನಗಳ ಕಾಟವಿದೆ.ಶುದ್ಧ ನೀರು ಪೂರೈಕೆಯಾಗುತ್ತಿಲ್ಲ. ರಾಜಾ ಕಾಲುವೆಗಳಲ್ಲಿ ಹೂಳೆತ್ತದೇ ಇರುವುದರಿಂದ ದುರ್ವಾಸನೆ, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕಚೇರಿಗಳಲ್ಲಿ ಸೇವೆಗಳ ವಿಳಂಬ, ಲಂಚದ ಬೇಡಿಕೆ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬರುತ್ತಿದ್ದು, ಕೂಡಲೇ ಸಿಬ್ಬಂದಿ ಎಚ್ಚೆತ್ತುಕೊಂಡು ಜನ ಸೇವೆ ಮಾಡಲು ಮುಂದಾಗಬೇಕೆಂದು ಶಾಸಕಿ ಕರೆಮ್ಮ ಜಿ. ನಾಯಕ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗಮ್ಮ ಎಂ.ಕಟ್ಟೀಮನಿ, ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಜಿ.ಬನದೇಶ,ಪಿಐ ಮಂಜುನಾಥ,ಅಬಕಾರಿ ನಿರೀಕ್ಷಿಕ ಹೊಸಮನೆ,ಜೆಸ್ಕಾಂ ಶ್ರೀನಿವಾಸ ರಾಜ, ಅರಣ್ಯ ಇಲಾಖೆ ವಲಯಾಧಿಕಾರಿ ಅಲಾ ಉದ್ದೀನ್, ಸ್ಲಂ ಬೋರ್ಡ್ನ ದೇವಿಂದ್ರಕುಮಾರ, ಕುಡಿಯುವ ನೀರು ಮತ್ತು ಒಳಚರಂಡಿ ನಿಗಮದ ಚಂದ್ರಕಾಂತ ಚವ್ಹಾಣ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ ಕೆ., ಜೆಇ ಶರಣಪ್ಪ ಕೌಳೂರ, ಭಾಗ್ಯ , ಶರಣಮ್ಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನ ಯೋಜನೆಯಲ್ಲಿ ಹಸಿಕಸ ಮತ್ತು ಒಣಕಸ ಸಂಗ್ರಹಿಸುವ ಕಿಟ್ಗಳನ್ನು ವಿತರಿಸಲಾಯಿತು.