ಸಾರಾಂಶ
ಪ್ರಧಾನಿ ಮೋದಿ ಅವರ ಪರಮಾಪ್ತರ ಆಸ್ತಿ ಮೌಲ್ಯ ಹೆಚ್ಚಾಗಿದೆ. ಇನ್ನೂ ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದಲ್ಲಿ ಸ್ವಾಮಿನಾಥನ್ ವರದಿ ಜಾರಿ ಭರವಸೆ ನೀಡಿದೆ. ಈ ಬಗ್ಗೆ ಗಮನ ಹರಿಸಬೇಕಾಗಿದೆ.
ಮೈಸೂರು : ಕಳೆದ 10 ವರ್ಷಗಳಲ್ಲಿ ಪ್ರಧಾನಿಗೆ ರೈತರ ಆರ್ತನಾದ ಕೇಳಿಸಿಲ್ಲ. ನೀಡಿದ್ದ ಭರವಸೆಯಂತೆ ಸ್ವಾಮಿನಾಥನ್ ವರದಿ ಜಾರಿಗೊಳಿಸಿದ್ದರೇ ರೈತರು ಜಮೀನು ಮಾರಿ ನಗರಗಳಿಗೆ ಕೂಲಿ ಕೆಲಸಕ್ಕಾಗಿ ಗುಳೇ ಬರುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.
ಕರ್ನಾಟಕ ರಾಜ್ಯ ರೈತ ಸಂಘವು ಹೊರ ತಂದಿರುವ 2024ರ ಲೋಕಸಭಾ ಚುನಾವಣೆ, ರೈತರಾದ ನಾವು ಏನು ಮಾಡೋಣ? ವಚನ ಪಾಲನೆ ಮಾಡದೇ ರೈತರಿಗೆ ದ್ರೋಹ ಬಗೆದವರಿಗೆ ಬುದ್ದಿ ಕಲಿಸೋಣ ಎಂಬ ಕರಪತ್ರವನ್ನು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಧಾನಿ ಮೋದಿ ಹೇಳಿದ ವಿಕಸಿತ ಭಾರತದ ಪರಿಕಲ್ಪನೆ ಕೇವಲ ಜಾತ್ರೆ ವೇಳೆ ಮಾಯಾ ಪೆಟ್ಟಿಯಲ್ಲಿ ಬಾಂಬೆ ನೋಡು, ಕೋಲ್ಕತಾ ನೋಡು, ಮದ್ರಾಸ್ ನೋಡು ಎಂಬ ಚಿತ್ರ ತೋರಿಸಿದಂತಿದೆ. ಮೋದಿ ಅವರ ಪರಮಾಪ್ತರ ಆಸ್ತಿ ಮೌಲ್ಯ ಹೆಚ್ಚಾಗಿದೆ. ಇನ್ನೂ ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದಲ್ಲಿ ಸ್ವಾಮಿನಾಥನ್ ವರದಿ ಜಾರಿ ಭರವಸೆ ನೀಡಿದೆ. ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.
ಈ ಬಾರಿಯ ಚುನಾವಣೆ ವೇಳೆ ಇಬ್ಬರು ಸಭ್ಯ ಅಭ್ಯರ್ಥಿಗಳನ್ನು ರಾಜಕೀಯಕ್ಕೆ ತಳ್ಳಲ್ಪಟ್ಟಿರುವುದನ್ನು ನೋಡಿದಲ್ಲಿ ಸಂಕಟವಾಗುತ್ತದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಡಾ. ಮಂಜುನಾಥ್ ಅವರು ಹಿಂದುತ್ವದ ಖೆಡ್ಡಾಕ್ಕೆ ಬೀಳಬಾರದಾಗಿತ್ತು, ಅದರಲ್ಲಿ ಪಳಗಬಾರದಾಗಿತ್ತು. ಹೀಗಾಗಿ, ಇವರು ಸೋತಾದರೂ ಈ ಖೆಡ್ಡಾದಿಂದ ಹೊರ ಬರಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಪ್ರೊ.ನಂಜುಂಡಸ್ವಾಮಿ ಅವರು ಹೇಳಿದಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮತದಾರರು ನಿಷ್ಠುರವಾಗಿ ಬಿಜೆಪಿಯನ್ನು ನಿರಾಕರಣೆ ಮಾಡಿದಲ್ಲಿ ಮತದಾರರು ಮಾತ್ರವಲ್ಲದೆ, ದೇಶವೂ ಉಳಿಯುತ್ತದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ವಿಜೇಂದ್ರ ಇದ್ದರು.