ಬೆಂಗಳೂರು : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕಳೆದ ಬಾರಿ ₹8,275 ಕೋಟಿಗಳನ್ನು ಒದಗಿಸಿದ್ದ ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್ನಲ್ಲಿ ಅನುದಾನವನ್ನು ₹7,945 ಕೋಟಿಗಳಿಗೆ ಸೀಮಿತಗೊಳಿಸಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿದ್ದ 5 ಕೇಜಿ ಅಕ್ಕಿಯ ಬದಲಿಗೆ ಇಂದಿರಾ ಕಿಟ್ ವಿತರಿಸಲು ₹6,200 ಕೋಟಿಗಳನ್ನು ಮೀಸಲಿಟ್ಟಿದೆ. ಇಂದಿರಾ ಕಿಟ್ನಲ್ಲಿ ಐದು ಕೆ.ಜಿ. ಅಕ್ಕಿಯ ಬದಲಾಗಿ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಇರಲಿದೆ. ರಾಜ್ಯದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಇಂದಿರಾ ಕಿಟ್ ಪಡೆಯಲಿದ್ದಾರೆ.
ಎಫ್ಐಎಸ್ಟಿ ಅಪ್ಲಿಕೇಷನ್ ಮೂಲಕ ಲಾಭಾಂಶದ ನೇರ ಪಾವತಿಗೆ ಒತ್ತು
ಆಹಾರ ಧಾನ್ಯಗಳ ವಿತರಣೆಗಾಗಿ ನೀಡಲಾಗುವ ಚಿಲ್ಲರೆ ಹಾಗೂ ಸಗಟು ಲಾಭಾಂಶದ ಪಾವತಿಯಲ್ಲಿ ವಿಳಂಬವನ್ನು ನಿವಾರಿಸಲು ಎಫ್ಐಎಸ್ಟಿ ಅಪ್ಲಿಕೇಷನ್ ಮೂಲಕ ಲಾಭಾಂಶದ ನೇರ ಪಾವತಿಗೆ ಒತ್ತು ನೀಡಲಾಗಿದೆ. ಇಲಾಖೆಯಲ್ಲಿನ ಸಮಸ್ಯೆ ಹಾಗೂ ಗ್ರಾಹಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಪ್ರಸ್ತುತ ಜಾರಿಯಲ್ಲಿರುವ ಇಲಾಖೆಯ ಸಹಾಯವಾಣಿಯನ್ನು (1967) ಎಐ ತಂತ್ರಜ್ಞಾನ ಆಧಾರಿತ ‘ಸ್ಮಾರ್ಟ್ ಅನ್ನವಾಣಿ’ಯನ್ನಾಗಿ ಪರಿವರ್ತಿಸಲಾಗುವುದು. ಸ್ವಯಂ ಚಾಲಿತ ದೂರು ಕೇಂದ್ರ, ಧ್ವನಿ ಚಾಟ್ಬಾಟ್ ಮತ್ತು ಲೈವ್ ಕರೆ ವರ್ಗಾವಣೆ ವ್ಯವಸ್ಥೆಗಳನ್ನು ಒಳಗೊಂಡ ಎಐ ಆಧಾರಿತ ‘ಸ್ಮಾರ್ಟ್ ಅನ್ನವಾಣಿ’ಯನ್ನು ಪರಿಚಯಿಸುವುದಾಗಿ ಪ್ರಕಟಿಸಲಾಗಿದೆ.
ಆಹಾರ ಭದ್ರತೆ ಒದಗಿಸಲು ಕ್ರಮ
ದಾಸೋಹ ಯೋಜನೆಯಡಿ 34 ಹೊಸ ಕಲ್ಯಾಣ ಸಂಸ್ಥೆಗಳಲ್ಲಿ ಇರುವ 6701 ಫಲಾನುಭವಿಗಳಿಗೆ ಆಹಾರ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ದಾಸೋಹ ಯೋಜನೆಯಡಿ ಈಗಾಗಲೇ ರಾಜ್ಯಾದ್ಯಂತ 274 ಕಲ್ಯಾಣ ಸಂಸ್ಥೆಗಳ 32057 ಫಲಾನುಭವಿಗಳಿಗೆ ₹14 ಕೋಟಿ ವೆಚ್ಚದಲ್ಲಿ ಆಹಾರ ಭದ್ರತೆಯನ್ನು ಒದಗಿಸಲಾಗುತಿದೆ. ಅದರ ಜತೆಗೆ ಇದೀಗ ಹೊಸದಾಗಿ 34 ಸಂಸ್ಥೆಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಘೋಷಿಸಲಾಗಿದೆ.
