ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನ ನೀಡಿರುವ ಮತದಾನದ ಶಕ್ತಿ ಮದ್ದುಗುಂಡಿಗಿಂತಲೂ ಬಲಾಢ್ಯ ಎನ್ನುವ ಮಾತಿದೆ. ಹಾಗಾಗಿ ನಮ್ಮ ವಿದ್ಯಾರ್ಥಿಗಳು, ಯುವಜನರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಯುವುದು ಬಹಳ ಮುಖ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದಲ್ಲಿ ಸೋಮವಾರ ನಡೆದ ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮದಲ್ಲಿ ಮಾತನಾಡಿ, ಜನರಿಗೆ ಮತದಾನದ ಹಕ್ಕು ಸಿಕ್ಕ ಬಳಿಕ ಮಹಾರಾಜರು ಮನೆಯಲ್ಲಿ ಕೂತಿದ್ದಾರೆ. ಮತದಾನದ ಹಕ್ಕಿನಿಂದ ಆಯ್ಕೆಯಾದವರು ಜನಸೇವೆ ಮಾಡುತ್ತಿದ್ದಾರೆ. ನಾನು, ಸಿದ್ದರಾಮಯ್ಯ ಅವರು ಸೇರಿ ಅನೇಕ ನಾಯಕರು ಜನರ ಮತಗಳಿಂದ ಅಧಿಕಾರಕ್ಕೆ ಬಂದು ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿದ್ದೇವೆ. ಆದರೆ, ಇಂದು ಮತಗಳ್ಳತನಕ್ಕೆ ಕೆಲವರು ಕೈ ಹಾಕಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಸಾಕಷ್ಟು ಹೆಚ್ಚು-ಕಡಿಮೆಯಾಗಿದೆ. ಇದರ ವಿರುದ್ದ ರಾಹುಲ್ ಗಾಂಧಿಯವರು ಹೋರಾಟ ರೂಪಿಸಿದ್ದಾರೆ. ಇಂತಹ ಮತ ಶಕ್ತಿ ನೀಡಿರುವ ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನದ ಆಶಯಗಳ ಬಗ್ಗೆ ನಮ್ಮ ಯುವಜನರು ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ಪ್ರಜಾಪ್ರಭುತ್ವದಲ್ಲಿ ಒಂದೊಂದು ಮತವೂ ಎಷ್ಟು ಅಮೂಲ್ಯ ಎಂದರೆ, ಚಾಮರಾಜನಗರದ ಸಂಸದರಾಗಿದ್ದ ದಿವಂಗತ ಧ್ರುವನಾರಾಯಣ ಅವರು ಒಂದು ಮತದ ಅಂತರದಿಂದ ಜಯಗಳಿಸಿದರು. ಅವರ ವಿರುದ್ಧ ನಿಂತಿದ್ದ ಪ್ರಸ್ತುತ ಕೊಳ್ಳೆಗಾಲದ ಶಾಸಕರಾಗಿರುವ ಕೃಷ್ಣಮೂರ್ತಿ ಅವರ ಚಾಲಕ ಸಮಯ ಮೀರಿ ಹೋಯಿತು ಎಂದು ಮತ ಹಾಕಲಿಲ್ಲ. ಇದರಿಂದ ಅವರು ಸೋಲಬೇಕಾಯಿತು. ರಾಜಸ್ಥಾನದ ಸಿ.ಪಿ.ಜೋಶಿಯವರು ಎರಡು ಅಥವಾ ಮೂರು ಮತಗಳಿಂದ ಸೋತರು. ಇಲ್ಲದಿದ್ದರೆ ಅಂದು ಮುಖ್ಯಮಂತ್ರಿಗಳಾಗಬೇಕಾಗಿತ್ತು ಎಂದರು.‘ದೇಶದಲ್ಲಿ ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದಾಗ ವಿರೋಧ ಪಕ್ಷದವರು ರಾಜೀವ್ ಗಾಂಧಿ ಅವರ ವಿರುದ್ಧ ಮುಗಿಬಿದ್ದಿದ್ದರು. ಆಡುವ ಮಕ್ಕಳಿಗೆ ಮತದಾನದ ಹಕ್ಕು ನೀಡಲಾಗಿದೆ ಎಂದು ಟೀಕೆ ಮಾಡುತ್ತಿದ್ದರು. ಆಗ ರಾಜೀವ್ ಗಾಂಧಿ ಅವರು ''''''''ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗೆ ಗಡಿ ಕಾಯಲು ಬಂದೂಕು ನೀಡುತ್ತೇವೆ. ಮತದಾನದ ಹಕ್ಕು ನೀಡುವುದು ತಪ್ಪೇ?'''''''' ಎಂದಿದ್ದರು. ನಾನು ಈ ದೇಶದ ಯುವ ಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದರು’ ಎಂದು ಡಿಕೆಶಿ ಮೆಲುಕು ಹಾಕಿದರು.
ಪ್ರಜಾಪ್ರಭುತ್ವ ಅಮೂಲ್ಯವಾದ ವಸ್ತು. ಭಾರತ ಅತೀದೊಡ್ಡ ಪ್ರಜಾಪ್ರಭುತ್ವ ದೇಶ, ಬುದ್ಧನ ದೇಶ. ಶಾಂತಿ ಸಹಬಾಳ್ವೆಗೆ ಹೆಸರಾದ ದೇಶ. ಇಂಥ ದೇಶದಲ್ಲಿ ಅಸಹನೆ, ವ್ಯಕ್ತಿ ಪೂಜೆ, ಸರ್ವಾಧಿಕಾರಿ ಧೋರಣೆ ಇನ್ನೂ ಇದೆ. ಇದು ಪ್ರಜಾಪ್ರಭುತ್ವಕ್ಜೆ ಸವಾಲೊಡ್ಡುವಂಥದ್ದು. ಇದರ ವಿರುದ್ಧ ದೇಶದ ಜನ, ಯುವಜನರನ್ನು ಇನ್ನಷ್ಟು ಜಾಗೃತಗೊಳಿಸಿ ನಿರ್ಮೂಲನ ಮಾಡಿ ಸಮಾನತೆಯನ್ನು ಸಂಪೂರ್ಣ ಸಾಧಿಸಬೇಕಿದೆ.- ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ