ಸಾರಾಂಶ
- ದೂರು ಇದ್ದರೆ ಶಾ, ನಡ್ಡಾ ಜತೆ ಚರ್ಚಿಸಿ: ಸಚಿವ
- ಯತ್ನಾಳ್ ಆರೋಪದ ಬಗ್ಗೆ ತನಿಖೆ: ಸಿ.ಟಿ. ರವಿ ಆಗ್ರಹಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ವಿರೋಧ ಮಾಡುವುದಾಗಲೀ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರನ್ನು ಆಯ್ಕೆ ಮಾಡಿದ್ದು ರಾಷ್ಟ್ರೀಯ ನಾಯಕರು. ಆಯ್ಕೆ ಬಗ್ಗೆ ವಿರೋಧಿಸುವುದು ತಪ್ಪು ಎಂದರು.ಯಾರೇ ಆಗಿದ್ದರೂ ಟೀಕೆ ಮಾಡುವುದು ಸರಿಯಲ್ಲ. ಪಕ್ಷದ ವಿರುದ್ಧವಾಗಿ ಬಹಿರಂಗವಾಗಿ ಮಾತನಾಡುವುದೂ ಸರಿಯಲ್ಲ. ಯಾರೇ ಆಗಿದ್ದರೂ ನಿಮ್ಮ ದೂರು, ಸಮಸ್ಯೆಗಳು ಇದ್ದರೆ ಬಹಿರಂಗ ಹೇಳಿಕೆ ನೀಡುವುದು ನಿಲ್ಲಿಸಿ. ಕೇಂದ್ರ ನಾಯಕರ ಜೊತೆಗೆ ಮಾತನಾಡಬೇಕು. ಪಕ್ಷದ ವರಿಷ್ಠರಾದ ಅಮಿತ್ ಶಾ, ರಾಜನಾಥ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಳಿ ಮಾತನಾಡಲಿ. ಏನೇ ಸಮಸ್ಯೆಗಳಿದ್ದರೆ, ತಪ್ಪಾಗಿದ್ದರೆ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಆರೋಪ ಬೇಡ, ತನಿಖೆ ಆಗಲಿ:ಈ ವೇಳೆ ಯಡಿಯೂರಪ್ಪ ಅವಧಿಯಲ್ಲಿ 40 ಸಾವಿರ ಕೋಟಿ ಭ್ರಷ್ಟಾಚಾರ ಕುರಿತು ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ ಅವರು, ಈಗ ಅಧಿಕಾರ ಕಾಂಗ್ರೆಸ್ ಕೈಯಲ್ಲಿದೆ, ಆರೋಪ ಪ್ರತ್ಯಾರೋಪ ಮಾಡುವುದಕ್ಕಿಂತ ತನಿಖೆ ನಡೆಸಲಿ. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯಿಂದ ತನಿಖೆಯಾಗುತ್ತಿದೆ, ಅದರಲ್ಲಿ ದಾಖಲೆಗಳಿದ್ದರೆ ಬಹಿರಂಗ ಪಡಿಸಲಿ. ರಾಜಕೀಯದ ಕಾರಣ ಆರೋಪ ಪ್ರತ್ಯಾರೋಪ ಬಗ್ಗೆ ಮಾತನಾಡುವುದಿಲ್ಲ ಎಂದರು.