ಸಾರಾಂಶ
ಬೆಂಗಳೂರು : ಖುದ್ದು ಎಐಸಿಸಿ ಅಧ್ಯಕ್ಷ ಖರ್ಗೆ ಅವರೇ ಟೀಕಿಸಿದ್ದ ಕುಂಭಮೇಳಕ್ಕೆ ಹೋಗಿ ಡಿಕೆಶಿ ಮುಳುಗೇಳುತ್ತಾರೆ. ಹಿಂದೂವಾಗಿಯೇ ಹುಟ್ಟಿದ್ದೇನೆ, ಹಿಂದೂವಾಗಿಯೇ ಸಾಯುತ್ತೇನೆ ಎನ್ನುತ್ತಾರೆ. ಶಿವರಾತ್ರಿ ದಿನ ಅಮಿತ್ ಶಾ ಜತೆಗೂಡಿ ಜಾಗರಣೆ ಮಾಡುತ್ತಾರೆ. ಡಿಕೆಶಿ ಅವರ ಈ ನಡವಳಿಕೆಯನ್ನು ಗಮನಿಸಿ ಬಿಜೆಪಿಗೆ ಅವರು ಹತ್ತಿರವಾಗುತ್ತಿದ್ದಾರೆ ಎಂದು ವಿಶ್ಲೇಷಣೆಗಳೂ ಆರಂಭವಾಗಿವೆ. ಆದರೆ ಅವರ ನಡೆ ಹಿಂದೆ ಬೇರೆಯದೇ ಕಾರಣ ಇದ್ದಂತಿದೆ.
1. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದಕ್ಕೆ ಅತಿಯಾದ ಮುಸ್ಲಿಂ ತುಷ್ಟೀಕರಣ ಕಾರಣ ಎಂದು ಎ.ಕೆ.ಆ್ಯಂಟನಿ ಸಮಿತಿ ವರದಿ ಕೊಟ್ಟಿತ್ತು. ಅದಾದ ನಂತರ ರಾಹುಲ್ ಗಾಂಧಿ ‘ಮೃದು ಹಿಂದುತ್ವ’ ಮಂತ್ರ ಜಪಿಸಿದ್ದರು. ತಾವೊಬ್ಬ ಜನಿವಾರಧಾರಿ ಬ್ರಾಹ್ಮಣ ಎಂದು ಕರೆದುಕೊಂಡಿದ್ದರು. ದೇಗುಲಗಳಿಗೆ ಸುತ್ತಿದ್ದರು. ಈಗ ಡಿಕೆಶಿ ಆ ಪ್ರಯೋಗವನ್ನು ರಾಜ್ಯದಲ್ಲಿ ಮಾಡುತ್ತಿರುವಂತಿದೆ.
2. ರಾಜ್ಯದಲ್ಲಿ ಸಿದ್ದರಾಮಯ್ಯ ‘ಜಾತ್ಯತೀತ ನಾಯಕ’ ಎಂದು ಗುರುತಿಸಿಕೊಂಡಿದ್ದಾರೆ. ‘ಅಹಿಂದ’ ಫಲವಾಗಿ ಅವರ ಬೆನ್ನಿಗೆ ಅಲ್ಪಸಂಖ್ಯಾತರೂ ಇದ್ದಾರೆ. ಸರ್ಕಾರ ಅಲ್ಪಸಂಖ್ಯಾತರ ಪರ ಎಂದು ವಿಪಕ್ಷಗಳು ಟೀಕಿಸುತ್ತಲೇ ಬಂದಿವೆ. ಆ ಹಣೆಪಟ್ಟಿ ಕಳಚಿ, ತಾವು ಹಿಂದೂ ಪರ ಎಂದು ಬಿಂಬಿಸಿಕೊಳ್ಳುತ್ತಿರಬಹುದು.
3. ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಲ್ಲಿ ಡಿಕೆಶಿ ಕೂಡ ಒಬ್ಬರು. ಆ ಸಮುದಾಯವೊಂದರಿಂದಲೇ ‘ಉನ್ನತ ಹುದ್ದೆ’ ಗಳಿಸಲು ಆಗದು. ಕಾಂಗ್ರೆಸ್ಸಿನಲ್ಲಿ ಜಾತಿಗೊಬ್ಬರಂತೆ ನಾಯಕರಿದ್ದಾರೆ. ಆದರೆ ‘ಹಿಂದೂ ನಾಯಕ’ ಇಲ್ಲ. ಆ ಕೊರತೆ ತುಂಬುವ ಪ್ರಯತ್ನ ಇದಾಗಿರಬಹುದು.
4. ಹಿಂದುತ್ವದ ಕಾರಣಕ್ಕೆ ಬಿಜೆಪಿ ಪರ ಆಕರ್ಷಿತರಾಗಿರುವ ಜನಸಮೂಹವನ್ನು ಕಾಂಗ್ರೆಸ್ಸಿನತ್ತ ಸೆಳೆದು, ಕರಾವಳಿ ಸೇರಿ ರಾಜ್ಯಾದ್ಯಂತ ವರ್ಚಸ್ಸು ವೃದ್ಧಿಸಿಕೊಳ್ಳುವ ಕಸರತ್ತೂ ಇರಬಹುದು.