ಸಾರಾಂಶ
ಗುಜರಾತ್ನ ಗೋಧ್ರಾದಲ್ಲಿ ನಡೆದ ಹತ್ಯಾಕಾಂಡದಂತಹ ಘಟನೆ ರಾಜ್ಯದಲ್ಲಿಯೂ ಆಗುತ್ತದೆ ಎಂದು ವಿಧಾನಪರಿಷತ್ ಶಾಸಕ ಬೆ.ಕೆ.ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ರಾಜ್ಯದಲ್ಲಿ ಗುಜರಾತ್ನ ಗೋಧ್ರಾ ಹತ್ಯಾಕಾಂಡದಂತಹ ಮತ್ತೊಂದು ದುರಂತ ಆಗಬಹುದು. ಈ ಬಗ್ಗೆ ನನಗೆ ಕೆಲವು ರಾಜ್ಯಗಳಿಂದ ಮಾಹಿತಿ ಬರುತ್ತಿದೆ. ಕೆಲವು ಸಂಘಟನೆಗಳು ಈ ಕುರಿತು ಸಭೆ ನಡೆಸಿವೆ. ಹೀಗಾಗಿ ರಾಜ್ಯ ಸರ್ಕಾರ ಸೂಕ್ತ ಭದ್ರತೆ ಕಲ್ಪಿಸಬೇಕು. ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಇತಿಹಾಸವನ್ನು ಗಮನಿಸಿದರೆ ಸಾಕು. ಬಿಜೆಪಿಯವರು ಇಂತಹ ಕುಕೃತ್ಯಗಳಿಗೆ ಹೆಸರುವಾಸಿ. ರಾಜಕೀಯ ಲಾಭ ಪಡೆಯಲು ಎಂತಹ ಕೆಲಸ ಮಾಡಲೂ ಸಹ ಅವರು ಹಿಂಜರಿಯುವುದಿಲ್ಲ. ಈಗಾಗಲೇ ಕೆಲವು ಕಡೆ ಸಭೆಗಳು ನಡೆಯುತ್ತಿದ್ದು, ಕೆಲವರು ಪ್ರಚೋದನಾಕಾರಿ ಹೇಳಿಕೆ ಶುರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ. ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳೂ ಈ ಬಗ್ಗೆ ಎಚ್ಚರವಹಿಸುವುದು ಸೂಕ್ತ ಎಂದು ಹೇಳಿದ್ದಾರೆ.
ಈ ಹೇಳಿಕೆಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಇದು ನನ್ನ ವೈಯಕ್ತಿಕ ಹೇಳಿಕೆ. ಈ ಹಿಂದೆ ಗೋಧ್ರಾದಲ್ಲಿ ಅಯೋಧ್ಯೆ ಕರ ಸೇವಕರು ಇದ್ದ ರೈಲು ಸುಟ್ಟು ಹಾಕಿದರು. ಈ ವೇಳೆ 56 ಮಂದಿ ಸಾವನ್ನಪ್ಪಿದ್ದರು. ಆ ಘಟನೆ ಗುಜರಾತ್ನಲ್ಲೇ ಯಾಕಾಯಿತು? ಆಗ ಗುಜರಾತ್ನ ಮುಖ್ಯಮಂತ್ರಿ ಯಾರಾಗಿದ್ದರು ಎಂಬುದನ್ನು ಎಲ್ಲರೂ ಯೋಚಿಸಬೇಕು ಎಂದು ಹೇಳಿದರು.ಕೇವಲ ಗೋಧ್ರಾ ಹತ್ಯಾಕಾಂಡ ಮಾತ್ರವಲ್ಲ. ಪುಲ್ವಾಮಾ ದಾಳಿ, ಕಂದಮಾಲ್ನಲ್ಲಿ 1 ಲಕ್ಷ ಮಂದಿ ನಿರ್ಗತಿಕರಾಗಿದ್ದು, ಕಳೆದ ನಾಲ್ಕು ತಿಂಗಳಿಂದ ನಡೆಯುತ್ತಿರುವ ಮಣಿಪುರ ಗಲಭೆ ಎಲ್ಲವೂ ಬಿಜೆಪಿಯ ಇತಿಹಾಸವನ್ನು ಹೇಳುತ್ತವೆ. ಪುಲ್ವಾಮಾ ದಾಳಿ ಆದಾಗ ಇದು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಮಾಡಿದ್ದ ದುಷ್ಕೃತ್ಯ ಎಂದು ಮರು ದಿನವೇ ಹೇಳಿದ್ದೆ. ಇದೀಗ ಆಗಿನ ರಾಜ್ಯಪಾಲರಾದ ಸತ್ಪಾಲ್ ಮಲ್ಲಿಕ್ ಅವರೇ ಘಟನೆಯ ಬಗ್ಗೆ ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ. ಹೀಗಾಗಿ ಎಲ್ಲಾ ರಾಜ್ಯಗಳೂ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಕರೆ ನೀಡಿದರು.ರಾಮಮಂದಿರ ಉದ್ಘಾಟನೆ ರಾಜಕೀಯ ಕಾರ್ಯಕ್ರಮ:
ರಾಮ ಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ. ಇದೊಂದು ರಾಜಕೀಯ ಕಾರ್ಯಕ್ರಮ ಆಗುತ್ತಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗವಹಿಸುತ್ತಿದ್ದರು. ಶಂಕರಾಚಾರ್ಯರು ಮೂಲ ಗುರುಗಳು. ಅದೇ ರೀತಿ ಧರ್ಮ ಗುರುಗಳು ನಡೆಸಿಕೊಟ್ಟಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು. ಆದರೆ ಇಲ್ಲಿ ವಿಶ್ವ ಗುರು (ನರೇಂದ್ರ ಮೋದಿ) ನಡೆಸಿಕೊಡುತ್ತಿದ್ದಾರೆ. ಅಪೂರ್ಣವಾದ ದೇವಸ್ಥಾನ ಉದ್ಘಾಟನೆ ತಪ್ಪು ಎಂದು ಹಲವು ಧರ್ಮಗುರುಗಳು ಹೇಳುತ್ತಿದ್ದಾರೆ. ಹೀಗಿದ್ದರೂ ನಡೆಸುತ್ತಿದ್ದಾರೆ ಎಂದು ಕೇವಲ ರಾಜಕೀಯ ಲಾಭಕ್ಕಲ್ಲವೇ ಎಂದು ಪ್ರಶ್ನಿಸಿದ್ದಾರೆ.ಗೋದ್ರಾ ಮಾದರಿ ಹತ್ಯಾಕಾಂಡದ ಸಾಧ್ಯತೆ ಕುರಿತ ನನ್ನ ಹೇಳಿಕೆಗೆ ನಾನು ಬದ್ಧ. ತನಿಖಾ ಸಂಸ್ಥೆಗಳು ಬಂದರೆ ಅವರಿಗೂ ಎಲ್ಲೆಲ್ಲಿ ಸಭೆಗಳು ನಡೆದಿವೆ ಎಂಬುದನ್ನು ತಿಳಿಸುತ್ತೇನೆ. ಬಿಜೆಪಿಯ ಇತಿಹಾಸ ಎಲ್ಲರಿಗೂ ಗೊತ್ತಿರುವ ವಿಚಾರ. ಬಿಜೆಪಿ ಇತಿಹಾಸ ನೋಡಿದಾಗ ಯಾವ ಮಟ್ಟಕ್ಕೆ ಆದರೂ ಇಳಿಯುತ್ತಾರೆ.
ಬಿ.ಕೆ. ಹರಿಪ್ರಸಾದ್, ವಿಧಾನಪರಿಷತ್ ಸದಸ್ಯ