ನ್ಯಾಯಾಲಯಗಳು ನ್ಯಾಯಾಂಗದ ಕಾರ್ಯ ಮಾಡುವ ಬದಲು, ಶಾಸಕಾಂಗ, ಕಾರ್ಯಾಂಗದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಇದು ಸರಿಯಲ್ಲ.

ಸುವರ್ಣ ವಿಧಾನಸಭೆ : ನ್ಯಾಯಾಲಯಗಳು ನ್ಯಾಯಾಂಗದ ಕಾರ್ಯ ಮಾಡುವ ಬದಲು, ಶಾಸಕಾಂಗ, ಕಾರ್ಯಾಂಗದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಇದು ಸರಿಯಲ್ಲ. ನ್ಯಾಯಾಂಗದ ಕಾರ್ಯ ವ್ಯಾಪ್ತಿ ಬಗ್ಗೆ ಸುಧೀರ್ಘ ಚರ್ಚೆಯಾಗುವ ಅವಶ್ಯಕತೆಯಿದೆ ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಬಾಣಂತಿಯರ ಸಾವಿನ ಕುರಿತ ಚರ್ಚೆ ವೇಳೆ ಔಷಧ ಪೂರೈಕೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದ್ದಕ್ಕೆ ನ್ಯಾಯಾಲಯ ತಡೆ ನೀಡಿರುವ ಕುರಿತು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಮಾಡಿದ ಪ್ರಸ್ತಾಪಕ್ಕೆ ಬುಧವಾರ ಮಧ್ಯಪ್ರವೇಶಿಸಿ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ನ್ಯಾಯಾಂಗ ಈಗ ತನ್ನ ಕಾರ್ಯದ ಜತೆಗೆ ಶಾಸಕಾಂಗ, ಕಾರ್ಯಾಂಗ ಮಾಡಬೇಕಾದ ಕೆಲಸಗಳನ್ನೂ ಮಾಡುತ್ತಿದೆ. 

ನನ್ನ ಇಲಾಖೆಗೇ ಹಲವು ಆದೇಶಗಳು ಬರುತ್ತಿವೆ. ಕೆಲವೊಮ್ಮೆ ಸಣ್ಣ ರಸ್ತೆ ನಿರ್ಮಾಣ ವಿಚಾರದಲ್ಲೂ ಸೂಚನೆಗಳನ್ನು ನೀಡುತ್ತಿವೆ. ಹೀಗೆ ನ್ಯಾಯಾಂಗಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಶಾಸನ ರಚಿಸಿ, ಅನುಷ್ಠಾನ ಮಾಡುವ ನಮಗೆ ಅಧಿಕಾರವಿಲ್ಲವೇ? ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.