ಸಾರಾಂಶ
ರಾಜ್ಯ ಸರಕಾರದ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ, ಮುಡಾ ಮಾತ್ರವಲ್ಲ, ವಾಲ್ಮೀಕಿ ಮತ್ತಿತರ ನಿಗಮಗನಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಸದನದಲ್ಲೇ ಮುಖ್ಯಮಂತ್ರಿ ಅವ್ಯವಹಾರ ನಡೆದಿರುವುದು 187 ಕೋಟಿ ಅಲ್ಲ 89 ಕೋಟಿ ಎಂದು ಒಪ್ಪಿಕೊಂಡಿದ್ದಾರೆ
ಕೋಲಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಸಿಕ್ಕಿರುವ ಮೊದಲ ಜಯವಾಗಿದ್ದು, ಸಿದ್ದರಾಮಯ್ಯರಿಗೆ ಮಾನ ಮರ್ಯಾದೆ ಇದ್ದರೆ ಭಂಡತನ ಬಿಟ್ಟು ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆಗ್ರಹಿಸಿದರು.
ನಗರದೇವತೆ ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರು ಕಾನೂನಿಗೆ ತಲೆಬಾಗಲೇ ಬೇಕು ಎಂದು ಪ್ರತಿಪಾದಿಸಿದರು.ಸದನದಲ್ಲೇ ಒಪ್ಪಿಕೊಂಡಿದ್ದಾರೆ
ರಾಜ್ಯ ಸರಕಾರದ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ, ಮುಡಾ ಮಾತ್ರವಲ್ಲ, ವಾಲ್ಮೀಕಿ ಮತ್ತಿತರ ನಿಗಮಗನಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಸದನದಲ್ಲೇ ಮುಖ್ಯಮಂತ್ರಿ ಅವ್ಯವಹಾರ ನಡೆದಿರುವುದು ೧೮೭ ಕೋಟಿ ಅಲ್ಲ ೮೯ ಕೋಟಿ ಎಂದು ಒಪ್ಪಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಣವನ್ನು ಜ್ಯೂವೆಲರಿ ಶಾಪ್, ಸಾರಾಯಿ ಅಂಗಡಿಗಳಿಗೆ, ನಕಲಿ ಖಾತೆಗಳಿಗೆ, ಹೊ ರಾಜ್ಯದ ಸೊಸೈಟಿಗಳಿಗೆ ಹಸ್ತಂತರಿಸಿರುವುದು ಈಗಾಗಲೇ ಸಾಬೀತಾಗಿದೆ ಎಂದರು.
ಸಿಎಂ ಮೈಯಲ್ಲ ಕಪ್ಪು ಚುಕ್ಕೆ
ಕಪ್ಪು ಚುಕ್ಕೆ ಇಲ್ಲದ ಆಡಳಿತ ಸಿದ್ದರಾಮಯ್ಯನವರದ್ದು ಅಲ್ಲ ಇಡೀ ಮೈಯಲ್ಲಾ ಕಪ್ಪು ಚುಕ್ಕೆಗಳು ತುಂಬಿವೆ ಎಂಬುದನ್ನು ಈ ಹಗರಣಗಳು ಸಾಬೀತು ಮಾಡಿವೆ, ಈ ಸರಕಾರದಲ್ಲಿ ಎಂಎಲ್ಎಗಳು, ಸಚಿವರೂ ಹಗರಣದಲ್ಲಿ ತೊಡಗಿದ್ದಾರೆ, ಓರ್ವ ಮಂತ್ರಿ ಜೈಲಿಗೆ ಹೋಗಿದ್ದಾರೆ, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಆರೋಪದಲ್ಲಿ ಅರ್ಥವಿಲ್ಲ
ಭ್ರಷ್ಟಾಚಾರ ಎಂದರೆ ಕಾಂಗ್ರೆಸ್. ರಾಜ್ಯಪಾಲರು ದ್ವೇಷರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದಲ್ಲಿ ಅರ್ಥವಿಲ್ಲ. ರಾಜ್ಯಪಾಲರಿಗೆ ಅಗತ್ಯ ದಾಖಲೆಗಳು ಸಿಕ್ಕಿರುವುದರಿಂದಲೇ ಅವರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಪ್ರವೀಣ್ ಗೌಡ, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ ಮತ್ತಿತರರಿದ್ದರು.