ಸಾರಾಂಶ
ಕೋಲಾರ : ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಆದ್ದರಿಂದ ಬದಲಾವಣೆಗೆ ಪ್ರಶ್ನೆಯೂ ಇಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಸಿಎಂ ಬದಲಾವಣೆ ಬಗ್ಗೆ ಯಾರೋ ಹೇಳುವ ಮಾತುಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ, ನಮ್ಮ ಪಕ್ಷದ ಹೈಕಮಾಂಡ್ ಸಿಎಂ ಬದಲಾವಣೆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಇದೆಲ್ಲ ವಿರೋಧ ಪಕ್ಷಗಳ ಊಹಾಪೋಹವಾಗಿದ್ದು, ಉತ್ತರಿಸುವ ಅವಶ್ಯಕತೆ ಇಲ್ಲ ಎಂದರು.
ಕೋಲಾರ ಜಿಲ್ಲೆಯವರು ಸಿಎಂ ಆಗಲಿ
ಮುಂದೆ ಏನಾದರೂ ಸಿಎಂ ಹುದ್ದೆ ಸಿಗಬಹುದು ಅಂತ ಕೆಲವರು ಈಗಿನಿಂದಲೂ ಕಲ್ಲು ಹೊಡೆಯಲು ಹೊರಟಿರಬಹುದು. ಹಾಗೇನಾದರೂ ಇದ್ದಲ್ಲಿ ನನ್ನನ್ನು ಯಾರಾದರೂ ಬೆಂಬಲ ಕೇಳುತ್ತಿದ್ದರು. ಅಂತಹ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಉತ್ತರ ಕರ್ನಾಟಕಕ್ಕೆ, ಬೆಳಗಾವಿ ಭಾಗಕ್ಕೆ ಕೇಳುತ್ತಾರೆ. ಆದರೆ ಕೋಲಾರಕ್ಕೂ ಕೊಡಲಿ ಬಿಡಿ. ಬೆಂಗಳೂರಿಗೂ ಹತ್ತಿರವಾಗಿದೆ.
ಕೋಲಾರ ಭಾಗದಿಂದ ಸಿಎಂ ಸ್ಥಾನ ಕೇಳೋದು ತಪ್ಪಿಲ್ಲ. ಕೋಲಾರ ಅಭಿವೃದ್ಧಿಯಾಗಲಿ ಎಂದರು. ಮುಡಾ ಹಗರಣದ ಬಗ್ಗೆ ಕಾಂಗ್ರೆಸ್ ತನಿಖೆಗೆ ಒತ್ತಾಯಿಸಿದೆ. ಆದರೆ ಯಾರೋ ಒಬ್ಬ ವ್ಯಕ್ತಿ ಅರ್ಜಿ ಕೊಟ್ಟ ಮಾತ್ರಕ್ಕೆ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ಅದಕ್ಕೆ ಸಿಎಂ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಅಂತಹ ಸಂದರ್ಭ ಬಂದರೆ ಯಾರು ಸಿಎಂ ಆಗಬೇಕು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ದರಿಸುತ್ತದೆ. ನಾನಂತೂ ಸಿಎಂ ಸ್ಥಾನದ ಆಕಾಂಕ್ಷಿಯಲ್ಲ ಎಂದರು.ನೀರು ಬರುವವರೆಗೆ ಬೇಸರ
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ 2027 ಕ್ಕೆ ಎತ್ತಿನ ಹೊಳೆ ಯೋಜನೆಯಿಂದ ನೀರು ಬರಲಿದೆ ಈಗಾಗಲೇ ಯೋಜನೆಯ ಪ್ರಾರಂಭವಾಗಿ ನೀರು ಹರಿಸಲಾಗುತ್ತಾ ಇದ್ದು ನಮಗೆ ೨೪ ಟಿಎಂಸಿ ನೀರು ಬರಲಿದೆ ಅದರಲ್ಲಿ 9 ಟಿಎಂಸಿ ನೀರು ಕೆರೆಗಳಿಗೆ ತುಂಬಿಸಲಾಗುತ್ತದೆ ಅಲ್ಲಿ ತನಕ ಬೇಸರ ಇದ್ದೇ ಇರುತ್ತದೆ ಎಂದರು.