ಸಾರಾಂಶ
ವಿಧಾನಸೌಧ : ನೀರಾವರಿ, ಅತಿವೃಷ್ಟಿ, ಅನಾವೃಷ್ಟಿ ಸೇರಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸರ್ಕಾರ ಸಿದ್ಧವಿದೆ. ವಿರೋಧ ಪಕ್ಷಗಳು ಸುಗಮ ಕಲಾಪ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಮನವಿ ಮಾಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ಮೌಲ್ಯಯುತ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಸರ್ಕಾರ ಎಲ್ಲದಕ್ಕೂ ಉತ್ತರ ನೀಡಲು ಸಿದ್ಧವಿದೆ. ಯಾವುದೇ ರಾಜಕೀಯ ಮಾಡದೆ ಕಲಾಪದಲ್ಲಿ ಭಾಗವಹಿಸಿ ಸರ್ಕಾರದಿಂದ ಉತ್ತರವನ್ನು ಪಡೆಯಬೇಕು. ಕಲಾಪದ ಸಮಯವನ್ನು ವ್ಯರ್ಥ ಮಾಡಬಾರದು ಎಂದರು.
ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಬಗ್ಗೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಈಗಾಗಲೇ ಇದಕ್ಕೆ ಸಮಿತಿಯನ್ನು ರಚನೆ ಮಾಡಿ 5 ದಿನದಲ್ಲಿ ವರದಿ ಕೊಡುವಂತೆ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಹ ಈ ನಿಟ್ಟಿನಲ್ಲಿ ಸೂಚಿಸಿದ್ದಾರೆ. ಯಾವುದೇ ವಿಷಯಕ್ಕೆ ಸಂಬಂಧಪಟ್ಟಿದ್ದಾದರೂ ಸಹ ನಮ್ಮ ಸರ್ಕಾರದ ಪ್ರತಿನಿಧಿಗಳು ಸದನದಲ್ಲಿ ಉತ್ತರ ನೀಡಲು ಸಿದ್ಧರಿದ್ದಾರೆ ಎಂದರು.