ಬಿಜೆಪಿಗೆ ಬಂದು 4 ಬಾರಿ ಸೋತೆ: ಸೋಮಣ್ಣ ಅತೃಪ್ತಿ

| Published : Oct 09 2023, 12:46 AM IST / Updated: Oct 09 2023, 10:12 AM IST

ಬಿಜೆಪಿಗೆ ಬಂದು 4 ಬಾರಿ ಸೋತೆ: ಸೋಮಣ್ಣ ಅತೃಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

‘ಬಿಜೆಪಿಗೆ ಬರುವವರೆಗೆ ನಾನು ಸೋತೇ ಇರಲಿಲ್ಲ. ಬಿಜೆಪಿಗೆ ಬಂದ ಬಳಿಕ 4 ಬಾರಿ ಸೋತೆ. ನಾನು ಏನೋ ಆಗಿಬಿಡುತ್ತೇನೆ ಎಂಬ ಭಯದಲ್ಲಿ ನನ್ನನ್ನು ಬಿಜೆಪಿಯಲ್ಲಿ ಸೋಲಿಸಲಾಗಿದೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು ‘ಬಿಜೆಪಿಗೆ ಬರುವವರೆಗೆ ನಾನು ಸೋತೇ ಇರಲಿಲ್ಲ. ಬಿಜೆಪಿಗೆ ಬಂದ ಬಳಿಕ 4 ಬಾರಿ ಸೋತೆ. ನಾನು ಏನೋ ಆಗಿಬಿಡುತ್ತೇನೆ ಎಂಬ ಭಯದಲ್ಲಿ ನನ್ನನ್ನು ಬಿಜೆಪಿಯಲ್ಲಿ ಸೋಲಿಸಲಾಗಿದೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದೆ. ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೆ ಎಂದು ಹೇಳಿದರು. ಬುದ್ಧಿವಂತರಿದ್ದರೆ ಅವರನ್ನು ಮೂಲೆಗುಂಪು ಮಾಡುವ ಕೆಲಸ ನಡೆಯುತ್ತಿದೆ. ನಾನು ನಿಷ್ಠುರವಾಗಿ ಮಾತನಾಡುತ್ತೇನೆ. ಆದರಿಂದ ಏನಾಗಿದೆ ಎಂಬ ಬಗ್ಗೆ ಚರ್ಚೆ ಬೇಡ. ಕಷ್ಟಪಟ್ಟು ಬೆಂಗಳೂರಿನಲ್ಲಿ ಬೆಳೆದಿದ್ದೇನೆ. ನಾನು ಕೆಲಸಗಾರ ಎಂಬ ಭಾವನೆ ಇದೆ ಎಂದ ಅವರು, ಈ ಹಿಂದೆ ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿನ ಮಂತ್ರಿಯೊಬ್ಬರು ಗೋವಿಂದರಾಜನಗರ ಯಾಕೆ ಬಿಟ್ಟಿರಿ ಅಂದ್ರು. ನಾನು ಕ್ಷೇತ್ರ ಬಿಡಲಿಲ್ಲ, ನನ್ನನ್ನು ಬೇರೆ ಕ್ಷೇತ್ರಕ್ಕೆ ಕಳುಹಿಸಿದರು ಅಂದೆ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ 10 ಬಾರಿ ಗೆದ್ದಿದ್ದಾರೆ. ಪ್ರತಿ ಬಾರಿಯೂ ಬೇರೆ ಬೇರೆ ಕ್ಷೇತ್ರಗಳಲ್ಲೇ ಗೆದ್ದಿದ್ದಾರೆ. ಅಂತೆಯೇ ಮುಂದೆ ನೀವೂ ಬೇರೆ ಬೇರೆ ಕ್ಷೇತ್ರಕ್ಕೆ ಹೋಗಿ, ಸೋಲಿನಿಂದ ಧೃತಿಗೆಡಬೇಡಿ ಎಂದು ಹೇಳಿ ನನ್ನನ್ನು ಬೇರೆ ಕ್ಷೇತ್ರಕ್ಕೆ ಕಳುಹಿಸಿದ್ದರು ಎಂದು ಹೇಳಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ದೇವನೂರು ಮಠದ ಶ್ರೀ ಮಹಂತ ಸ್ವಾಮೀಜಿ, ಡಾ. ಶರತ್ಚಂದ್ರ ಸ್ವಾಮೀಜಿ, ಬೆಟ್ಟದಪುರ ಶ್ರೀಗಳು ಮತ್ತಿತರರು ಇದ್ದರು. --- ಜಾತಿಗಣತಿ ನೋಡಿದ್ರೆ ಅಚ್ಚರಿಯಾಗುತ್ತೆ: ವಿ. ಸೋಮಣ್ಣ ಕನ್ನಡಪ್ರಭ ವಾರ್ತೆ ಮೈಸೂರು ಜಾತಿ ಗಣತಿ ವರದಿ ನೋಡಿದರೆ ಅಚ್ಚರಿಯಾಗುತ್ತದೆ. ವೀರಶೈವ ಸಮಾಜ ಕವಲುದಾರಿಯಲ್ಲಿ ಸಾಗುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಕಳವಳ ವ್ಯಕ್ತಪಡಿಸಿದರು. ನಗರದ ಕಲಾಮಂದಿರದಲ್ಲಿ ಭಾನುವಾರ ಬಸವ ಬಳಗಗಳ ಒಕ್ಕೂಟ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜಾತಿ ಗಣತಿ ವರದಿ ನೋಡಿದರೆ ಅಚ್ಚರಿಯಾಗುತ್ತದೆ. ವೀರಶೈವ ಸಮಾಜ ಒಗ್ಗಟ್ಟಾಗಬೇಕು, ಇಲ್ಲದಿದ್ದರೆ ಹೇಳುವವರು, ಕೇಳುವವರು ಇಲ್ಲದಂತಾಗುತ್ತದೆ. ನಮ್ಮಲ್ಲಿ ಎಲ್ಲವೂ ಇದೆ. ಆದರೆ ಅವಕಾಶ ಬಂದಾಗ ಕಣ್ಮುಚ್ಚಿ ಕೂರುತ್ತೇವೆ ಎಂದು ಹೇಳಿದರು.