ಸಾರಾಂಶ
ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನಾವು ಇನ್ನೂ ಒಪ್ಪಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ : ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನಾವು ಇನ್ನೂ ಒಪ್ಪಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಭಾನುವಾರ ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನಾವು ಇನ್ನೂ ಒಪ್ಪಿಲ್ಲ. ನಮಗೇನಿದ್ದರೂ ಹೈಕಮಾಂಡ್. ಹೈಕಮಾಂಡ್ ಅಪ್ಪಣೆ ಮೇರೆಗೆ ನಾನು ಕಾರ್ಯ ನಿರ್ವಹಿಸುತ್ತೇನೆಯೇ ವಿನಃ ರಾಜ್ಯ ನಾಯಕರ ಅಪ್ಪಣೆ ಮೇರೆಗೆ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಅವರು ಅಸಮಾಧಾನ ಹೊರಹಾಕಿದರು.
ಮಹಾನಾಯಕ ಇನ್ಮುಂದೆ ಸಿಡಿ.ಶಿವು:
ಪದೇ ಪದೇ ಮಹಾನಾಯಕ ಎಂದು ಸಂಭೋದಿಸಿದರೆ ಮಹಾನಾಯಕರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಭಾವಿಸಿ ನಾನು ಮತ್ತು ಎಚ್.ಡಿ. ಕುಮಾರಸ್ವಾಮಿಯವರು ಮಹಾನಾಯಕನಿಗೆ ಮರುನಾಮಕರಣ ಮಾಡಿದ್ದೇವೆ. ಇನ್ಮುಂದೆ ಅವನು ಮಹಾನಾಯಕ ಅಲ್ಲ, ಬದಲಾಗಿ ಸಿ.ಡಿ.ಶಿವು ಎಂದು ಉಪಮುಖ್ಯಮಂತ್ರಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ರಮೇಶ ಜಾರಕಿಹೊಳಿ ಟಾಂಗ್ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನ ಗೆಲ್ಲಲು ಸಿದ್ದರಾಮಯ್ಯನವರೇ ಕಾರಣ. ಆದರೆ, ಕೆಲವರು ಎದೆ ಉಬ್ಬಿಸಿ ಈ ಸರ್ಕಾರ ಬರಲು ತಮ್ಮ ಪಾತ್ರವೂ ಇದೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.