ನನ್ನ ಪ್ರಾರ್ಥನೆ ವಿಫಲವಾಗಲ್ಲ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

| N/A | Published : Jul 05 2025, 01:48 AM IST / Updated: Jul 05 2025, 06:59 AM IST

ಸಾರಾಂಶ

ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು. ಬೆಂಬಲ ನೀಡುತ್ತೇನೆ. ಅದು ಬಿಟ್ಟರೆ ನನಗೆ ಬೇರೆ ಆಯ್ಕೆಯೇ ಇಲ್ಲ ಎಂದು ಬುಧವಾರ ಹೇಳಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ನನ್ನ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ಹೇಳಿದ್ದಾರೆ.

  ಮೈಸೂರು :  ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ನಾನು ಬೆಂಬಲ ನೀಡಲೇಬೇಕು. ಬೆಂಬಲ ನೀಡುತ್ತೇನೆ. ಅದು ಬಿಟ್ಟರೆ ನನಗೆ ಬೇರೆ ಆಯ್ಕೆಯೇ ಇಲ್ಲ ಎಂದು ಬುಧವಾರ ಹೇಳಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ನನ್ನ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ಹೇಳಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಕುಟುಂಬ ಸಮೇತ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಈ ವೇಳೆ, ಮುಖ್ಯಮಂತ್ರಿ ರೇಸ್‌ನಿಂದ ಹೊರಬಿದ್ದಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು. ಪ್ರಯತ್ನ ವಿಫಲವಾಗಬಹುದು. ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನನಗೆ ಏನು ಬೇಕು ಅದನ್ನು ಪ್ರಾರ್ಥನೆ ಮಾಡಿದ್ದೇನೆ. ಈಗ ಯಾವ ಚರ್ಚೆಯೂ ಬೇಡ ಎಂದು ಹೇಳಿದರು.

ರಾಜಕೀಯದ ಬಗ್ಗೆ ಈಗ ಏನನ್ನೂ ಮಾತನಾಡುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರು ಹಾಗೂ ಹಿರಿಯರು. ಅವರು ಬುದ್ಧಿವಾದ ಹೇಳಿ ಸಂದೇಶ ಕೊಟ್ಟಿದ್ದಾರೆ. ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದಷ್ಟೇ ಹೇಳಿ ನಿರ್ಗಮಿಸಿದರು. ಆದರೆ ಖರ್ಗೆ ನೀಡಿದ ಸಂದೇಶ ಏನು ಎಂಬ ಬಗ್ಗೆ ತಿಳಿಸಲಿಲ್ಲ.

ದುಃಖವನ್ನು ದೂರ ಮಾಡುವ ದೇವಿ, ಚಾಮುಂಡಿ. ಈ ಬಾರಿ ಇಡೀ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿದೆ. ಎಲ್ಲರಿಗೂ ಒಳ್ಳೆಯದನ್ನು ಮಾಡಲೆಂದು ಪ್ರಾರ್ಥನೆ ಮಾಡಿದ್ದೇನೆ‌. ಇಡೀ ರಾಜ್ಯಕ್ಕೆ ಏನೇ ಕೆಲಸ ಮಾಡಬೇಕಾದರೂ ತಾಯಿಗೆ ಪೂಜೆ ಸಲ್ಲಿಸಿ ಮಾಡುತ್ತೇವೆ‌. ಇಂದು ಕುಟುಂಬ ಸಮೇತ ತಾಯಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು. 

11 ಈಡುಗಾಯಿ ಒಡೆದ ಡಿಕೆಶಿ

ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಪ್ರಾರ್ಥನೆ ಮಾಡಿಕೊಂಡು 11 ಈಡುಗಾಯಿ ಒಡೆದರು.

Read more Articles on