ಸಾರಾಂಶ
ಪಾಂಡವಪುರ : ತುಂಗಭದ್ರಾ ಜಲಾಶಯದಲ್ಲಿ ಆದ ಕ್ರಸ್ಟ್ಗೇಟ್ ಚೈನ್ ಕಟ್ ಪ್ರಕರಣದಿಂದ ಎಚ್ಚೆತ್ತು ಕೆಆರ್ಎಸ್ ಜಲಾಶಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಕೃಷಿ-ಖುಷಿ ಕಾರ್ಯಕ್ರಮದಲ್ಲಿ ಭತ್ತದ ಸಸಿ ನಾಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾರಾಯಣಪುರ, ಆಲಮಟ್ಟಿ ಜಲಾಶಯದಲ್ಲಿ ಸ್ಟಾಪ್ ಲಾಕ್ಗೇಟ್ ಅಳವಡಿಸಲಾಗಿದೆ. ತುಂಗಭದ್ರ ಜಲಾಶಯದಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಸಿಲ್ಲ. ಅದಕ್ಕಾಗಿಯೇ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ ಎಂದರು.
ಕೆಆರ್ಎಸ್ ಅಣೆಕಟ್ಟೆಯಲ್ಲೂ ಸ್ಟಾಪ್ ಲಾಕ್ ಗೇಟ್ ಅಳವಡಿಸಿಲ್ಲ. ಅಣೆಕಟ್ಟು ನಿರ್ಮಾಣ ಕಾಲದಲ್ಲಿ ಸ್ಟಾಪ್ಲಾಕ್ ವ್ಯವಸ್ಥೆ ಇಲ್ಲದಿದ್ದ ಕಾರಣ ಹಾಕಿರಲಿಲ್ಲ. ಈಗ ತುಂಗಭದ್ರಾ ಜಲಾಶಯದಲ್ಲಿ ಉಂಟಾಗಿರುವ ಪರಿಸ್ಥಿತಿ ಗಮನಿಸಿದರೆ ಕೆಆರ್ಎಸ್ ಸುರಕ್ಷತೆ ಹಾಗೂ ರೈತರ ಹಿತದೃಷ್ಟಿಯಿಂದ ಕೂಡಲೇ ಸ್ಟಾಪ್ಲಾಕ್ ವ್ಯವಸ್ಥೆ ಅಳವಡಿಸುವ ಅವಶ್ಯಕತೆ ಇದೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ಅನಾಹುತವಾಗಿದೆ. 19 ನೇ ಕ್ರಸ್ಟ್ಗೇಟ್ನ ಚೈನ್ ತುಂಡಾದ ಪರಿಣಾಮ ಬಾಗಿಲು ತೆರೆದುಕೊಂಡಿದೆ. ಇದರಿಂದ ೩೦ ಸಾವಿರ ಕ್ಯುಸೆಕ್ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಈ ಅನಾಹುತದಿಂದ ಜಲಾಶಯದ 60ಟಿಎಂಸಿ ನೀರು ಖಾಲಿಯಾಗುತ್ತದೆ. ಇದು ರೈತರ ಬದುಕಿನ ಆಶಾಭಾವನೆಗೆ ಧಕ್ಕೆ ತಂದಿದೆ ಎಂದು ಬೇಸರದಿಂದ ನುಡಿದರು.
ತುಂಗಭದ್ರಾ ಜಲಾಶಯವನ್ನು 70 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಹಿಂದೆಯೂ ಅಲ್ಲಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿದ್ದವು. ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿ ತಾಂತ್ರಿಕ ವಿಚಾರದಲ್ಲಿ ಕಾಟಚಾರದ ವರದಿ ಕೊಟ್ಟಿವೆ. ಅದಕ್ಕಾಗಿ ಇಂತಹ ಪರಿಸ್ಥಿತಿ ಬಂದಿದೆ. ಇದನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ನ ಚೈನ್ ತುಂಡಾದ ಪ್ರಕರಣದಲ್ಲಿ ಸರ್ಕಾರದ ನಿರ್ಲಕ್ಷ್ಯ ಎನ್ನಲಾಗದು. ಜಲಾಶಯದ ತಾಂತ್ರಿಕ ಸಮಿತಿ ಇರುತ್ತದೆ. ಆ ಸಮಿತಿ ಪ್ರತಿ ವರ್ಷ ಜಲಾಶಯದ ಸುರಕ್ಷತೆಗೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸುತ್ತದೆ. ಕಾಟಾಚಾರದ ಪರಿಶೀಲನೆಗಳು ನಡೆದಾಗ ಈ ರೀತಿಯ ಅನಾಹುತಗಳು ಸಂಭವಿಸುತ್ತವೆ. ತಾಂತ್ರಿಕವಾಗಿ ಪರಿಣತಿ ಹೊಂದಿರುವ ತಜ್ಞರ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಹೇಳಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಎಸ್ಟಿಜಿ ವಿದ್ಯಾಸಂಸ್ಥೆಯ ಸಿ.ಪಿ.ಶಿವರಾಜು, ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಇತರರಿದ್ದರು.
ಡಿಕೆಶಿ ಶೀಘ್ರದಲ್ಲೇ ಜೈಲು ಸೇರ್ತಾರೆ: ಎಚ್ಡಿಕೆ
ನಾನು ಮೆಂಟಲ್ ಆಸ್ಪತ್ರೆ ಸೇರುವುದಾದರೆ ಡಿ.ಕೆ.ಶಿವಕುಮಾರ್ ಜೈಲು ಸೇರೋದು ಗ್ಯಾರಂಟಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.ತಾಲೂಕಿನ ಸೀತಾಪುರದಲ್ಲಿ ಗ್ರಾಮದಲ್ಲಿ ಕಾವೇರಿ ನದಿಗೆ ಬಾಗಿನ ಸಮರ್ಪಿಸಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಮೆಂಟಲ್ ಆಸ್ಪತ್ರೆಗೆ ಯಾರು ಹೋಗ್ತಾರೆ, ಜೈಲಿಗೆ ಹೋಗುವವರು ಯಾರು ಎಂಬುದನ್ನು ನೋಡೋಣ ಬನ್ನಿ. ನಾವು ಮೆಂಟಲ್ ಆಸ್ಪತ್ರೆ ಸೇರಿದರೆ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ, ಅವರು ಹೋಗುವ ಜಾಗದಲ್ಲಿ ಯಾವ ಚಿಕಿತ್ಸೆ ಸಿಗುತ್ತದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ನಡೆಸಿರುವ ಭ್ರಷ್ಟಾಚಾರವನ್ನು ಜನರಿಗೆ ತಿಳಿಸಲು ಪಾದಯಾತ್ರೆ ಮಾಡಿದ್ದೇವೆ. ಮುಂದೆ ಕಾನೂನು ರೀತಿಯ ಹೋರಾಟವೂ ಸಹ ನಡೆಯುತ್ತದೆ. ಕರ್ನಾಟಕದ ಖಜಾನೆ ಸದಾ ಸಂಪದ್ಭರಿತವಾದ ಖಜಾನೆ. ಈ ಖಜಾನೆಯನ್ನು ಸರ್ಕಾರ ಲೂಟಿ ಮಾಡುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಮೂಲೆಗುಂಪು ಮಾಡಿದೆ ಎಂದು ಟೀಕಿಸಿದರು.
ಕೆಂಗಲ್ ಹನುಮಂತಯ್ಯ ಕಟ್ಟಿರುವ ವಿಧಾನಸೌಧದ ಕುರ್ಚಿ ಗಟ್ಟಿಯಾಗಿದೆ. ಹಾಗಾಗಿ ರಾಜ್ಯದ ಅಧಿಕಾರದ ಕುರ್ಚಿ ಸದಾ ಭದ್ರವಾಗಿಯೇ ಇರುತ್ತದೆ. ಮುಖ್ಯಮಂತ್ರಿ ಕುರ್ಚಿ ಭದ್ರವಾಗಿರುತ್ತದೆ. ಕುರ್ಚಿಯಲ್ಲಿ ಕೂರುವವರು ಸದಾಕಾಲ ಭದ್ರವಾಗಿ ಇರಲಾಗುವುದಿಲ್ಲ ಎಂದರು.