ಹಿರಿಯರನ್ನು ಕೇಳದೆ ಮೇಲ್ಮನೆ ಅಭ್ಯರ್ಥಿ ಆಯ್ಕೆಗೆ ಪರಂ ಗರಂ

| Published : May 29 2024, 01:41 AM IST / Updated: May 30 2024, 04:38 AM IST

ಹಿರಿಯರನ್ನು ಕೇಳದೆ ಮೇಲ್ಮನೆ ಅಭ್ಯರ್ಥಿ ಆಯ್ಕೆಗೆ ಪರಂ ಗರಂ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಾಗ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಇಬ್ಬರೇ ತೀರ್ಮಾನ ತೆಗೆದುಕೊಂಡರೆ ಸರಿ ಕಾಣುವುದಿಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಆಗ್ರಹಿಸಿದ್ದಾರೆ.

 ಬೆಂಗಳೂರು : ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಾಗ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಇಬ್ಬರೇ ತೀರ್ಮಾನ ತೆಗೆದುಕೊಂಡರೆ ಸರಿ ಕಾಣುವುದಿಲ್ಲ. ಅವರು ಪಕ್ಷ ಹಾಗೂ ಸರ್ಕಾರದಲ್ಲಿನ ನಮ್ಮಂತಹ ಎಲ್ಲ ಹಿರಿಯರ ಅಭಿಪ್ರಾಯವನ್ನು ಕೇಳಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಆಗ್ರಹಿಸಿದ್ದಾರೆ.

 ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮುನ್ನ ನನ್ನಂತಹ ಹಿರಿಯರ ಅಭಿಪ್ರಾಯವನ್ನೂ ಪಡೆಯಬೇಕು. ಕೆಪಿಸಿಸಿಯ ಮಾಜಿ ಅಧ್ಯಕ್ಷರುಗಳು ಸೇರಿದಂತೆ ಪಕ್ಷ ಹಾಗೂ ಸರ್ಕಾರದಲ್ಲಿ ಅನೇಕ ಸ್ಥಾನಮಾನದ ಅನುಭವ ಇರುವವರು ಇದ್ದಾರೆ. 

ಅಂತಹ ಎಲ್ಲ ಹಿರಿಯರು, ಅನುಭವಿಗಳ ಅಭಿಪ್ರಾಯ ಪಡೆದರೆ ಒಳ್ಳೆಯದು. ಹಿರಿಯರ ಅಭಿಪ್ರಾಯ ಪಡೆಯದೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಇಬ್ಬರೇ ನಿರ್ಧರಿಸಿದರೆ ಅದು ನನ್ನ ಪ್ರಕಾರ ಸರಿ ಕಾಣುವುದಿಲ್ಲ’ ಎಂದರು.

‘ಅಭ್ಯರ್ಥಿಗಳ ಆಯ್ಕೆಗೆ ಜಾತಿವಾರು, ಪ್ರಾದೇಶಿಕವಾರು ಆದ್ಯತೆ ನೀಡಿ ಎಂದು ವಿವಿಧ ಸಚಿವರು ಒತ್ತಾಯಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ಅದೇ ಅಭ್ಯರ್ಥಿಗಳ ಆಯ್ಕೆ ವೇಳೆ ಜಿಲ್ಲಾವಾರು, ಜಾತಿವಾರು, ಪ್ರಾದೇಶಿಕವಾರು ಜೊತೆಗೆ ಯಾರು ಪಕ್ಷಕ್ಕಾಗಿ ದುಡಿದಿದ್ದಾರೆ, ಯಾವ ಸಮುದಾಯದ ಪಕ್ಷದ ಜೊತೆ ನಿಂತಿದೆ. ಇದೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಹಾಗಾಗಿಯೇ ಏಕಾಏಕಿ ಅವರಿಬ್ಬರೇ ಕೂತು ತೀರ್ಮಾನ ಮಾಡಬಾರದು ಎಂಬುದು ನನ್ನ ಅಭಿಪ್ರಾಯ’ ಎಂದರು.