ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರದ ವಕ್ಫ್ ಲ್ಯಾಂಡ್ ಜಿಹಾದ್ ವಿರುದ್ಧ ನಡೆಯುತ್ತಿರುವ ಹೋರಾಟದ ಭಾಗವಾಗಿ ನ. 19 ರ ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ
ಚಿಕ್ಕಬಳ್ಳಾಪುರ : ರಾಜ್ಯ ಕಾಂಗ್ರೆಸ್ ಸರ್ಕಾರದ ವಕ್ಫ್ ಲ್ಯಾಂಡ್ ಜಿಹಾದ್ ವಿರುದ್ಧ ನಡೆಯುತ್ತಿರುವ ಹೋರಾಟದ ಭಾಗವಾಗಿ ನ. 19 ರ ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸದ ಡಾ.ಕೆ. ಸುಧಾಕರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಮುಸ್ಲಿಂ ರಾಜರು ದಾಳಿ ಮಾಡಿ, ಮತಾಂಧತೆ ಮೆರೆದಿದ್ದರು. ಈಗ ಇದೇ ರೀತಿ ಈಗ ಜಮೀನಿನ ಕಬಳಿಕೆ ನಡೆಯುತ್ತಿದೆ. ಭೂಗಳ್ಳರು ಮಾತ್ರವಲ್ಲದೆ, ಸರ್ಕಾರವೇ ಅಧಿಕೃತವಾಗಿ ಒತ್ತುವರಿ ಆರಂಭ ಮಾಡಿದೆ ಎಂದರು.
1,21000 ಎಕರೆ ಕಬಳಿಕೆ
ವಕ್ಫ್ ಬೋರ್ಡ್ ಹೆಸರಲ್ಲಿ ಒಂದು ಲಕ್ಷ ಇಪ್ಪತ್ತೊಂದು ಸಾವಿರಕ್ಕೂ ಹೆಚ್ಚು ಎಕರೆ ಆಸ್ತಿಗಳನ್ನು ಕಬಳಿಸಲಾಗಿದೆ. ಇದರಲ್ಲಿ ಹಿಂದುಗಳ ಸ್ಮಶಾನ, ಮಠ, ದೇವಸ್ಥಾನ, ಚರ್ಚ್,ಕೃಷಿ ಜಮೀನುಗಳೂ ಇವೆ. ಇದಲ್ಲದೇ ಜಿಲ್ಲೆಯ ಚಿಕ್ಕಬಳ್ಳಾಪುರ,ಗುಡಿಬಂಡೆ,ಬಾಗೇಪಲ್ಲಿ,ಶಿಡ್ಲಘಟ್ಟ,ಗೌರಿಬಿದನೂರು,ಚಿಂತಾಮಣಿಯಲ್ಲಿ ಎಷ್ಟೇಷ್ಟು ಜಾಗವನ್ನು ವಕ್ಪ್ ಕಬಳಿಸಿದೆ ಎಂಬ ವಿವರಗಳು ಸಹಾ ತಮ್ಮ ಬಳಿ ಇದೆ. ದೇವಸ್ಥಾನಕ್ಕೆ, ಮಠಕ್ಕೆ ಒಂದು ಗುಂಟೆ ಜಾಗ ಕೊಡಿಸಲು ಆಗದ ಅಧಿಕಾರಿಗಳು, ನೂರಾರು ಎಕರೆ ಭೂಮಿಯನ್ನು ವಕ್ಫ್ ಬೋರ್ಡ್ ಹೆಸರಿಗೆ ಮಾಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಹಿಂದು ವಿರೋಧಿ, ರೈತ ವಿರೋಧಿ ಸರ್ಕಾರವಾಗಿದೆ ಎಂದರು.
ವಕ್ಫ್ ವಿರುದ್ಧ ರೈತರ ಹೋರಾಟ
ಮಂಗಳವಾರ ಬೆಳಗ್ಗೆ 10 ಗಂಟೆಗೆ ತಾಲ್ಲೂಕಿನ ಮುದ್ದೇನಹಳ್ಳಿಗೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತಿತರ ಮುಖಂಡರೊಂದಿಗೆ ತೆರಳಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಸಮಾಧಿಗೆ ಪೂಜೆ ಸಲ್ಲಿಸಲಾಗುವುದು. ನಂತರ ವಕ್ಫ್ ಆಸ್ತಿ ವಿವಾದ ವಿರುವ ಕಂದಾವರದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಓದಿದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಆನಂತರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ವಕ್ಫ್ ವಿರುದ್ಧ ರೈತರ ಹೋರಾಟದಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.