ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರವನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು, ನಿಜವಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ದಾಖಲೆಗಳನ್ನು ಜನರ ಮುಂದಿಡಿ ಎಂದು ಬಿಜೆಪಿ ಮುಖಂಡ ಕೆಂಪು ಸಾಗರ ಶಿವರಾಜ್, ನಗರಸಭೆ ಮಾಜಿ ಅಧ್ಯಕ್ಷ ಕೆ.ಎಂ.ಸಮಿವುಲ್ಲಾ ಅವರಿಗೆ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ನಗರಸಭೆಗೆ ಖರೀದಿಸಲಾದ ಕಾಂಪ್ಯಾಕ್ಟರ್ ವಾಹನದ ವಿಚಾರದಲ್ಲಿ ನಡೆದ ನಿರ್ಲಕ್ಷ್ಯ, ಆಡಳಿತ ವೈಫಲ್ಯ ಮತ್ತು ಕಮಿಷನ್ ರಾಜಕಾರಣದಿಂದ ನಗರಸಭೆಗೆ 33.95 ಲಕ್ಷ ರು.ನಷ್ಟ ಆಗಿತ್ತು ಎಂದು ಆರೋಪ ಮಾಡಿದರು.ಅಂದಿನ ನಗರಸಭೆ ಅಧ್ಯಕ್ಷರು, ಆಯುಕ್ತರು ಹಾಗೂ ಸಂಬಂಧಿತ ಅಧಿಕಾರಿಗಳ ವೈಫಲ್ಯದಿಂದ ಈ ಅವ್ಯವಸ್ಥೆ ಉಂಟಾಗಿದ್ದು, ಅದರ ಪರಿಣಾಮವಾಗಿ ಸುಮಾರು 8 ಮಂದಿ ಅಧಿಕಾರಿಗಳು ಅಮಾನತು ಭೀತಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಹಗರಣವನ್ನು ಬಹಿರಂಗಪಡಿಸಲು ಬಿಜೆಪಿ ಅರಸೀಕೆರೆ ಘಟಕ ನಿರಂತರ ಹೋರಾಟ ನಡೆಸಿತು.ನಗರಸಭೆ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಹಲವು ಹಂತದ ಒತ್ತಡ ಮತ್ತು ಪ್ರಯತ್ನಗಳ ಫಲವಾಗಿ ಮಾ.11ರಂದು ಆ ಕಾಂಪ್ಯಾಕ್ಟರ್ ವಾಹನಕ್ಕೆ ನೋಂದಣಿ ಮಾಡಿಸಲು ಸಾಧ್ಯವಾಯಿತು ಎಂದರು.
ಈ ಪ್ರಕ್ರಿಯೆಯಿಂದ ಕರ್ತವ್ಯದಲ್ಲಿದ್ದ ಸುಮಾರು 7 ಮಂದಿ ಅಧಿಕಾರಿಗಳು ನಿರಾಳ ನಿಟ್ಟುಸಿರು ಬಿಡುವಂತಾಯಿತು. 2018ರಲ್ಲಿ ಕಾಂಪ್ಯಾಕ್ಟರ್ ವಾಹನ ಖರೀದಿಯಾದಾಗ ನಗರಸಭೆಯ ಅಧ್ಯಕ್ಷರಾಗಿದ್ದವರು ಕೆ.ಎಂ. ಸಮಿವುಲ್ಲಾ. ಆದರೆ ವಾಹನ ಖರೀದಿಸಿದ ಬಳಿಕವೂ ಅದು ವರ್ಷಗಳ ಕಾಲ ಸಾರ್ವಜನಿಕರ ಸೇವೆಗೆ ಲಭ್ಯವಾಗದಿರುವುದು ಆಡಳಿತ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ ಎಂದು ಆರೋಪಿಸಿದರು.2024 ಜು.2ರಂದು ನಗರಸಭೆಯ ಆಯುಕ್ತರು ಜಿಲ್ಲಾ ನಗರಾಭಿವೃದ್ಧಿ ಕೋಶ, ಹಾಸನದ ಯೋಜನಾ ನಿರ್ದೇಶಕರಿಗೆ ಈ ಸಂಬಂಧ ಪತ್ರ ಬರೆದಿದ್ದರು ಎಂದು ಉಲ್ಲೇಖಿಸಿ, ಈ ಪ್ರಕರಣದಲ್ಲಿ ಗಂಭೀರ ಆಡಳಿತಾತ್ಮಕ ಲೋಪಗಳು ನಡೆದಿರುವುದು ದಾಖಲೆಗಳಿಂದಲೇ ಸಾಬೀತಾಗುತ್ತದೆ ಎಂದರು.ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿಸಿದ ಕಾಂಪ್ಯಾಕ್ಟರ್ ವಾಹನವನ್ನು ವರ್ಷಗಳ ಕಾಲ ಬಳಕೆಗೆ ತರದೇ ಮೂಲೆಯಲ್ಲಿ ನಿಲ್ಲಿಸಿದ್ದು ಅಭಿವೃದ್ಧಿಯ ಕೆಲಸವೇ? ಇದಕ್ಕೆ ಸಮಿವುಲ್ಲಾ ಅವರೇ ಉತ್ತರಿಸಬೇಕು ಎಂದು ಪ್ರಶ್ನಿಸಿದರು.ನಗರಸಭೆಗೆ ಸೇರಿದ ಒಂದು ಕಾಂಪ್ಯಾಕ್ಟರ್ ವಾಹನವನ್ನು ಬಳಕೆಗೆ ತರಲು ಇಷ್ಟು ವರ್ಷ ಬೇಕಾದರೆ, ಅವರ ಆಡಳಿತದಲ್ಲಿ ಅರಸೀಕೆರೆಯ ಅಭಿವೃದ್ಧಿ ಯಾವ ಮಟ್ಟಿಗೆ ನಡೆದಿರಬಹುದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.ಅಧಿಕಾರದಲ್ಲಿದ್ದಾಗ ನಗರಸಭೆಯ ಸಂಪನ್ಮೂಲಗಳನ್ನು ಸರಿಯಾಗಿ ಬಳಸದೇ, ಸಾರ್ವಜನಿಕರ ತೆರಿಗೆ ಹಣವನ್ನು ಅನಾವಶ್ಯಕವಾಗಿ ಬಂಡವಾಳ ಹೂಡಿ ನಿಷ್ಕ್ರಿಯಗೊಳಿಸಿದವರು ಈಗ ಅಭಿವೃದ್ಧಿ ಬಗ್ಗೆ ಉಪನ್ಯಾಸ ನೀಡುವುದು ವಿಪರ್ಯಾಸ ಎಂದು ಟೀಕಿಸಿದರು. ಸಮಿವುಲ್ಲಾ ಅವಧಿಯಲ್ಲಿ ಹತ್ತು ಹಲವು ಯೋಜನೆಗಳಲ್ಲಿ ಅಕ್ರಮಗಳು, ವೈಫಲ್ಯಗಳು ಹಾಗೂ ಆಡಳಿತಾತ್ಮಕ ಲೋಪಗಳು ನಡೆದಿವೆ. ಅವನ್ನೆಲ್ಲ ಕಾನೂನುಬದ್ಧವಾಗಿ ಹಾಗೂ ದಾಖಲೆಗಳೊಂದಿಗೆ ಜನರ ಮುಂದೆ ತರುತ್ತೇವೆ ಎಂದು ಎಚ್ಚರಿಕೆ ನೀಡಿದರು.ನಗರಸಭೆಯ ಅಭಿವೃದ್ಧಿ, ಸಾರ್ವಜನಿಕರ ತೆರಿಗೆ ಹಣದ ಬಳಕೆ ಮತ್ತು ಆಡಳಿತ ಜವಾಬ್ದಾರಿಗಳ ಬಗ್ಗೆ ಸಮಿವುಲ್ಲಾ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಅಭಿವೃದ್ಧಿ ಎಂಬ ಹೆಸರಿನಲ್ಲಿ ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನ ಮುಂದುವರಿಯುತ್ತಿದೆ ಎಂಬುದು ಸಾಬೀತಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ್, ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಚಂದ್ರಶೇಖರ್, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಅಶೋಕ್ ಹಾಜರಿದ್ದರು.