ಸಾರಾಂಶ
ಊಟದ ವಿರಾಮದ ಬಳಿಕ ರಾಜ್ಯಸಭೆ ಅಧಿವೇಶನವನ್ನು ಶುಕ್ರವಾರ ಮಧ್ಯಾಹ್ನ 2.30ರ ಬದಲಾಗಿ 2 ಗಂಟೆಗೆ ಆರಂಭಿಸಲು ಸಭಾಧ್ಯಕ್ಷ ಜಗದೀಪ್ ಧನಕರ್ ನಿರ್ಧರಿಸಿದ್ದಾರೆ.
ಪ್ರತಿ ಶುಕ್ರವಾರ 2.30ರ ಬದಲಿಗೆ 2 ಗಂಟೆಗೆ ಕಲಾಪ ಆರಂಭ
ನವದೆಹಲಿ: ಊಟದ ವಿರಾಮದ ಬಳಿಕ ರಾಜ್ಯಸಭೆ ಅಧಿವೇಶನವನ್ನು ಶುಕ್ರವಾರ ಮಧ್ಯಾಹ್ನ 2.30ರ ಬದಲಾಗಿ 2 ಗಂಟೆಗೆ ಆರಂಭಿಸಲು ಸಭಾಧ್ಯಕ್ಷ ಜಗದೀಪ್ ಧನಕರ್ ನಿರ್ಧರಿಸಿದ್ದಾರೆ. ಈ ನಿರ್ಧಾರಕ್ಕೆ ಮುಸ್ಲಿಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ನಮಾಜ್ಗಾಗಿ ಹೆಚ್ಚುವರಿ ಅವಧಿಯ ವಿರಾಮವನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ. ಕಳೆದ ಶುಕ್ರವಾರ ರಾಜ್ಯಸಭೆಯ ಕಲಾಪ ಮಧ್ಯಾಹ್ನ 2.30ರ ಬದಲಿಗೆ 2 ಗಂಟೆಗೆ ಆರಂಭವಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಎಂಕೆ ಸಂಸದ ತಿರುಚಿ ಶಿವ, ‘ಇಷ್ಟು ದಿನದವರೆಗೆ ರಾಜ್ಯಸಭೆಯ ಮಧ್ಯಾಹ್ನದ ಕಲಾಪ 2.30ಕ್ಕೆ ಆರಂಭವಾತ್ತಿತ್ತು. ಆದರೆ ಈಗ 2 ಗಂಟೆಗೆ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ದಿಢೀರನೆ ಇಂತಹ ನಿರ್ಧಾರ ಕೈಗೊಂಡಿದ್ದು ಯಾಕೆ ಎಂದು ಪ್ರಶ್ನಸಿದ್ದಾರೆ.ಇದಕ್ಕೆ ಉತ್ತರಿಸಿದ ಸಭಾಧ್ಯಕ್ಷ ಜಗದೀಪ್ ಧನಕರ್, ‘ಇದರಲ್ಲಿ ಯಾವುದೇ ವಿಷೇಶವಿಲ್ಲ. ಲೋಕಸಭೆ ಕಲಾಪ 2 ಗಂಟೆಗೆ ಆರಂಭವಾಗುತ್ತದೆ. ಇದೇ ರೀತಿಯಲ್ಲಿ ರಾಜ್ಯಸಭೆ ಕಲಾಪವನ್ನು ಸಹ ಆರಂಭಿಸಲಾಗುತ್ತಿದೆ’ ಎಂದು ಹೇಳಿದ್ದಾರೆ. ಡಿಎಂಕೆ ಸಂಸದ ಅಬ್ದುಲ್ಲಾ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಶುಕ್ರವಾರ ನಮಾಜ್ ಇರುವುದರಿಂದ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಇದೀಗ ಇದನ್ನು ಮೊಟಕುಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.