ರಾಮಾಯಣ, ಮಹಾಭಾರತ, ಕುರಾನ್ ಅಂತೆ ಕಂತೆಗಳ ಬೊಂತೆ: ಕೆ.ವೈ.ನಂಜೇಗೌಡ

| Published : Feb 12 2024, 01:31 AM IST / Updated: Feb 12 2024, 11:47 AM IST

ಸಾರಾಂಶ

ರಾಮಾಯಣ, ಮಹಾಭಾರತ ಹಾಗೂ ಕುರಾನ್‌ ಅಂತೆಕಂತೆಗಳ ಬೊಂತೆ ಆಗಿದ್ದು, ನಮ್ಮ ಸಂವಿಧಾನವೇ ಕಣ್ಣಿಗೆ ಕಾಣುವ ಸರ್ವ ಜನರ ಸುಖ ಬಯಸುವ ಧರ್ಮಗ್ರಂಥ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಾಲೂರು

ರಾಮಾಯಣ, ಮಹಾಭಾರತ ಹಾಗೂ ಕುರಾನ್‌ ಅಂತೆಕಂತೆಗಳ ಬೊಂತೆ ಆಗಿದ್ದು, ನಮ್ಮ ಸಂವಿಧಾನವೇ ಕಣ್ಣಿಗೆ ಕಾಣುವ ಸರ್ವ ಜನರ ಸುಖ ಬಯಸುವ ಧರ್ಮಗ್ರಂಥ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ತಾಲೂಕಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಸ್ವಾಗತ ಕೋರುವ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದುತ್ವ, ಜೈಶ್ರೀ ರಾಮ್ ಎಂಬುಂದೆಲ್ಲ ಕೇವಲ ಕಲ್ಪನೆಯಾಗಿದ್ದು, ನಾವು ಯಾರು ಕಂಡಿಲ್ಲ ಎಂದರು.

ದೇಶದ ಸಂವಿಧಾನ ವಾಸ್ತವ: ಆದರೆ ನಮ್ಮ ಕಾಲಘಟ್ಟದಲ್ಲಿ ಎಲ್ಲ ಸಮುದಾಯಗಳಿಗೆ ಸಮಾನ ಅವಕಾಶ ನೀಡುತ್ತಿರುವ ನಮ್ಮ ಸಂವಿಧಾನ ವಾಸ್ತವ ಸತ್ಯ ಹಾಗೂ ಶ್ರೇಷ್ಠ. 

ತಾವೂ ಸೇರಿದಂತೆ ಇತರೆ ಧರ್ಮದವರು ಅವರ ಧರ್ಮವನ್ನು ಪಾಲಿಸುತ್ತಿರಬಹುದು. ಆದರೆ ಎಲ್ಲ ಧರ್ಮಗಳು ಕಥೆಯನ್ನು ನಂಬಿ ಬದುಕುತ್ತಿದ್ದೇವೆಯೇ ಹೊರತು ಯಾವುದು ಯಾರ ಕಣ್ಣಿಗೆ ಕಂಡಿಲ್ಲ ಎಂದರು.

ನಮ್ಮ ದೇಶ ಸಂವಿಧಾನ ಒಪ್ಪಿಕೊಂಡು ೭೫ ವರ್ಷವಾದರೂ ಇದುವರೆಗೂ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಗುರಿ ಮುಟ್ಟಿಲ್ಲ.

 ಸಂವಿಧಾನ ಉಳಿವಿಗಾಗಿ ಕಳೆದ ಐದು ದಶಕಗಳಿಂದ ನಡೆದ ಹೋರಾಟಗಳಿಂದ ಸಮಾಜದಲ್ಲಿ ಶೇ.೭೫ ರಷ್ಟು ಬದಲಾವಣೆ ಕಂಡಿದೆ. ಇನ್ನೂ ಶೇ.೨೫ ರಷ್ಟು ಬದಲಾವಣೆ ಆಗಬೇಕಿದ್ದು, ಅದಕ್ಕಾಗಿ ಹೋರಾಟ ಅನಿರ್ವಾಯವಾಗಿದೆ ಎಂದರು.

ಸಂವಿಧಾನ ದುರುಪಯೋಗ: ಒಂದೂಂಡೆ ಸಂವಿಧಾನ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಕೆಲವರು ತಮ್ಮ ವೈಯಕ್ತಿಕ ಬೆಳವಣಿಗೆಗಾಗಿ ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. 

ಇದು ಅಂಬೇಡ್ಕರ್ ಅವರ ಆಶಯ ಅಲ್ಲ ಎಂಬುದನ್ನು ಅರಿಯಬೇಕು. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೇರಿದವರಲ್ಲ, ಅವರು ಎಲ್ಲರಿಗೂ ಸೇರಿದವರು.ಅವರನ್ನು ರಸ್ತೆಯಲ್ಲಿ ನಿಲ್ಲಿಸುವುದಲ್ಲ.ಮನೆ-ಮನಗಳಲ್ಲಿ ಇಟ್ಟು ಪೂಜಿಸಬೇಕು ಎಂದರು. 

ಅಂಬೇಡ್ಕರ್ ಬಸ್ ನಿಲ್ದಾಣ ನಿರ್ಮಾಣ: ಮಾಲೂರಿನಲ್ಲಿ ನೂತನವಾಗಿ ೧೫ ಕೋಟಿ ರು.ಗಳಲ್ಲಿ ನಿರ್ಮಾಣ ವಾಗಲಿರುವ ನೂತನ ಬಸ್ ನಿಲ್ಧಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಬಸ್ ನಿಲ್ದಾಣ ಎಂದು ಹೆಸರಿಸಲಾಗುವುದು. 

ಎಪಿಎಂಸಿಯಿಂದ ರೈಲ್ವೇ ಸೇತುವೆ ದಾಟಿ ಹೊಸೂರು ರಸ್ತೆವರಗೆ ೩೦೦ ಕೋಟಿ ರು.ಗಳ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು.

ಪಟ್ಟಣವನ್ನು ಹಾದುಹೋಗುವ ಈ ಮೇಲ್ಸೇತುವೆ ಕೆಳಗೆ ಸರ್ವಿಸ್ ರಸ್ತೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.

೭೫ ಕಿ.ಮೀ. ರಸ್ತೆ ಅಭಿವೃದ್ಧಿ: ಇನ್ನೂ ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಪ್ರಾರಂಭವಾಗಲಿದೆ.

 ತಾಲೂಕಿನಲ್ಲಿ ಹಾಳಾಗಿರುವ ಗ್ರಾಮಾಂತರ ರಸ್ತೆಯ ಅಭಿವೃಧಿಗಾಗಿ ಮಂಜೂರಾಗಿರುವ ೨೭ ಕೋಟಿ ರು.ಗಳಲ್ಲಿ ೩೭ ರಸ್ತೆ ಕಾಮಗಾರಿಗಾಗಿ ಮೀಸಲಿಟ್ಟಿದ್ದು, ಒಟ್ಟು ೭೫ ಕಿ.ಮೀ.ಉದ್ದದ ರಸ್ತೆ ಅಭಿವೃದ್ಧಿಯಾಗಲಿದೆ ಎಂದರು.

ತಹಸೀಲ್ದಾರ್ ರಮೇಶ್ ,ಇಒ ಕೃಷ್ಣಪ್ಪ ,ರಾಜ್ಯ ಜಾನಪದ ಅಕಾಡಮೆ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್,ಸಿಪಿಐ ವಸಂತ್ ಮಾತನಾಡಿದರು.ಮುಖ್ಯಾಧಿಕಾರಿ ಪ್ರದೀಪ್ ಕುಮಾರ್,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯನಾರಸಿಂಹ, 

ನಂಜುಂಡೇಗೌಡ, ಮೈ.ನಾರಾಯಣಸ್ವಾಮಿ, ಸಂತೋಷ್, ಎಸ್.ಎಂ.ವೆಂಕಟೇಶ್, ಪುರಸಭೆ ಸದಸ್ಯ ಮುರಳಿಧರ್, ಶ್ರೀನಿವಾಸ್, ನವೀನ್, ಜಾಕಿ ಮಂಜುನಾಥ್, ರತ್ನಮ್ಮ, ನಯೀಮ್, ಎ.ಕೆ.ವೆಂಕಟೇಶ್, ಸಮಾಜ ಕಲ್ಯಾಣ ಅಧಿಕಾರಿ ಶ್ರೀನಿವಾಸ್ ಇನ್ನಿತರರು ಇದ್ದರು.