ಕೋಲಾರ: ಜೆಡಿಎಸ್‌ ಅಭ್ಯರ್ಥಿಗೆ ಬಲಗೈ ಬೆಂಬಲ

| Published : Apr 21 2024, 02:24 AM IST / Updated: Apr 21 2024, 04:30 AM IST

ಸಾರಾಂಶ

ಬಲಗೈ ಸಮುದಾಯದವರನ್ನು ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕಡೆಗಣಿಸುತ್ತಿದ್ದಾರೆಂದು ಆರೋಪಿಸಿರುವ ಬಲಗೈ ಸಮುದಾಯದ ಮುಖಂಡರು ಸಭೆ ನಡೆಸಿ ಎಲ್ಲರ ತೀರ್ಮಾನದಂತೆ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿಸಲು ತೀರ್ಮಾನಿಸಿದ್ದಾರೆ.

 ಕೋಲಾರ :  ಕಾಂಗ್ರೆಸ್‌ನಲ್ಲಿ ಬಲಗೈ ಸಮುದಾಯವರನ್ನು ಕಡೆಗಣಿಸುತ್ತಿರುವ ಜತೆಗೆ ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಹ ತಮ್ಮನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ಗೆ ತಮ್ಮ ಬೆಂಬಲಿಗರೊಂದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಸೇರ್ಪಡೆಯಾಗಿರುವುದಾಗಿ ಬಂಗಾರಪೇಟೆ ಕಾಂಗ್ರೆಸ್ ಪಕ್ಷದ ಬಲಗೈ ಸಮುದಾಯದ ಮುಖಂಡ ಎಂ. ರಾಮಚಂದ್ರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚುನಾವಣೆಯಲ್ಲಿಯೇ ಕಾಂಗ್ರೆಸ್ ತಮ್ಮನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಿದರೂ ಅಭ್ಯರ್ಥಿ ಮಲ್ಲೇಶ್ ಬಾಬು ಕಡಿಮೆ ಅಂತರದಲ್ಲಿ ಪರಾಜಿತರಾದರು ಎಂದು ಹೇಳಿದರು.

ಬಲಗೈ ಸಮುದಾಯದವರನ್ನು ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕಡೆಗಣಿಸುತ್ತಿರುವ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿ ಎಲ್ಲರ ತೀರ್ಮಾನದಂತೆ ಈ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿಸಲು ತೀರ್ಮಾನಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಬಲಗೈ ಸಮುದಾಯದವರು ಜೆಡಿಎಸ್ ಬೆಂಬಲಿಸುವ ಮೂಲಕ ಬಲಗೈ ಶಕ್ತಿ ಪ್ರದರ್ಶನ ತೋರಿಸುತ್ತೇವೆ ಎಂದು ತಿಳಿಸಿದರು.

ಮಲ್ಲೇಶ್‌ಬಾಬು ಸ್ಥಳೀಯರು

ಲೋಕಸಭಾ ಚುನಾವಣೆಯಲ್ಲಿ ಎಂ. ಮಲ್ಲೇಶ್ ಬಾಬು ಸ್ಥಳೀಯರಾಗಿದ್ದಾರೆ. ಅವರನ್ನು ನಾವು ಹಲವಾರು ವರ್ಷದಿಂದ ಕಂಡಿದ್ದೇವೆ, ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಹೊರಗಿನವರು ಅವರನ್ನು ಹತ್ತಿರದಿಂದ ಕಂಡವರಾಗಲಿ, ಪರಿಚಿತರಾಗಲಿ ಯಾರೂ ಇಲ್ಲ ಹಾಗಾಗಿ ನಾವು ಜೆ.ಡಿ.ಎಸ್. ಅಭ್ಯರ್ಥಿ ಮಲ್ಲೇಶ್ ಬಾಬುರಿಗೆ ಸ್ಥಳೀಯ ಸಮಸ್ಯೆಗಳನ್ನು ಅರಿತಿರುವ ಪ್ರಬುದ್ದರಾಗಿದ್ದಾರೆ ಹಾಗಾಗಿ ಅವರನ್ನು ಬೆಂಬಲಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ಮಲ್ಲೇಶ್ ಬಾಬು ಅವರಿಗೆ ಬಂಗಾರಪೇಟೆ ಕ್ಷೇತ್ರದಲ್ಲಿ ಕನಿಷ್ಟ 20 ಸಾವಿರ ಮತಗಳು ಅಧಿಕವಾಗಿ ಬರುವಂತೆ ಮಾಡಲು ನಮ್ಮ ಬೆಂಬಲಿಗರೊಂದಿಗೆ ಬಲಗೈ ಸಮುದಾಯವು ಶ್ರಮಿಸಲಿದೆ. ಈ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿಯಾಗಿರುವ ಮಲ್ಲೇಶ್ ಬಾಬು ಜಯಭೇರಿ ಬಾರಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಜೆ.ಡಿ.ಎಸ್. ಪಕ್ಷದ ಮುಖಂಡ ಸಿಎಂಆರ್ ಶ್ರೀನಾಥ್, ಮುಖಂಡರಾದ ರಾಮಪ್ಪ, ಯಲ್ಲಪ್ಪ. ನಾರಾಯಣಸ್ವಾಮಿ ಇದ್ದರು.