25 ಪತ್ರಕರ್ತರ ಮಕ್ಕಳಿಗೆ ಸ್ಕಾಲರ್ ಶಿಪ್

| Published : Nov 12 2023, 01:01 AM IST / Updated: Nov 12 2023, 01:02 AM IST

ಸಾರಾಂಶ

ಪತ್ರಕರ್ತರ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವುದಕ್ಕಾಗಿ ಜಿಲ್ಲೆಯ 25 ಪತ್ರಕರ್ತರ ಮಕ್ಕಳಿಗೆ ಪ್ರತಿವರ್ಷ ಪ್ರತಿ ಮಗುವಿಗೆ ತಲಾ ಒಂದು ಲಕ್ಷ ರು. ನಂತೆ ಸ್ಕಾಲರ್ ಶಿಪ್ ನೀಡುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಪತ್ರಕರ್ತರ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವುದಕ್ಕಾಗಿ ಜಿಲ್ಲೆಯ 25 ಪತ್ರಕರ್ತರ ಮಕ್ಕಳಿಗೆ ಪ್ರತಿವರ್ಷ ಪ್ರತಿ ಮಗುವಿಗೆ ತಲಾ ಒಂದು ಲಕ್ಷ ರು. ನಂತೆ ಸ್ಕಾಲರ್ ಶಿಪ್ ನೀಡುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕ ವತಿಯಿಂದ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿಗಳ ಪ್ರದಾನ, ಕ್ಷೇಮಾಭಿವೃದ್ಧಿ ನಿಧಿಗೆ ದೇಣಿಗೆ ನೀಡಿದವರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ತುಮಕೂರಿನ ಅಭಿವೃದ್ಧಿಗಾಗಿ ಹಲವಾರು ಜನರು ದುಡಿದಿದ್ದಾರೆ. ಆದರೆ, ಇಂದು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನನಗೆ ಸಮಾಜ ಸೇವಾರತ್ನ ಪ್ರಶಸ್ತಿ ನೀಡಿ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚು ಮಾಡಿದ್ದಾರೆ. ನನಗೆ ಈ ಪ್ರಶಸ್ತಿ ಕೊಟ್ಟಿರುವುದಕ್ಕೆ ನಾನು ನಿಮಗೆ ಅಭಾರಿಯಾಗಿದ್ದೇನೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ತುಮಕೂರು ತಾಲೂಕಿನ ಗೊಲ್ಲಹಳ್ಳಿ ಕುಗ್ರಾಮದಲ್ಲಿ ಜನಿಸಿದವನು. ಅಂದಿನ ಕಾಲದಲ್ಲಿದ್ದ ಜಾತಿ ವ್ಯವಸ್ಥೆ, ಮೌಢ್ಯ ಆಚರಣೆಗಳನ್ನೆಲ್ಲ ನಾನು ಖುದ್ದಾಗಿ ನೋಡಿದ್ದೇನೆ. ಆ ಆಚರಣೆಗಳೆಲ್ಲ ಇಂದು ಕಡಿಮೆಯಾಗಿವೆ. ವಿನೋಬಾ ಭಾವೆ ಅವರ ಆಶಯದಂತೆ ಚಿತ್ರಕಲಾ ಶಿಕ್ಷಕರಾಗಿದ್ದ ನಮ್ಮ ತಂದೆಯವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದರು ಎಂದು ಸ್ಮರಿಸಿಕೊಂಡರು.

ಪತ್ರಕರ್ತರು ಸಮಾಜದಲ್ಲಿನ ಆಗು ಹೋಗುಗಳನ್ನು ಮತ್ತು ಜನರ ಸಮಸ್ಯೆಗಳನ್ನು ಸಮಾಜದ ಮುಂದೆ ತರುವ ಕೆಲಸ ಮಾಡುತ್ತಿದ್ದಾರೆ. ಯಾರದೇ ಅಡಚಣೆಗಳಿಗೂ ಹೆದರದೆ ಆ ಸುದ್ದಿಯನ್ನು ಹೇಳುವವನು ನಿಜವಾದ ಪತ್ರಕರ್ತ ಎಂದರು.

ಪತ್ರಿಕೋದ್ಯಮ ಕ್ಷೇತ್ರ ತುಂಬಾ ಬದಲಾಗಿದೆ. ಯಾವುದೇ ಒಂದು ಸುದ್ದಿಯನ್ನು ಕೆಲವೇ ನಿಮಿಷಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಟಿವಿ ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ ಎಂದರು. ಮಾದ್ಯಮ ಕ್ಷೇತ್ರ ಇಂದು ಬಹಳ ಸವಾಲುಗಳ ಮಧ್ಯೆ ನಿಂತಿದೆ. ಮಾಧ್ಯಮ ಕ್ಷೇತ್ರದಲ್ಲಿ ಇಂದು ಪತ್ರಕರ್ತರು ಸುದ್ದಿಯನ್ನು ಕೆಲವೇ ನಿಮಿಷಗಳಲ್ಲಿ ಕೊಡುತ್ತಿದ್ದಾರೆ. ಪತ್ರಕರ್ತರು ತಮ್ಮ ಜೀವನದಲ್ಲಿ ಬೆಳೆಯಬೇಕು ಎಂದರು.

ನಾನು, ರಾಜಕೀಯ ಕ್ಷೇತ್ರಕ್ಕೆ ಬಂದಿರುವುದು ಸಮಾಜ ಸೇವೆ ಮಾಡುವುದಕ್ಕೆ, ಹೊರಟ್ಟಿ ಅವರು ಹುಬ್ಬಳ್ಳಿ ಶಿಕ್ಷಕರ ಕ್ಷೇತ್ರದಿಂದ ಸತತ 8ನೇ ಬಾರಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಮಾನ್ಯ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜು ಹೊರಟ್ಟಿ ಅವರಿಂದ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದರು.

ತುಮಕೂರು ನಗರ ವ್ಯಾಪ್ತಿಯಲ್ಲಿ ಪತ್ರಕರ್ತರಿಗೆ ನಿವೇಶಗಳನ್ನು ನೀಡಲು ಜಾಗವನ್ನು ಗುರುತಿಸಲಾಗುವುದು ಹಾಗೂ ಪತ್ರಕರ್ತರು ಸ್ವಲ್ಪ ಮಟ್ಟಿಗೆ ಹಣವನ್ನು ಪಾವತಿ ಮಾಡಿ ನಿವೇಶನ ಪಡೆಯಬೇಕು ಎಂದು ಹೇಳಿದರು.

ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನುಜಿಲ್ಲೆಯಲ್ಲಿ ಮಾಡಲು ಆತಿಥ್ಯವನ್ನು ಕೊಟ್ಟರೆ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು. ಇತ್ತೀಚೆಗೆ ಇಸ್ರೇಲ್ ಯುದ್ಧಭೂಮಿಗೆ ಪತ್ರರ್ತೆಯರು ತೆರಳಿ ಅಲ್ಲಿನ ವಾಸ್ತವ ಸಂಗತಿಯನ್ನು ಜನರಿಗೆ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಯುದ್ಧಭೂಮಿಯಲ್ಲಿ ಬಾಂಬ್ ದಾಳಿಗಳು ನಿರಂತರ ನಡೆಯುತ್ತಿದ್ದರೂ, ಅದಕ್ಕೆಲ್ಲ ಜಗ್ಗದೆ, ತಮ್ಮ ಜೀವನವನ್ನು ಪಣಕ್ಕಿಟ್ಟು ವರದಿ ಮಾಡುವುದು ಒಂದು ದೊಡ್ಡ ಸಾಧನೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿದರು. ಶಾಸಕ ಜ್ಯೋತಿ ಗಣೇಶ್ ‌ಮಾತನಾಡಿ, ಕೊರೋನ ಸಮಯದಲ್ಲಿ ಸಂಕಷ್ಟ ಎದುರಾದಾಗ ಪತ್ರಕರ್ತರ ಜೊತೆ ನಿಂತು ಕೆಲಸ ಮಾಡಿದ್ದನ್ನು ಸ್ಮರಿಸಿದರು.

2024ರಲ್ಲಿ ರಾಜ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ಮಾಡುವುದಕ್ಕಾಗಿ ಅವಕಾಶ ಕಲ್ಪಿಸಿಕೊಡಬೇಕೆಂದು ಈಗಾಲೇ ಮನವಿ ಮಾಡಲಾಗಿದೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಪತ್ರಿಕಾ ಬಳಗದವರು ಯಾವುದೇ ಬೇಧ ಭಾವ ಮಾಡದೆ ನೀಡುವ ಪ್ರಶಸ್ತಿ ತುಂಬಾ ಶ್ರೇಷ್ಠವಾದದ್ದು. ಸಮಾಜದ ಅಂಕುಡೊಂಕು ಸರಿಪಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ದೇಶದಲ್ಲಿ ಪತ್ರಿಕಾ ರಂಗವು ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿದೆ ಎಂದರು.

ಪತ್ರಕರ್ತರ ಸಂಘಕ್ಕೆ ದತ್ತಿ ನಿಧಿಯನ್ನು ನಾನು ನೀಡುತ್ತೇನೆ, ಆದರೆ, ಅದನ್ನು ನನ್ನ ತಾಯಿಯ ಸವಿ ನೆನಪಿಗಾಗಿ ಅದನ್ನು ಮಹಿಳಾ ಪತ್ರಕರ್ತರಿಗೆ ನೀಡಬೇಕು ಎಂದು ಮನವಿ ಮಾಡಿದರು. ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ, ಹುಲಿನಾಯ್ಕರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ ಉಪಸ್ಥಿತರಿದ್ದರು.