ಕನಕದಾಸರು, ಸಿದ್ದರಾಮೇಶ್ವರ, ವಾಲ್ಮೀಕಿ, ಅಂಬೇಡ್ಕರ್ ಸೇರಿ ಹಲವು ಮಹನೀಯರು ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅಂತಹ ಮಹನೀಯರ ಜಯಂತಿಗಳನ್ನು ಒಂದು ಸಮುದಾಯಕ್ಕೆ ಸಿಮೀತಗೊಳಿಸಿರುವುದು ಸರಿಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು : ಕನಕದಾಸರು, ಸಿದ್ದರಾಮೇಶ್ವರ, ವಾಲ್ಮೀಕಿ, ಅಂಬೇಡ್ಕರ್ ಸೇರಿ ಹಲವು ಮಹನೀಯರು ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅಂತಹ ಮಹನೀಯರ ಜಯಂತಿಗಳನ್ನು ಒಂದು ಸಮುದಾಯಕ್ಕೆ ಸಿಮೀತಗೊಳಿಸಿರುವುದು ಸರಿಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಬೇಸರ ವ್ಯಕ್ತಪಡಿಸಿದರು.
ಕಾಯಕ ಶರಣರ ಜಯಂತಿ
ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಬಸವಹರಳಯ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಕಾಯಕ ಶರಣರ ಜಯಂತಿಯಲ್ಲಿ ಪ್ರೊ.ಎಚ್.ಲಿಂಗಪ್ಪ ಅವರಿಗೆ ಕಾಯಕ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಜಾತಿಗಳಿಗೆ ಹಂಚಿಕೊಂಡಿರುವುದು ವಿಪರ್ಯಾಸ
ಮಹನೀಯರು ಹಾಗೂ ಶರಣರ ಜಯಂತಿಯನ್ನು ಇಂದು ಜಾತಿಗಳಿಗೆ ಹಂಚಿಕೊಂಡಿರುವುದು ವಿಪರ್ಯಾಸ. ಪ್ರೊ.ಲಿಂಗಪ್ಪ ಅವರನ್ನು ‘ಕಾಯಕ ಶರಣಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ, ಸಮುದಾಯದ ಮುಖಂಡರೊಬ್ಬರು ನಮ್ಮ ಸಮಾಜದವರಿಗೆ ಪ್ರಶಸ್ತಿ ನೀಡಬೇಕಿತ್ತು ಎಂದು ನನಗೆ ಕರೆ ಮಾಡಿದ್ದರು. ಅದು ನನಗೆ ನೋವು ತರಿಸಿತು. ಕಳೆದ ಬಾರಿ ನಾವು ಕನಕ ಶ್ರೀ ಪ್ರಶಸ್ತಿಯನ್ನು ಬ್ರಾಹ್ಮಣ ಸಮುದಾಯದ, ಸಮ-ಸಮಾಜದ ಬಗ್ಗೆ ಒಲವು ಹೊಂದಿದ್ದವರಿಗೆ ನೀಡಿದ್ದೆವು. ಇಲ್ಲಿ ಯಾವುದೇ ಜಾತಿ ಮುಖ್ಯವಲ್ಲ, ಅವರ ತತ್ವ-ಸಿದ್ಧಾಂತಗಳು ಮುಖ್ಯ. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ-ಸಿದ್ಧಾಂತದ ಮೇಲೆ ಬದುಕು ನಡೆಸುತ್ತಿರುವ ಪ್ರೊ.ಲಿಂಗಪ್ಪ ಅವರನ್ನು ಕಾಯಕಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಸಂತಸ ತರಿಸಿದೆ ಎಂದರು.
ಸಮಾರಂಭದಲ್ಲಿ ಅಬಕಾರಿ ಇಲಾಖೆ ಸಚಿವ ಆರ್. ಬಿ.ತಿಮ್ಮಾಪುರ್, ರಾಜ್ಯಸಭಾ ಮಾಜಿ ಸಂಸದ ಡಾ.ಎಲ್.ಹನುಮಂತಯ್ಯ, ಅಖಿಲ ಕರ್ನಾಟಕ ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ಸಂತೋಷ್ ಸುರೇಂದ್ರ ಸವಣೂರು, ಮಾದಿಗ ಸಮುದಾಯದ ಎಂ.ಗುರುಮೂರ್ತಿ, ಆದಿಜಾಂಬವ ಸಮಾಜದ ಸಿದ್ದರಾಜು, ಇಲಾಖಾ ಕಾರ್ಯದರ್ಶಿ ಜೆ.ಮಂಜುನಾಥ್ ಸೇರಿ ಇತರರು ಇದ್ದರು.