ಕಾರಟಗಿ: ಇಲ್ಲಿಯ ಶಾಲಾ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ನನ್ನ ತವರೂರಿನಲ್ಲಿ ಉತ್ತಮವಾಗಿ ನಡೆಸಿ ಅತಿಥಿಗಳಿಗೆ ಉತ್ತಮ ಸೌಲಭ್ಯ ನೀಡಿ ಮಾದರಿಯ ಕಲೋತ್ಸವನ್ನು ಇಲಾಖೆ ಅಧಿಕಾರಿಗಳ ಮಾಡಿದ್ದು ಶ್ಲಾಘನೀಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಅವರು ತಮ್ಮ ಗೃಹ ಕಚೇರಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಗೌಡ ನೇತೃತ್ವದಲ್ಲಿ ಅಧಿಕಾರಿಗಳ ತಂಡದಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎರಡು ದಿನಗಳ ಕಾಲ ಸಿದ್ದೇಶ್ವರ ರಂಗಮಂದಿರ ಸೇರಿದಂತೆ ಇನ್ನಿತರ ನಾಲ್ಕು ಸಮಾನ ವೇದಿಕೆಗಳಲ್ಲಿ ಉತ್ತಮ ಕಾರ್ಯಕ್ರಮ ನಡೆಸಲಾಗಿದೆ. ರಾಜ್ಯದ ೩೫ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಪಾಲಕರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯಕ್ರಮ ಮೂಲ ಸೌಲಭ್ಯದ ಜತೆಗೆ ಊಟ ಉಪಚಾರ ಅಚ್ಚುಕಟ್ಟಾಗಿ ಮಾಡಿರುವ ಕುರಿತು ಮಾಹಿತಿ ಪಡೆಯಲಾಗಿದೆ. ಜಿಲ್ಲೆಯ ಆತಿಥ್ಯದ ಕುರಿತು ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದ್ದು ಸಂತೋಷದ ವಿಚಾರ. ಅತ್ಯಂತ ಕಡಿಮೆ ಸಮಯದಲ್ಲಿ ಜಿಲ್ಲೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ಕಾರಟಗಿ ಖಾಸಗಿ ಶಾಲೆಗಳು ಸೇರಿ ಉತ್ತಮ ಕಾರ್ಯಕ್ರಮ ಆಯೋಜಿಸಿದ್ದು ಸಂತೋಷದ ವಿಚಾರ ಮತ್ತು ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಡಿನ ಪ್ರತಿಭಾವಂತ ಮಕ್ಕಳ ಕಾರ್ಯಕ್ರಮ ಉದ್ಘಾಟಿಸಬೇಕಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಬಜೆಟ್ ಪೂರ್ವ ಸಭೆ ಜತೆಗೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ನಡೆದ ರಾಯಚೂರು ಉತ್ಸವದಲ್ಲಿ ಡಿಸಿಎಂಜತೆಗೆ ಭಾಗವಹಿಸಲೇಬೇಕಾದ ಅನಿವಾರ್ಯತೆ ಉಂಟಾಗಿದ್ದರಿಂದ ಭಾಗವಹಿಸಲಾಗಲಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ನಟೇಶ, ಚಂದ್ರಶೇಖರ ಗಣವಾರಿ, ಉಪಪ್ರಚಾರ್ಯ ಶರಣಪ್ಪ ಸೋಮಲಾಪುರ ಇದ್ದರು.