ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಅಡಿಯಲ್ಲಿ ಮಂಡ್ಯ ಜಿಲ್ಲೆಯ 1.50 ಲಕ್ಷ ಮತದಾರರಿಗೆ ನೋಟಿಸ್‌ ಜಾರಿಯಾಗುತ್ತಿದ್ದು, ಈ ಕುರಿತಂತೆ ತುರ್ತು ಪರಿಶೀಲನೆ ನಡೆಸಬೇಕು. ಆ ಮೂಲಕ ಮಂಡ್ಯ ಜಿಲ್ಲೆಯ ಅರ್ಹ ಮತದಾರರ ಹಕ್ಕು ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯುಕ್ತರಿಗೆ ವಿಧಾನಪರಿಷತ್‌ ಸದಸ್ಯ ಮತ್ತು ಮಂಡ್ಯ ಜಿಲ್ಲೆಯ ಕೆಪಿಸಿಸಿ ಎಸ್‌ಐಆರ್‌ ಉಸ್ತುವಾರಿ ದಿನೇಶ್‌ ಗೂಳಿಗೌಡ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಅಡಿಯಲ್ಲಿ ಮಂಡ್ಯ ಜಿಲ್ಲೆಯ 1.50 ಲಕ್ಷ ಮತದಾರರಿಗೆ ನೋಟಿಸ್‌ ಜಾರಿಯಾಗುತ್ತಿದ್ದು, ಈ ಕುರಿತಂತೆ ತುರ್ತು ಪರಿಶೀಲನೆ ನಡೆಸಬೇಕು. ಆ ಮೂಲಕ ಮಂಡ್ಯ ಜಿಲ್ಲೆಯ ಅರ್ಹ ಮತದಾರರ ಹಕ್ಕು ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯುಕ್ತರಿಗೆ ವಿಧಾನಪರಿಷತ್‌ ಸದಸ್ಯ ಮತ್ತು ಮಂಡ್ಯ ಜಿಲ್ಲೆಯ ಕೆಪಿಸಿಸಿ ಎಸ್‌ಐಆರ್‌ ಉಸ್ತುವಾರಿ ದಿನೇಶ್‌ ಗೂಳಿಗೌಡ ಮನವಿ ಮಾಡಿದ್ದಾರೆ.

ರಾಜ್ಯ ಚುನಾವಣಾ ಆಯೋಗವು ಆ.18ರ ವರದಿಯಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಬಿಡುಗಡೆ ಮಾಡಿರುವ ತಾರ್ಕಿಕ ವ್ಯತ್ಯಾಸಗಳು ಮತ್ತು ಮ್ಯಾಪಿಂಗ್‌ ಆಗದಿರುವ ಅಂಕಿ-ಅಂಶಗಳು ಮಂಡ್ಯ ಜಿಲ್ಲೆಯಲ್ಲಿ ಭಾರೀ ವ್ಯತ್ಯಾಸವಿದೆ. ಬೆಂಗಳೂರು ನಗರ ಹೊರತುಪಡಿಸಿದರೆ, ಇಡೀ ರಾಜ್ಯದಲ್ಲೇ ಅತಿ ಹೆಚ್ಚು ತಾರ್ಕಿಕ ವ್ಯತ್ಯಾಸಗಳ ಪಟ್ಟಿ ಮತ್ತು ಅತಿ ಹೆಚ್ಚು ನೋಟಿಸ್‌ಗಳು ಜಾರಿಯಾಗುತ್ತಿರುವುದು ಮಂಡ್ಯ ಜಿಲ್ಲೆಯಲ್ಲಿಯೇ ಎಂಬುದು ಕಳವಳಕಾರಿ ಸಂಗತಿಯಾಗಿದೆ. ರಾಮನಗರ ಜಿಲ್ಲೆಯಲ್ಲಿ ಶೇ.2.44 (20192 ನೋಟಿಸ್‌), ಹಾಸನ ಜಿಲ್ಲೆಯಲ್ಲಿ ಶೇ. 5.80 (79778 ನೋಟಿಸ್‌)ನಷ್ಟು ಮಾತ್ರ ನೋಟಿಸ್‌ ದಾಖಲಾಗಿದ್ದರೆ, ಮಂಡ್ಯ ಜಿಲ್ಲೆಯಲ್ಲಿ ಶೇ.10.67ರಷ್ಟು (1.50 ಲಕ್ಷ ನೋಟಿಸ್‌) ಮತದಾರರಿಗೆ ನೋಟಿಸ್‌ ಜಾರಿಯಾಗಿರುವುದು ಆತಂಕ ಸೃಷ್ಟಿಸಿದೆ.ಆ.18ರ ಅಂಕಿ ಅಂಶದ ಪ್ರಕಾರ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲೇ ತಾರ್ಕಿಕ ವ್ಯತ್ಯಾಸ ಮತ್ತು ನೋ-ಮ್ಯಾಪಿಂಗ್‌ ಸೇರಿದಂತೆ ಒಟ್ಟು 37769 ನೋಟಿಸ್‌ಗಳು, ಮಂಡ್ಯ ಕ್ಷೇತ್ರದಲ್ಲಿ 23544 ನೋಟಿಸ್‌ಗಳು, ಮಳವಳ್ಳಿ ಕ್ಷೇತ್ರದಲ್ಲಿ 20853, ನಾಗಮಂಗಲ ಕ್ಷೇತ್ರದಲ್ಲಿ 23544, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 16335, ಮೇಲುಕೋಟೆ ಕ್ಷೇತ್ರದಲ್ಲಿ 13,597 ನೋಟಿಸ್‌ಗಳು ಹಾಗೂ ಕೃಷ್ಣರಾಜಪೇಟೆ ಕ್ಷೇತ್ರದಲ್ಲಿ 12,872 ನೋಟಿಸ್‌ಗಳು ಜಾರಿಯಾಗಿವೆ. ಒಟ್ಟಾರೆ ಜಿಲ್ಲೆಯಲ್ಲಿ 1,30,986 ತಾರ್ಕಿಕ ವ್ಯತ್ಯಾಸ ಮತ್ತು 19285 ನೋ ಮ್ಯಾಪಿಂಗ್‌ ಸೇರಿ ಒಟ್ಟು 1,50,271 ನೋಟಿಸ್‌ಗಳು ಜಾರಿಯಾಗಿವೆ.

ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ ಮತದಾರರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸ್ಥಳದಲ್ಲೇ ಅಪ್‌ಲೋಡ್‌ ಮಾಡುವಂತೆ ನಿರ್ದೇಶನ ನೀಡಬೇಕು ಹಾಗೂ ಪ್ರತಿ ಗ್ರಾಮ ಪಂಚಾಯಿತಿ, ವಾರ್ಡ್‌ ಮಟ್ಟದಲ್ಲಿ ವಿಶೇಷ ಜಾಗೃತಿ ಅಭಿಯಾನ ನಡೆಸಬೇಕು ಎಂದು ಮನವಿ ಪತ್ರದಲ್ಲಿ ದಿನೇಶ್‌ ಗೂಳಿಗೌಡ ಕೋರಿದ್ದಾರೆ.