ಸಾರಾಂಶ
ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಸಿಂಪಡಿಸಲಾಗಿದ್ದ ಇಲಿ ಪಾಷಾಣದಿಂದ ಉಸಿರಾಟದ ಸಮಸ್ಯೆ ಉಂಟಾಗಿ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದ ಘಟನೆ ಸಂಬಂಧ ಇಲಿ ಪಾಷಾಣ ಸಿಂಪಡಿಸಿದ್ದ ವ್ಯಕ್ತಿ ಹಾಗೂ ಹಾಸ್ಟೆಲ್ನ ವ್ಯವಸ್ಥಾಪಕ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರು : ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಸಿಂಪಡಿಸಲಾಗಿದ್ದ ಇಲಿ ಪಾಷಾಣದಿಂದ ಉಸಿರಾಟದ ಸಮಸ್ಯೆ ಉಂಟಾಗಿ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದ ಘಟನೆ ಸಂಬಂಧ ಇಲಿ ಪಾಷಾಣ ಸಿಂಪಡಿಸಿದ್ದ ವ್ಯಕ್ತಿ ಹಾಗೂ ಹಾಸ್ಟೆಲ್ನ ವ್ಯವಸ್ಥಾಪಕ ಸಿಬ್ಬಂದಿ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಜ್ಞಾನಭಾರತಿ ವ್ಯಾಪ್ತಿಯ ಅಮ್ಮ ಆಶ್ರಮದ ಸಮೀಪದ ಆದರ್ಶ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದರಿಂದ ಹಾಗೂ ನೆಲಮಹಡಿಯ ಜನರೇಟರ್ಗೆ ಇಲಿಗಳಿಂದ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮಂಜೇಗೌಡ ಎಂಬುವವರು ‘ರಾಟ್ ಆಕ್ಸ್’ ಎಂಬ ಇಲಿ ಪಾಷಾಣ ಸಿಂಪಡಿಸಿದ್ದರು. ಈ ವೇಳೆ ವಿದ್ಯಾರ್ಥಿ ನಿಲಯದಲ್ಲಿ ಇದ್ದ ವಿದ್ಯಾರ್ಥಿಗಳ ಪೈಕಿ 19 ಮಂದಿ ವಿದ್ಯಾರ್ಥಿಗಳಿಗೆ ಉಸಿರಾಟದ ಮೂಲಕ ವಿಷಕಾರಿ ವಸ್ತು ದೇಹ ಸೇರಿ ಅಸ್ವಸ್ಥಗೊಂಡಿದ್ದಾರೆ.
ಮೂವರ ಸ್ಥಿತಿ ಗಂಭೀರ
ಕೂಡಲೇ ಇತರೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ನಿಲಯದ ಸಿಬ್ಬಂದಿ ಅಸ್ವಸ್ಥ ವಿದ್ಯಾರ್ಥಿಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಪೈಕಿ 19 ವಿದ್ಯಾರ್ಥಿಗಳ ಪೈಕಿ ಜಯಾನ್ ವರ್ಗಿಸ್, ದಿಲೇಶ್ ಹಾಗೂ ಜೊ ಮೋನ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಉಳಿದ 16 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಎಫ್ಐಆರ್ ದಾಖಲು:
ಅಸ್ವಸ್ಥ ವಿದ್ಯಾರ್ಥಿ ನೋಯನ್ ಹೇಳಿಕೆ ಮೇರೆಗೆ ವಿಷಕಾರಿ ವಸ್ತುವಿನ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಇಲಿ ಪಾಷಾಣ ಸಿಂಪಡಿಸಿದ್ದ ಮಂಜೇಗೌಡ ಹಾಗೂ ವಿದ್ಯಾರ್ಥಿ ನಿಲಯದ ವ್ಯವಸ್ಥಾಪಕ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.