ಹಸಿದವರಿಗೆ ಅನ್ನ ನೀಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿ : ಮಾಜಿ ಸಂಸದ ಡಿ.ಕೆ.ಸುರೇಶ್

| Published : Nov 10 2024, 01:38 AM IST / Updated: Nov 10 2024, 04:46 AM IST

ಹಸಿದವರಿಗೆ ಅನ್ನ ನೀಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿ : ಮಾಜಿ ಸಂಸದ ಡಿ.ಕೆ.ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

6 ಕೋಟಿ ಜನರು ಆಶೀರ್ವಾದ ಮಾಡಿರುವ ಕಾಂಗ್ರೆಸ್ ಸರ್ಕಾರವನ್ನು ತೇಗಿತೀನಿ ಅಂತಿದ್ದೀರಲ್ಲ, ಇದು ನಾಡಿನ ಜನತೆಗೆ ಮಾಡುವ ಅಪಮಾನ. ಏನೇ ಆದರೂ ಈ ಸರ್ಕಾರ ತೆಗೆಯಲು ಸಾಧ್ಯವಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ.

 ಚನ್ನಪಟ್ಟಣ : 6 ಕೋಟಿ ಜನರು ಆಶೀರ್ವಾದ ಮಾಡಿರುವ ಕಾಂಗ್ರೆಸ್ ಸರ್ಕಾರವನ್ನು ತೇಗಿತೀನಿ ಅಂತಿದ್ದೀರಲ್ಲ, ಇದು ನಾಡಿನ ಜನತೆಗೆ ಮಾಡುವ ಅಪಮಾನ. ಏನೇ ಆದರೂ ಈ ಸರ್ಕಾರ ತೆಗೆಯಲು ಸಾಧ್ಯವಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ.

ಹುಣಸನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಿಗಳ ಸಮಾಜದ ಸಮಾವೇಶದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣಕ್ಕೆ ಕುಮಾರಸ್ವಾಮಿ, ದೇವೇಗೌಡರ ಕೊಡುಗೆ ಏನು? ಎಷ್ಟು ಕಾಮಗಾರಿಗಳಿಗೆ ಬಂದು ಅವರು ಟೇಪ್ ಕಟ್ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ದೇವೇಗೌಡರ ಮೇಲಿನ ಅಭಿಮಾನದಿಂದ ವರದೇಗೌಡರು ಇಗ್ಗಲೂರು ಡ್ಯಾಂಗೆ ಅವರ ಹೆಸರಿಟ್ಟರು ಅಷ್ಟೇ ವಿನಃ ಅದರಲ್ಲಿ ದೇವೇಗೌಡರದ್ದು ಏನೂ ಇಲ್ಲ. ಡ್ಯಾಂಗೆ ಟೇಪ್ ಕಟ್ ಮಾಡಲು ಬಂದಿದ್ದು ಬಿಟ್ಟರೆ ನೀರಾ ಗಲಾಟೆ ಸಮಯದಲ್ಲಿ ಬಂದು ಪುಟ್ಟಣ್ಣನ ಮೇಲೆ ಕೇಸ್ ಹಾಕಿಸಿ ಹೋದರು. ಅದು ಬಿಟ್ಟರೆ ಕ್ಷೇತ್ರಕ್ಕೆ ಅವರು ಎಂದಾದರೂ ಬಂದು ಯಾವುದಾದರೂ ಟೇಪ್ ಕಟ್ ಮಾಡಿದ್ದಾರೆಯೇ ಎಂದರು.

ಹಿರಿಯರು ಎಂದು ಗೌರವ ಕೊಟ್ಟರೆ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಚನ್ನಪಟ್ಟಣದ ಜನ ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಆಶೀರ್ವಾದ ಮಾಡಿದರು. ಆದರೆ ಒಮ್ಮೆಯೂ ಕಷ್ಟ ಕೇಳಲು ಜನರ ಬಳಿ ಬರಲಿಲ್ಲ. ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಎಲ್ಲಾ ಜಾತಿ ಜನಾಂಗದವರಿಗೆ ತಿಂಗಳಿಗೆ ಎರಡು ಸಾವಿರ ರು ನೀಡುತ್ತಿರುವುದನ್ನು ಮೈತ್ರಿ ಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ ಎಂದರು.

ಚನ್ನಪಟ್ಟಣದಲ್ಲಿ ರಂಗೇರಿದ ಚುನಾವಣಾ ಕಣ

ಚನ್ನಪಟ್ಟಣ: ಬಹಿರಂಗ ಪ್ರಚಾರಕ್ಕೆ ಇನ್ನೆರಡು ದಿನ ಬಾಕಿಯಿದ್ದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರದಲ್ಲಿ ತೊಡಗಿದೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರನ್ನು ಗೆಲ್ಲಿಸಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಸರ್ಕಾರಕ್ಕೆ ಮತ್ತಷ್ಟು ಬಲ ತುಂಬಲು ಕಾಂಗ್ರೆಸ್ ನ ಹಲವಾರು ನಾಯಕರು ಕ್ಷೇತ್ರದಲ್ಲಿ ಬೀಡುಬಿಟ್ಟು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಸಚಿವರಾದ ರಾಮಲಿಂಗರೆಡ್ಡಿ, ಎನ್.ಎಸ್ ಭೋಸರಾಜ್, ಶಾಸಕರಾದ ಎ.ಸಿ.ಶ್ರೀನಿವಾಸ್, ಶರತ್ ಬಚ್ಚೇಗೌಡ, ನಂಜೇಗೌಡ, ಮಾಜಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಮಾಜಿ ಸಚಿವ ಎಚ್.ಎಮ್.ರೇವಣ್ಣ, ಹಿರಿಯ ಕಾಂಗ್ರೆಸ್ ನಾಯಕರಾದ ಉಗ್ರಪ್ಪ, ಬಿ.ಎಲ್.ಶಂಕರ್, ಪ್ರೋ. ಎಂವಿ.ರಾಜೀವ್ ಗೌಡ, ಹನುಮಂತರಾಯಪ್ಪ, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕೈ ಪದ್ಮಶಾಲಿ, ನಟ ಮದನ್ ಪಟೇಲ್ ಸೇರಿದಂತೆ ಹಲವು ನಾಯಕರು ಕ್ಷೇತ್ರದ ನಾನಾ ಭಾಗಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಕಾಂಗ್ರೆಸ್ ಪರ ಅಲೆ: ಬೋಸರಾಜು

ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎನ್.ಎಸ್.ಬೋಸರಾಜು, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.