ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲು ಕಾರಣರಾದವರನ್ನು ಕೈಬಿಟ್ಟು ಎನ್ಡಿಎ ಅಭ್ಯರ್ಥಿ ರಂಗನಾಥ್ ಅವರನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಶನಿವಾರದಲ್ಲಿ ಮಲ್ಲೇಶ್ವರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಬಿಜೆಪಿ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ.
ಪವಿತ್ರವಾದ ಶಿಕ್ಷಣ ಕ್ಷೇತ್ರಕ್ಕೆ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಎನ್ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ ಅವರಾಗಿದ್ದು, ಅವರಿಗೆ ಮತ ಕೊಟ್ಟು ಆಶೀರ್ವದಿಸಬೇಕು ಎಂದು ಹೇಳಿದರು.
ಎ.ಪಿ. ರಂಗನಾಥ್ ಅವರು ಒಬ್ಬ ಕ್ರಿಯಾಶೀಲ ರಾಜಕಾರಣಿಯಾಗಿದ್ದಾರೆ. ರಾಜಕಾರಣಿ ಎನ್ನುವುದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ತಮ್ಮದೇ ಆದ ಸೇವೆ ಮಾಡುತ್ತಿದ್ದಾರೆ. ಜತೆಗೆ ವಕೀಲರು ಆಗಿದ್ದಾರೆ.
ಉಪ ಚುನಾವಣೆಗೆ ಕಾರಣಕರ್ತರು ಯಾರು? ಎಷ್ಟು ಬಾರಿ ತಮ್ಮ ಪಕ್ಷವನ್ನು ಬದಲಿಸಿದ್ದಾರೆ? ಅಥವಾ ಅವರು ವಿಧಾನಪರಿಷತ್ ಸದಸ್ಯರಾಗಿ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.
ಅವರ ಕೊಡುಗೆ ಶೂನ್ಯವಾಗಿದೆ. ಹೀಗಾಗಿ ಎನ್ಡಿಎ ಅಭ್ಯರ್ಥಿಯನ್ನು ಗೆಲ್ಲಿಸಲು ನಾವೆಲ್ಲಾ ಶ್ರಮಪಡಬೇಕು ಎಂದರು.
ಮಾಜಿ ಕೆ.ಎಸ್.ಈಶ್ವರಪ್ಪ ಅವರು ತಮ್ಮ ವಿರುದ್ಧದ ಪ್ರಕರಣವನ್ನು ಎದುರಿಸುತ್ತಾರೆ. ಆದರೆ, ತಾವೇನು ಹೇಳಿದ್ದಾರೆ ಎಂಬುದನ್ನು ಸಂಸದ ಡಿ.ಕೆ.ಸುರೇಶ್ ಅವರು ನೆನಪು ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಎನ್ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ ಪರ ಮಲ್ಲೇಶ್ವರ ವಿದ್ಯಾ ಮಂದಿರ ಸ್ಕೂಲ್, ಎಂಎಲ್ಎ ಕಾಲೇಜಿನಲ್ಲಿ ಪ್ರಚಾರ ನಡೆಸಲಾಯಿತು. ಈ ವೇಳೆ ಸಂಸದ ಡಿ.ವಿ ಸದಾನಂದ ಗೌಡ, ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ಹರೀಶ್, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಉಪಸ್ಥಿತರಿದ್ದರು.