ಕನ್ನಡಪ್ರಭ ವಾರ್ತೆ ಮದ್ದೂರು ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಕಂಡುಬಂದಿರುವ ಯುಜಿಡಿ ಸಂಪರ್ಕ ಹಾಗೂ ತ್ಯಾಜ್ಯನೀರು ಸಮಸ್ಯೆಯನ್ನು ಅತಿ ಶೀಘ್ರ ಪೂರ್ಣಗೊಳಿಸದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.ವಿಶ್ವೇಶ್ವರಯ್ಯ ನಗರ ಬಡಾವಣೆಯಲ್ಲಿ ಯುಜಿಡಿ ಸಂಪರ್ಕದ ತ್ಯಾಜ್ಯನೀರು ರಸ್ತೆ ಮತ್ತು ನಾಲೆಗೆ ಸೇರುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ ಹಾಗೂ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಇಲಾಖೆ ಅಧಿಕಾರಿಗಳೊಟ್ಟಿಗೆ ಸ್ಥಳ ಪರಿಶೀಲನೆ ನಡೆಸಿದರು.ವಿಶ್ವೇಶ್ವರಯ್ಯನಗರ, ಸಿದ್ದಾರ್ಥನಗರ, ಚನ್ನೇಗೌಡ ಬಡಾವಣೆ, ರಾಂರಹೀಂ ನಗರ, ಲೀಲಾವತಿ ಬಡಾವಣೆ ಸೇರಿದಂತೆ ಇನ್ನಿತರ ಬಡಾವಣೆಗಳಲ್ಲಿ ಯು.ಜಿ.ಡಿ ತ್ಯಾಜ್ಯನೀರು ರಸ್ತೆಯಲ್ಲೇ ಹರಿಯುತ್ತಿರುವ ಜತೆಗೆ ಕೆಮ್ಮಣ್ಣುನಾಲೆಗೆ ಸೇರುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳದಲ್ಲಿದ್ದ ಎಇಇ ನಡಾಫ್ ಅವರನ್ನು ತರಾಟೆಗೆ ತೆಗೆದುಕೊಂಡರು.ಪಟ್ಟಣ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಯು.ಜಿ.ಡಿ ಸಂಪರ್ಕದ ಪೈಪ್‌ಲೈನ್ ಕಾಮಗಾರಿ ಮುಂದಾಲೋಚನೆ ಮತ್ತು ಶಾಶ್ವತ ಯೋಜನೆಯನ್ನು ರೂಪಿಸದ ಪರಿಣಾಮ ಇಷ್ಟೆಲ್ಲಾ ಅದ್ವಾನಗಳಿಗೆ ಕಾರಣವಾಗಿದೆ. ಅಧಿಕಾರಿಗಳಿಗೆ ಹಲವಾರು ಬಾರಿ ಸೂಚನೆ ನೀಡಿದ್ದರೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಕಿಡಿಕಾರಿದರು.ಈಗಾಗಲೇ ನಗರ ವ್ಯಾಪ್ತಿಯಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂಬ ನಿಟ್ಟಿನಲ್ಲಿ ಮತ್ತು ಕೆಮ್ಮಣ್ಣುನಾಲೆಗೆ ತ್ಯಾಜ್ಯನೀರು ಸೇರದಂತೆ ಕ್ರಮ ವಹಿಸಲು ಅಗತ್ಯವಿರುವೆಡೆ ಮ್ಯಾನ್ಯುವಲ್ ಮತ್ತು ಬಾಕ್ಸ್ ಚರಂಡಿಗಳನ್ನು ನಿರ್ಮಿಸಲು ಸೂಚನೆ ನೀಡಲಾಗಿದೆ. ಮುಂದಿನ 15 ದಿನದೊಳಗಾಗಿ ಕಾಮಗಾರಿ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಈ ಹಿಂದೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಸಮರ್ಪಕ ಮತ್ತು ಯೋಜನೆಗನುಗುಣವಾಗಿ ಕಾರ್ಯ ನಿರ್ವಹಿಸದೆ ಕೇವಲ ಬೇಕಾಬಿಟ್ಟಿ ಕಾಮಗಾರಿ ಕೈಗೊಂಡಿದ್ದು, ಅಧಿಕಾರಿಗಳು ನಿಗಧಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ವಿಳಂಭ ಧೋರಣೆ ಅನುಸರಿಸಿದರೆ ತಲೆದಂಡಕ್ಕೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು.ಈ ವೇಳೆ ನಗರಸಭೆ ಮಾಜಿ ಸದಸ್ಯ ಸಿದ್ಧರಾಜು, ಕಾವೇರಿ ನೀರಾವರಿ ನಿಗಮದ ಎಇಇ ನಾಗರಾಜು, ಲೋಕೋಪಯೋಗಿ ಇಲಾಖೆಯ ಎಇಇ ದೇವಾನಂದ, ಒಳಚರಂಡಿ ವಿಭಾಗದ ಎಇಇ ನಡಾಫ್, ಮುಖಂಡರಾದ ಪಿ.ಕುಶಾಲ್‌ಗೌಡ, ನಿತಿನ್‌ಗೌಡ, ಶರತ್, ರಾಜೇಗೌಡನದೊಡ್ಡಿ ಶಿವು ಇತರರಿದ್ದರು.