ನಾವು ಎಚ್‌ಎಎಲ್ಬಿಟ್ಟುಕೊಡಲ್ಲ: ಡಿಕೆಶಿ

| Published : May 28 2025, 02:05 AM IST

ಸಾರಾಂಶ

ರಾಜ್ಯದ ಹೆಮ್ಮೆಯ ಹಿಂದೂಸ್ತಾನ್‌ ಏರೋನ್ಯಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌) ಘಟಕ ಆಂಧ್ರಕ್ಕೆ ಸ್ಥಳಾಂತರ ಬೇಡಿಕೆ ವಿಚಾರವಾಗಿ ನಮ್ಮ ರಾಜ್ಯದ ಸಂಸದರು, ಕೇಂದ್ರದ ಸಚಿವರು ಧ್ವನಿ ಎತ್ತಬೇಕು. ನಾವು ಯಾವುದೇ ಕಾರಣಕ್ಕೂ ಎಚ್‌ಎಎಲ್‌ ಬಿಟ್ಟು ಕೊಡುವುದಿಲ್ಲ. ಅವುಗಳನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

- ನಾಯ್ಡು ಹೇಳಿಕೆಗೆ ಡಿಸಿಎಂ ತಿರುಗೇಟು

- ಕೇಂದ್ರ ಸಚಿವರೂ ದನಿ ಎತ್ತಲಿ---

- ಆಂಧ್ರಕ್ಕೆ ವಿಮಾನ ಘಟಕ ಸ್ಥಳಾಂತರಕ್ಕೆ ನಾಯ್ಡು ಯತ್ನ

- ಇದಕ್ಕೆ ಡಿಕೆಶಿ ಕಿಡಿ । ನಮ್ಮಲ್ಲೇ ಉಳಿಸಿಕೊಳ್ಳುವ ವಾಗ್ದಾನ

- ಎಚ್‌ಎಎಲ್‌ ಸೇರಿ ನವರತ್ನಗಳು ನಮ್ಮ ಅಸ್ಮಿತೆ ಪ್ರತೀಕ

- ಬೇಕಿದ್ರೆ ಅವರು ಪ್ರತ್ಯೇಕ ಘಟಕ ನಿರ್ಮಿಸಲಿ: ಡಿಸಿಎಂ

===

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಹೆಮ್ಮೆಯ ಹಿಂದೂಸ್ತಾನ್‌ ಏರೋನ್ಯಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌) ಘಟಕ ಆಂಧ್ರಕ್ಕೆ ಸ್ಥಳಾಂತರ ಬೇಡಿಕೆ ವಿಚಾರವಾಗಿ ನಮ್ಮ ರಾಜ್ಯದ ಸಂಸದರು, ಕೇಂದ್ರದ ಸಚಿವರು ಧ್ವನಿ ಎತ್ತಬೇಕು. ನಾವು ಯಾವುದೇ ಕಾರಣಕ್ಕೂ ಎಚ್‌ಎಎಲ್‌ ಬಿಟ್ಟು ಕೊಡುವುದಿಲ್ಲ. ಅವುಗಳನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್‌ಎಎಲ್‌ ಅನ್ನು ಯಾವ ಬಿಜೆಪಿ ಸರ್ಕಾರವೂ ನೀಡಿದ್ದಲ್ಲ. ಮಾಜಿ ಪ್ರಧಾನಮಂತ್ರಿ ಜವಹಾರ್ ಲಾಲ್ ನೆಹರು ಅವರು ಈ ನಾಡಿನ ಸಾಮರ್ಥ್ಯ ಗಮನಿಸಿ ಬೆಂಗಳೂರಿನಲ್ಲಿ ಎಚ್‌ಎಎಲ್ ಘಟಕ ಸ್ಥಾಪಿಸಿದ್ದಾರೆ. ಬೆಂಗಳೂರಿನ ಯಲಹಂಕ ಮತ್ತು ಎಚ್‌ಎಎಲ್‌ನಲ್ಲಿ ಈಗಾಗಲೇ ವಾಯುಪಡೆಯ ನಿಲ್ದಾಣಗಳಿವೆ. ಹೀಗಾಗಿ, ಎಚ್‌ಎಎಲ್‌ ನಮ್ಮ ನಗರದಲ್ಲಿ ಮುಂದುವರೆಯಲು ಸೂಕ್ತ ವಾತಾವರಣ ಇದೆ ಎಂದರು.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ರಾಜಕೀಯವಾಗಿ ಇಡುವ ಬೇಡಿಕೆಗೆ ನಮ್ಮ ಆಕ್ಷೇಪ ಇಲ್ಲ. ಅವರು ಹೊಸದಾಗಿ ಸ್ಥಾಪಿಸಿಕೊಳ್ಳಲಿ. ಆದರೆ, ನಮ್ಮ ರಾಜ್ಯದಲ್ಲಿ ಮೊದಲಿನಿಂದಲೂ ಇರುವುದನ್ನು ನಾವು ಉಳಿಸಿಕೊಳ್ಳುತ್ತೇವೆ. ಎಚ್‌ಎಎಲ್ ಸೇರಿ ನವರತ್ನ ಕಂಪನಿಗಳು ನಮ್ಮ ಸ್ವಾಭಿಮಾನವಾಗಿವೆ. ರಾಜ್ಯದ ಯಾವುದೇ ಕಂಪನಿಯನ್ನು ಯಾವುದೇ ಕಾರಣಕ್ಕೂ ನಾವು ಬಿಟ್ಟು ಕೊಡುವುದಿಲ್ಲ. ಅವುಗಳನ್ನು ಉಳಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.