ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಮಂತ್ರಾಕ್ಷತೆಯಿಂದ ಅಯೋಧ್ಯೆಯ ರಾಮಮಂದಿರವನ್ನು ಚಿತ್ರಿಸುವ ಮೂಲಕ ಪಟ್ಟಣದ ಯುವ ಸಾಹಿತಿ, ರಾಮಭಕ್ತ ವಿನೋದ್ ವಾಲ್ಮೀಕಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಸುಮಾರು ೫೦೦ ವರ್ಷಗಳ ಸುದೀರ್ಘ ಸಂಘರ್ಷದ ಫಲವಾಗಿ ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಶೀಘ್ರದಲ್ಲಿಯೇ ಲೋಕಾರ್ಪಣೆಯಾಗುತ್ತಿದೆ.
ಇಂಥಹ ಸಂದರ್ಭದಲ್ಲಿ ಪ್ರತೀ ಮನೆಗೂ ಅಯೋಧ್ಯೆಯಿಂದ ತಂದಿರುವ ಮಂತ್ರಾಕ್ಷತೆಯನ್ನು ತಲುಪಿಸುವ ಕಾರ್ಯವನ್ನು ವಿವಿಧ ಸಂಘ-ಸಂಸ್ಥೆ, ಹಿಂದೂಪರ ಸಂಘಟನೆಗಳು ಸೊರಬ ಪಟ್ಟಣದ ಪ್ರತೀ ವಾಡ್ನಲ್ಲಿಯೂ ಹಮ್ಮಿಕೊಂಡಿವೆ. ಇದು ಜ.೧೫ರವರೆಗೆ ನಡೆಯಲಿದೆ.
ಅಯೋಧ್ಯೆಯಿಂದ ತಂದಿರುವ ಪವಿತ್ರ ಮಂತ್ರಾಕ್ಷತೆಯಿಂದ ಕವಿ ವಿನೋದ್ ವಾಲ್ಮೀಕಿ ತಮ್ಮ ಮನೆಯ ಡೈನಿಂಗ್ ಟೇಬಲ್ನ ಮೇಲೆ ರಾಮಮಂದಿರ ಚಿತ್ರವನ್ನು ರಚಿಸಿದ್ದಾರೆ.
ಮಂತ್ರಾಕ್ಷತೆ ನೆಲಕ್ಕೆ ಬಿದ್ದು ಅಪವಿತ್ರ ಆಗಬಾರದು ಎನ್ನುವ ದೃಷ್ಠಿಯಿಂದ ಯಾರನ್ನೂ ಸಹಾಯಕ್ಕೆ ಬಳಸದೇ ಒಬ್ಬರೇ ರಚಿಸಿದ್ದಾರೆ. ಮಂಗಳವಾರ ರಾತ್ರಿ ೮ ಗಂಟೆಯ ಸುಮಾರಿಗೆ ರಾಮಮಂದಿರ ಬಿಡಿಸಲು ತಯಾರಿ ನಡೆಸಿ ಬುಧವಾರ ಬೆಳಿಗ್ಗೆ ೩ ಗಂಟೆಯ ಹೊತ್ತಿಗೆ ಪೂರ್ಣಗೊಳಿಸಿ, ಸುಮಾರು ೭ ಗಂಟೆ ಸಮಯವನ್ನು ತೆಗೆದುಕೊಂಡಿದ್ದಾರೆ. ವಾಪಾಸ್ಸು ತಲುಪಿಸುವ ದೃಷ್ಠಿಯಿಂದ ಮಂದಿರ ನಿರ್ಮಾಣಕ್ಕೆ ಬಳಸಿದ ಮಂತ್ರಾಕ್ಷತೆಯನ್ನು ಒಟ್ಟುಗೂಡಿಸಿದ್ದಾರೆ.
ಟೇಬಲ್ ಮೇಲೆ ರಚಿಸುವಾಗ ಬೇರೆ ಅಕ್ಕಿ,ಯಾವುದೇ ಅಂಟು ಬಳಸಿಲ್ಲ ಅಥವಾ ಕೃತಕ ಪರಿಕರಗಳನ್ನು ಬಳಸದೇ ರಾಮ ಜಪ ನಡೆಸಿ ಬೆರಳುಗಳಿಂದ ಒಂದೊಂದೇ ಮಂತ್ರಾಕ್ಷತೆ ಬಳಸಿ ಜೋಡಿಸಿದ್ದಾರೆ. ಇದು ಪ್ರತಿ ಹಿಂದೂ ಮತ್ತು ಶ್ರೀ ರಾಮ ಭಕ್ತರನ್ನು ಜೋಡಿಸುವುದು ಉದ್ದೇಶವಾಗಿದೆ ಎಂದು ಚಿತ್ರ ರಚನೆಕಾರ ವಿನೋದ್ ವಾಲ್ಮೀಕಿ ತಿಳಿಸಿದ್ದಾರೆ.